ಜಕಾರ್ತ, ಜುಲೈ 17: ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆಗಳಾದ ಪಿ.ವಿ ಸಿಂಧೂ ಮತ್ತು ಕಿಡಂಬಿ ಶ್ರೀಕಾಂತ್, ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಟೂರ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯ ಪ್ರತ್ಯೇಕ ಸಿಂಗಲ್ಸ್ ವಿಭಾಗಗಳಲ್ಲಿ ಶುಭಾರಂಭ ಮಾಡಿದ್ದಾರೆ.
ಒಂದು ತಿಂಗಳ ವಿರಾಮದ ಬಳಿಕ ಅಖಾಡಕ್ಕೆ ಇಳಿದಿರುವ ಭಾರತೀಯ ಷಟ್ಲರ್ಗಳು ಗಮನಾರ್ಹ ಪ್ರದರ್ಶನ ನೀಡಿದ್ದು, ಮೊದಲಿಗೆ ಸಿಂಧೂ ಜಪಾನ್ನ ಆಟಗಾರ್ತಿ ಆಯಾ ಒಹೋರಿ ವಿರುದ್ಧ ಗೆದ್ದರೆ ಪುರುಷರ ಸಿಂಗಲ್ಸ್ನಲ್ಲಿ ಶ್ರೀಕಾಂತ್ ಕೂಡ ಜಪಾನ್ನ ಕೆಂಟ ನಿಶಿಮೊಟೊ ವಿರುದ್ಧ ಗೆದ್ದು 2ನೇ ಸುತ್ತಿಗೆ ಕಾಲಿಟ್ಟಿದ್ದಾರೆ.
ತಮ್ಮ ವಿಶ್ವಕಪ್ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್!
ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದುಕೊಂಡಿರುವ ಸಿಂಧೂ, ಪ್ರಸಕ್ತ ಸಾಲಿನಲ್ಲಿ ಮೊದಲ ಟ್ರೋಫಿ ಗೆಲುವಿಗಾಗಿ ಎದುರು ನೋಡುತ್ತಿದ್ದು 11-21, 21-15, 21-15 ಅಂತರದಲ್ಲಿ ಒಹೋರಿ ಅವರ ಕಠಿಣ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಸಫಲರಾದರು. ಮತ್ತೊಂದೆಡೆ ಎಂಟನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್, ಕೇವಲ 38 ನಿಮಿಷಗಳಲ್ಲಿ 21-14, 21-13 ಅಂತರದ ನೇರ ಗೇಮ್ಗಳಿಂದ ನಿಶಿಮೊಟೊ ಅವರನ್ನು ಸುಲಭವಾಗಿ ಮಣಿಸಿದರು.
ಈ ಗೆಲುವಿನೊಂದಿಗೆ ಒಹೋರಿ ವಿರುದ್ಧದ ಗೆಲುವಿನ ದಾಖಲೆಯನ್ನು ಸಿಂಧೂ 7-0ಗೆ ವಿಸ್ತರಿಸಿದರೆ, ಶ್ರೀಕಾಂತ್ 5-1ರಲ್ಲಿ ಜಪಾನ್ ಆಟಗಾರನ ಎದುರಿನ ಗೆಲಕುವಿನ ದಾಖಲೆಯನ್ನು ಮತ್ತಷ್ಟು ಬಲ ಪಡಿಸಿಕೊಂಡರು. ವಿಶ್ವದ ನಂ.5 ಆಟಗಾರ್ತಿ ಸಿಂಧೂ ಇದೀಗ ತಮ್ಮ ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್ನ ಮಿಯಾ ಬ್ಲಿಷ್ಪೆಲ್ಡ್ ಅಥವಾ ಹಾಂಕಾಂಗ್ನ ಯಿಪ್ ಪುಯ್ ಯಿನ್ ಅವರ ಸಾಲು ಎದುರಿಸಲಿದ್ದಾರೆ. ಮತ್ತೊಂದೆಡೆ ಶ್ರೀಕಾಂತ್, ಫ್ರಾನ್ಸ್ನ ಬ್ರೈಸ್ ಲೆವೆರ್ಡೆಝ್ ಅಥವಾ ಹಾಂಕಾಂಗ್ನ ಕಾ ಲಾಂಗ್ ಅಂಗುಸ್ ನಡುವಣ ವಿಜೇತರನ್ನು ