ಮಲೇಶಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯನ್ನು ಅಧಿಕೃತವಾಗಿ ಮುಂದೂಡಲಾಗಿದೆ. ಬ್ಯಾಡ್ಮಿಂಟನ್ ಅಸೊಸಿಯೇಶನ್ ಆಫ್ ಮಲೇಶಿಯಾ ಹಾಗೂ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಚರ್ಚಿಸಿ ಜಂಟಿಯಾಗಿ ಈ ತೀರ್ಮಾನಕ್ಕೆ ಬಂದಿದೆ. ಈ ಪ್ರತಿಷ್ಟಿತ ಟೂರ್ನಿ ಮೇ 25-30ರವರೆಗೆ ನಿಗದಿಯಾಗಿತ್ತು.
ಇದಕ್ಕೂ ಮುನ್ನ ಗುರುವಾರ ಭಾರತ ಈ ಟೂರ್ನಿಯಿಂದ ಅನಿವಾರ್ಯವಾಗಿ ಹೊರಗುಳಿಯುವ ನಿರ್ಧಾರವನ್ನು ಪ್ರಕಟಿಸಿತ್ತು. ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಲೇಶಿಯಾ ಸರ್ಕಾರ ಭಾರತದಿಂದ ಪ್ರಯಾಣಿಸುವುದಕ್ಕೆ ನಿರ್ಬಂಧವನ್ನು ಹೇರಿದೆ. ಹೀಗಾಗಿ ಭಾರತೀಯ ತಂಡವನ್ನು ಕಳುಹಿಸುವ ಪ್ರಯತ್ನ ವಿಫಲವಾದ ನಂತರ ಭಾರತ ಈ ಬಾರಿಯ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿತ್ತು.
ಮಲೇಶಿಯಾದಲ್ಲಿ ಇತ್ತೀಚಿನ ವಾರಗಳಲ್ಲಿ ಕೊರೊನ ಆವೈರಸ್ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದ್ದು ರಾಜಧಾನಿ ಕೌಲಾಲಾಂಪುರದಲ್ಲಿ ಪ್ರಯಾಣ ನಿರ್ಬಂಧವನ್ನು ಕೂಡ ವಿಧಿಸಲಾಗಿದೆ. ಈ ಮಧ್ಯೆ ಟೂರ್ನಿ ನಡೆಸುವುದು ಈ ಸಂದರ್ಭದಲಲಿ ಸೂಕ್ತವಲ್ಲ ಎಂದು ನಿರ್ಧರಿಸಿ ಟೂರ್ನಿಯನ್ನು ಮುಂದೂಡಲಾಗಿದೆ.
"ಆಯೋಜಕರು ಹಾಗೂ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಕಡೆಯಿಂದ ಆಟಗಾರರಿಗೆ ಸುರಕ್ಷಿತ ವಾತಾವರಣದಲ್ಲಿ ಟೂರ್ನಿ ಏರ್ಪಡಿಸುವ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗುತ್ತಿದ್ದು ನಮಗೆ ಬೇರೆ ಆಯ್ಕೆಗಳಿಲ್ಲ. ಹೀಗಾಗಿ ಟೂರ್ನಿಯನ್ನು ಮುಂದೂಡಲಾಗುತ್ತಿದೆ ಎಂದು ಬ್ಯಾಡ್ಮಿಂಟನ್ ಅಸೋಸಿಯೇಶನ್ ಮಲೇಶಿಯಾ ಹಾಗೂ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ ಜಂಟಿ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.