ಐಎಎಸ್ ಅಧಿಕಾರಿಯಾಗಿ ಈ ಸಾಧನೆ ಮಾಡಿದ ಮೊದಲ ಭಾರತೀಯ
ಕಳೆದ ವರ್ಷದ ನಡೆದ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿಯ ಪದಕ ಗೆಲ್ಲುವ ಮೂಲಕ ಸುಹಾಸ್ ಯತಿರಾಜ್ ಐಎಎಸ್ ಹುದ್ದೆಯಲ್ಲಿದ್ದು ಈ ಅತ್ಯುನ್ನತ ಸಾಧನೆ ಮಾಡಿದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸುಹಾಸ್ ತಂದೆ ಯತಿರಾಜ್ ಶಿವಮೊಗ್ಗ ಮೂಲದವರಾಗಿದ್ದು ತಾಯಿ ಜಯಶ್ರೀ ಹಾಸನ ಜಿಲ್ಲೆಯವರಾಗಿದ್ದಾರೆ. ಸುಹಾಸ್ ಯತಿರಾಜ್ ಪತ್ನಿ ರಿತು ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿ ಸಹಾಯಕ ವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಸ್ಎಲ್ 4 ವಿಭಾಗದ ಬ್ಯಾಡ್ಮಿಂಟನ್ನಲ್ಲಿ ಸದ್ಯ ವಿಶ್ವದ ನಂಬರ್ 2 ಬ್ಯಾಡ್ಮಿಂಟನ್ ಆಟಗಾರನಾಗಿರುವ ಸುಹಾಸ್ ಪ್ಯಾರಾಲಿಂಪಿಕ್ಸ್ನಲ್ಲಿ ಇದಕ್ಕೆ ತಕ್ಕನಾದ ಪ್ರದರ್ಶನ ನೀಡಿದ್ದು ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಜಿಲ್ಲಾಧಿಕಾರಿ ಹುದ್ದೆಯಿಂದ ಅರ್ಜುನ ಪ್ರಶಸ್ತಿವರೆಗೆ..
2007ರ ಬ್ಯಾಚ್ನ ಉತ್ತರ ಪ್ರದೇಶ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಸುಹಾಸ್ ನೋಯ್ಡಾದ ಜಿಲ್ಲಾಧಿಕಾರಿಯಾಗಿ ಜವಾಬ್ಧಾರಿ ವಹಿಸಿಕೊಂಡಿದ್ದಾರೆ. ಕೊರೊನಾವೈರಸ್ನ ಉತ್ತುಂಗದ ಕಾಲದಲ್ಲಿ ಜಿಲ್ಲಾಧಿಕಾರಿಯಾಗಿ ಸುಹಾಸ್ ಸಲ್ಲಿಸಿದ ಸೇವೆ ಸಾಕಷ್ಟು ಜನ ಮೆಚ್ಚುಗೆ ಪಡೆದುಕೊಂಡಿತ್ತು. ಫ್ರಂಟ್ಲೈನ್ ವಾರಿಯರ್ ಆಗಿ ಜಿಲ್ಲಾಧಿಕಾರಿ ಸುಹಾಸ್ ಯತಿರಾಜ್ ಅದ್ಭುತವಾಗಿ ಕೋವಿಡ್ ನಿರ್ವಹಣೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಈ ಸಾಧನೆಯ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯಿಂದ ಇಡೀ ದೇಶವೇ ಹೆಮ್ಮೆ ಪಡುವಂತಾಗಿದೆ. ಈ ಸಾಧನೆಗೆ ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ.
ಕರ್ತವ್ಯ ಮತ್ತು ಕ್ರೀಡೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಸುಹಾಸ್
ಕ್ರೀಡಾಪಟುವಾಗಿ ಹಾಗೂ ಐಎಎಸ್ ಅಧಿಕಾರಿಯಾಗಿ ಕರ್ತವ್ಯವನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುವಲ್ಲಿಯೂ ಸುಹಾಸ್ ಯಶಸ್ವಿಯಾಗಿದ್ದಾರೆ. ಕಳೆದ ಆರು ವರ್ಷಗಳಿಂದೀಚೆಗೆ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರನಾಗಿರುವ ಸುಹಾಸ್ ಬಳಿಕ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದು ಸೇವೆ ಸಲ್ಲಿಸುತ್ತಿರುವಂತೆಯೇ ಅಭ್ಯಾಸಕ್ಕೂ ಸಮಯವನ್ನು ನೀಡಿಕೊಂಡು ಬಂದಿದ್ದು ಅವರ ಯಶಸ್ಸಿಗೆ ಕಾರಣವಾಗಿದೆ. ಎರಡು ಜವಾಬ್ಧಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. 38ರ ಹರೆಯದ ಈ ಆಟಗಾರ ಪ್ಯಾರಾಲಿಂಪಿಕ್ಸ್ನಲ್ಲಿ ಪದಕವನ್ನು ಗೆಲ್ಲಲು ನಿತ್ಯವೂ ಎರಡು ಗಂಟೆಗಳ ಸಮಯವನ್ನು ಅಬ್ಯಾಸಕ್ಕಾಗಿ ಮೀಸಲಿಟ್ಟಿದ್ದರು.
