ಭಾರತದಲ್ಲಿ ಎರಡನೇ ಅಲೆಯ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿ ಹೆಚ್ಚಾದ ಹಿನ್ನೆಲೆಯಲ್ಲಿ ಮಲೇಶಿಯಾ ಸರ್ಕಾರ ಭಾರತದಿಂದ ತೆರಳುವ ಪ್ರಯಾಣಿಕರ ಮೇಲೆ ನಿರ್ಬಂಧವನ್ನು ವಿಧಿಸಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಂಡ ಮಲೇಶಿಯಾ ಓಪನ್ನಿಂದ ಅನಿವಾರ್ಯವಾಗಿ ಹೊರಗುಳಿಯಬೇಕಾಗಿದೆ.
ಮೇ 25-30ರ ವರೆಗೆ ಪ್ರತಿಷ್ಟಿತ ಮಲೇಶಿಯಾ ಓಪನ್ ನಿಗದಿಯಾಗಿದೆ. ಆದರೆ ಕಳೆದ ಏಪ್ರಿಲ್ 28ರಿಂದ ಮಲೇಢಶಿಯಾ ಸರ್ಕಾರ ಭಾರತದಿಂದ ತೆರಳುವ ಪ್ರಯಾಣಿಕರ ಮೇಲೆ ನಿರ್ಬಂಧವನ್ನು ವಿಧಿಸಿದೆ. ಹೀಗಾಗಿ ಬ್ಯಾಡ್ಮಿಂಟನ್ ಆಟಗಾರರ ತಂಡದ ಮೇಲೆಯೂ ಇದು ಪರಿಣಾಮವನ್ನು ಬೀರಿದ್ದು ಅನಿವಾರ್ಯವಾಗಿ ಹೊರಗುಳಿಯಬೇಕಾಗಿದೆ.
ಐಪಿಎಲ್ ಸ್ಥಗಿತಕ್ಕೆ ಅಸಲಿ ಕಾರಣ ಮತ್ತು ಪುನಾರಂಭದ ಬಗ್ಗೆ ಗಂಗೂಲಿ ಸುಳಿವು
ಈ ಬಗ್ಗೆ 'ಬ್ಯಾಡ್ಮಿಟನ್ ಅಸೋಸಿಯೇಶನ್ ಆಫ್ ಇಂಡಿಯಾ' ಪ್ರಕಟಣೆಯನ್ನು ಹೊರಡಿಸಿ ಮಾಹಿತಿಯನ್ನು ನೀಡಿದೆ. "ಕ್ರೀಡಾ ಸಚಿವಾಲಯ ವಿದೇಶಾಂಗ ಇಲಾಖೆಯ ಮೂಲಕ ಭಾರತೀಯ ತಂಡ ಟೂರ್ನಮೆಂಟ್ನಲ್ಲಿ ಭಾಗಿಯಾಗಲು ಮಲೇಶಿಯಾ ಅಧಿಕಾರಿಗಳನ್ನು ಸಂಪರ್ಕಿಸಿ ಅನುಮತಿಯನ್ನು ಕೋರಿದೆ. ಆದರೆ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ತಂಡದ ಪ್ರಯಾಣಕ್ಕೆ ಅನುಮತಿಯನ್ನು ನಿರಾಕರಿಸಿರುವುದನ್ನು ಮಲೇಶಿಯಾ ಸರ್ಕಾರ ಭಾರತೀಯ ಹೈಕಮಿಷನರ್ಗೆ ತಿಳಿಸಿದೆ" ಎಂದು ಬಿಎಐ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಟೂರ್ನಿಯಲ್ಲಿ ಭಾರತದ ಅಗ್ರ ಸಿಂಗಲ್ಸ್ ಹಾಗೂ ಡಬಲ್ಸ್ ತಾರೆಯರಾದ, ಪಿವಿ ಸಿಂಧು, ಸೈನಾ ನೆಹ್ವಾಲ್, ಕಿಡಂಬಿ ಶ್ರೀಕಾಂತ್, ಸಾಯಿ ಪ್ರಣೀತ್, ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ ಮತ್ತು ಸಿಕ್ಕಿ ರೆಡ್ಡಿ ಭಾಗಿಯಾಗಬೇಕಾಗಿತ್ತು.