ನವದೆಹಲಿ, ಜುಲೈ 15: ಭಾರತದ ಬ್ಯಾಡ್ಮಿಂಟನ್ ತಾರೆ ವಿಶ್ವ ಚಾಂಪಿಯನ್ ಪಿವಿ ಸಿಂಧು ಕೊರೊನಾವೈರಸ್ ತನ್ನ ಒಲಿಂಪಿಕ್ಸ್ ಸಿದ್ಧತೆಯ ಮೇಲೆ ಯಾವುದೇ ರೀತಿಯ ನಕಾರಾತ್ಮಕ ಪರಿಣಾಮವನ್ನು ಬೀರಿಲ್ಲ ಎಂದಿದ್ದಾರೆ. ಈ ಅವಧಿ ತನಗೆ ತನ್ನ ಕೌಶಲ್ಯ ಹಾಗೂ ತಾಂತ್ರಿಕ ಅಂಶಗಳತ್ತ ಹೆಚ್ಚಿನ ಗಮನಹರಿಸಲು ಮತ್ತಷ್ಟು ಸಮಯವನ್ನು ನೀಡಿತು ಎಂದಿದ್ದಾರೆ.
ಪಿವಿ ಸಿಂಧು 2016ರ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಮಿಂಚಿದ್ದರು. ಆದರೆ ಕಳೆದ ವರ್ಷ ಕೊರೊನಾವೈರಸ್ನ ಕಾರಣದಿಂದಾಗಿ ವಿಶ್ವದ ಎಲ್ಲಾ ಕ್ರೀಡೆಗಳು ಕೂಡ ಸ್ಥಗಿತವಾಗಿತ್ತು. ಹೀಗಾಗಿ ಟೋಕಿಯೋ ಒಲಿಂಪಿಕ್ಸ್ನ ಸಿದ್ಧತೆಗೆ ಅಡ್ಡಿಯಾಗಿತ್ತು. ಆದರೆ ಈ ಅವಧಿ ತನಗೆ ಆಶಿರ್ವಾದದಂತೆ ಭಾಸವಾಗಿತ್ತು ಎಂದು ಪಿವಿ ಸಿಂಧು ಹೇಳಿಕೊಂಡಿದ್ದಾರೆ.
"ನನ್ನ ಪ್ರಕಾರ ಕೊರೊನಾ ಸಂಕ್ರಾಮಿಕ ರೋಗದ ಕಾರಣದಿಂದಾಗಿ ದೊರೆತ ವಿರಾಮ ತುಂಬಾ ಉಪಯುಕ್ತವಾಯಿತು. ಯಾಕೆಂದರೆ ನಾನು ಹೆಚ್ಚು ಕಲಿಯಲು ಮತ್ತು ನನ್ನ ತಂತ್ರ ಮತ್ತು ಕೌಶಲ್ಯಗಳ ಬಗ್ಗೆ ಹೆಚ್ಚು ಗಮನಹರಿಸುವ ಅವಶ್ಯಕತೆಯಿತ್ತು. ಈ ಅವಧಿ ಅದಕ್ಕೆ ಸಹಾಯ ಮಾಡಿತ್ತು. ಹಾಗಾಗಿ ಅದು ಖಂಡಿತವಾಗಿಯೂ ಸಹಾಯ ಮಾಡಿದೆ ಎಂದು ನಾನು ಹೇಳುತ್ತೇನೆ" ಎಂದು ಪಿವಿ ಸಿಂಧು ಲಾಕ್ಡೌನ್ ಅವಧಿಯ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭದಲ್ಲಿ 1000ಕ್ಕೂ ಕಡಿಮೆ ಮಂದಿ ಭಾಗಿ ಸಾಧ್ಯತೆ
"ಈ ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಅವಧಿ ಒಲಿಂಪಿಕ್ಸ್ನ ಸಿದ್ಧತೆಯ ದೃಷ್ಟಿಯಿಂದ ನನಗೆ ಹಿನ್ನಡೆಯನ್ನು ಉಂಟು ಮಾಡಿಲ್ಲ. ಯಾಕೆಂದರೆ ನನಗೆ ಈ ಅವಧಿಯಲ್ಲಿ ಉತ್ತಮ ಸಮಯ ಸಿಕ್ಕಿತ್ತು. ಸಾಮಾನ್ಯ ಟೂರ್ನಮೆಂಟ್ಗಳನ್ನು ಮುಗಿಸಿ ಬಂದು ಅಭ್ಯಾಸ ನಡೆಸಿದಂತೆಯೇ ಇತ್ತು" ಎಂದಿದ್ದಾರೆ ಪಿಸಿ ಸಿಂಧು.
"ಬಹುತೇಕ ಸಂದರ್ಭಗಳಲ್ಲಿ ಅಭ್ಯಾಸವನ್ನು ನಡೆಸಲು ಹೆಚ್ಚಿನ ಸಮಯಾವಕಾಶಗಳು ದೊರೆಯುವುದಿಲ್ಲ. ಬಹುಶಃ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್ನ ಸಿದ್ಧತೆಗಾಗಿ ಸಂಪೂರ್ಣ ಸಮಯವನ್ನು ಪಡೆದುಕೊಂಡಿದ್ದೆ. ಹಾಗಾಗಿ ಇದು ನನ್ನ ಒಲಿಂಪಿಕ್ಸ್ ಸಿದ್ಧತೆಗೆ ಹಿನ್ನಡೆಯಾಗುತ್ತದೆ ಎಂದು ನಾನು ಹೇಳುವುದಿಲ್ಲ. ಹಾಗೆ ಹೇಳುವುದಕ್ಕೆ ಸಾಧ್ಯವೇ ಇಲ್ಲ" ಎಂದು ಟೋಕಿಯೋ ಒಲಿಂಪಿಕ್ಸ್ನಲ್ಲಿಯೂ ಪದಕದ ಭರವಸೆ ಮೂಡಿಸಿರುವ ಪಿವಿ ಸಿಂಧು ಹೇಳಿದ್ದಾರೆ.