ಚಿತ್ರದುರ್ಗ : 7ನೇ ಫೆಡರೇಷನ್ ಕಪ್ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ತಂಡ ಗೆಲುವು ಸಾಧಿಸಿದೆ. ತಮಿಳುನಾಡು ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ 35-31 ಹಾಗೂ 35-25 ನೇರ ಸೆಟ್ ಗಳಿಂದ ಅಮೋಘ ಜಯಗಳಿಸಿ ಪ್ರಶಸ್ತಿ ಮುಡಿಗೆರಿಸಿಕೊಂಡಿದೆ. ಪುರುಷ ವಿಭಾಗದಲ್ಲಿ ಭಾರತೀಯ ರೈಲ್ವೆ ತಂಡ ಹಾಗೂ ಕರ್ನಾಟಕ ತಂಡಗಳು ಪ್ರಥಮ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದು ಜಿದ್ದಾಜಿದ್ದಿನ ಹೋರಾಟದಲ್ಲಿ ಕರ್ನಾಟಕ ತಂಡದ ವಿರುದ್ಧ ಭಾರತೀಯ ರೈಲ್ವೆ ತಂಡ ಭರ್ಜರಿ ಜಯಗಳಿಸಿದೆ. ಈ ಮೂಲಕ ರೈಲ್ವೇ ತಂಡ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರ ಸ್ಟಾರ್ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಚಿತ್ರದುರ್ಗ, ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್, ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಕಾಲ ಈ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಭಾನುವಾರ ರಾತ್ರಿ ಅಂತಿಮಗೊಂಡಿತು.
ಥಾಮಸ್ ಕಪ್: ಫೈನಲ್ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ
ಮಹಿಳೆಯರ ವಿಭಾಗದಲ್ಲಿ ತಮಿಳುನಾಡು ಎರಡನೇ ಸ್ಥಾನ ಪಡೆದರೇ ಕೇರಳ ತಂಡ ತೃತೀಯ ಬಹುಮಾನ ಪಡೆಯಿತು. ಆಂದ್ರಪ್ರದೇಶ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಇತ್ತ ಪುರುಷರ ವಿಭಾಗದಲ್ಲಿ ತಮಿಳುನಾಡು ದ್ವಿತೀಯ ಸ್ಥಾನ ಪಡೆದರೆ, ಕರ್ನಾಟಕ ತಂಡ ತೃತೀಯ ಸ್ಥಾನ ತನ್ನದಾಗಿಸಿಕೊಂಡಿತು. ನಾಲ್ಕನೇ ಸ್ಥಾನ ಆಂಧ್ರಪ್ರದೇಶದ ಪಾಲಾಯಿತು. ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಮಹಿಳೆಯರ ವಿಭಾಗದಲ್ಲಿ ಕರ್ನಾಟಕ ತಂಡದ ನಾಯಕಿ ವಿಜಯಲಕ್ಷ್ಮಿ ಬೆಸ್ಟ್ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾದರೆ, ಪುರುಷರ ವಿಭಾಗದಲ್ಲಿ ತಮಿಳುನಾಡಿನ ವರದರಾಜು ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದುಕೊಂಡರು.
ಪಂದ್ಯದಲ್ಲಿ ಗೆದ್ದ ಕ್ರೀಡಾಪಟುಗಳಿಗೆ ಕರ್ನಾಟಕ ರಾಜ್ಯ ಪ್ರವರ್ಗ-1 ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಿಟಿ ಶ್ರೀನಿವಾಸ್, ಸ್ಟಾರ್ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಂಸ್ಥಾಪಕರಾದ ಶಕೀಲ್ ನವಾಜ್, ಡಿಸಿಪಿ ಮಂಜುನಾಥ್ ಬಾಬು, ಅಮರೇಶ್ ಹಾಗೂ ಸ್ಟಾರ್ ಬಾಲ್ ಬ್ಯಾಡ್ಮಿಂಟನ್ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ವಿತರಣೆ ಮಾಡಿದರು.
16 ತಂಡಗಳು ಭಾಗಿ : ಮೂರು ದಿನದ ಹೊನಲು ಬೆಳಕಿನ ಫೆಡರೇಷನ್ ಕಪ್ ರಾಷ್ಟ್ರೀಯ ಪುರುಷ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎರಡು ವಿಭಾಗಗಳಿಂದ ಒಟ್ಟು ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಪುದುಚೇರಿ, ತಮಿಳುನಾಡು, ತೆಲಂಗಾಣ, ಭಾರತೀಯ ರೈಲ್ವೆ, ಕೆನರಾ ಬ್ಯಾಂಕ್ ಸೇರಿದಂತೆ 16 ತಂಡಗಳು ಭಾಗವಹಿಸಿದ್ದವು.
ವಿವಿಧತೆಯಲ್ಲಿ ಏಕತೆ ಸಾರೋಣ : ಹಿರಿಯೂರು ನಗರದಲ್ಲಿ ಬಾಲ್ ಬ್ಯಾಡ್ಮಿಂಟನ್, ವಾಲಿಬಾಲ್, ಖೋಖೋ, ಹೀಗೆ ಹಲವಾರು ಕ್ರೀಡೆಗಳನ್ನು ಏರ್ಪಡಿಸುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ತೋರಿಸುತ್ತಿದ್ದೇವೆ, ಇದೇ ಹಿರಿಯೂರಿನ ವಿಶಿಷ್ಟತೆ ಎಂದರೆ ತಪ್ಪಾಗಲಾರದು ಎಂದು ಸ್ಟಾರ್ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಸಂಸ್ಥಾಪಕರಾದ ಶಕೀಲ್ ನವಾಜ್ ಹೇಳಿದರು. ಮುಂದಿನ ದಿನಗಳಲ್ಲಿ ಯಾವುದೇ ಕ್ರೀಡೆ ಆದರೂ ಸರಿಯೇ ನಾವೆಲ್ಲರೂ ಸೇರಿಕೊಂಡು ನಮ್ಮೂರಿನ ಗೌರವವನ್ನು ಉಳಿಸೋಣ ಎಂದರು. ಈ ಪಂದ್ಯಾವಳಿಯಲ್ಲಿ ಗೆದ್ದ ಎಲ್ಲಾ ತಂಡದ ಆಟಗಾರರಿಗೆ ಶುಭ ಹಾರೈಸಿದರು.