ವೃತ್ತಿಪರ ಬ್ಯಾಡ್ಮಿಂಟನ್ ಆಗಿದ್ದೇ ಕುತೂಹಲಕಾರಿ ಸಂಗತಿ
ಬಾಲ್ಯದಿಂದಲೂ ಬ್ಯಾಡ್ಮಿಂಟನ್ ಮೇಲೆ ಹೆಚ್ಚಿನ ಒಲವು ಹೊಂದಿದ್ದ ಸುಹಾಸ್ ಯತಿರಾಜ್ ಐಎಎಸ್ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನವನ್ನು ಮುಂದುವರಿಸಿದ್ದರೂ ಬ್ಯಾಡ್ಮಿಂಟನ್ ಕ್ರೀಡೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ 2016ರಲ್ಲಿ ಉತ್ತರಪ್ರದೇಶದ ಅಜಮ್ಘರ್ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅಲ್ಲಿ ನಡೆದ ಕ್ರೀಡಾಕೂಟವೊಂದರಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಯತಿರಾಜ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಸುಹಾಸ್ ಯತಿರಾಜ್ ಅವರ ಗಮನ ಸೆಳೆದಿತ್ತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಬಂದಿದ್ದ ಸುಹಾಸ್ ಸ್ಪರ್ಧಿಯಾಗಿ ಆಡುವ ನಿರ್ಧಾರ ಕೈಗೊಂಡಿದ್ದರು. ಇದು ಕ್ರೀಡಾಪಟುವಾಗಿ ಹೊಸ ವೃತ್ತಿ ಜೀವನವನ್ನು ಆರಂಭಿಸಲು ಬುನಾದಿಯಾಯಿತು. ನಂತರ ಬ್ಯಾಡ್ಮಿಂಟನ್ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿದರು ಸುಹಾಸ್.
ಮೊದಲ ಪ್ರಯತ್ನದಲ್ಲಿಯೇ ಚಿನ್ನದ ಪದಕ ಗೆದ್ದ ಕನ್ನಡಿಗ
ಹೀಗೆ ವೃತ್ತಿಪರ ಬ್ಯಾಡ್ಮಿಂಟನ್ ಆಟಗಾರನಾಗಿ ಕ್ರೀಡಾಕ್ಷೇತ್ರಕ್ಕೆ ಕಾಲಿಟ್ಟ ಸುಹಾಸ್ ಯತಿರಾಜ್ ಅದೇ ವರ್ಷ ಅಂದರೆ 2016ರಲ್ಲಿ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶವನ್ನು ಗಿಟ್ಟಿಸಿಕೊಂಡರು. ಚೀನಾದ ಬೀಜಿಂಗ್ನಲ್ಲಿ ನಡೆದ 2016ರ ಏಷ್ಯನ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೆ ಚಿನ್ನದ ಪದಕವನ್ನೂ ಗೆದ್ದರು. ಈ ಮೂಲಕ ಮೊದಲ ಪ್ರಯತ್ನದಲ್ಲಿಯೇ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದರು ಸುಹಾಸ್ ಯತಿರಾಜ್. ಅದಾದ ಬಳಿಕ ಮುಂದಿನ ವರ್ಷವೇ ಜಪಾನ್ ಓಪನ್ ಹಾಗೂ ಟರ್ಕಿಶ್ ಓಪನ್ನಲ್ಲಿಯೂ ಭಾಗವಹಿಸಿದ ಇವರು ಅಲ್ಲಿಯೂ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಅದಾದ ಬಳಿಕ ಈ ಎಲ್ಲಾ ಸಾಧನೆಗಳಿಗೆ ಮುಕುಟವೆಂಬಂತೆ ಪ್ಯಾರಾಲಿಂಪಿಕ್ಸ್ನಲ್ಲಿ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.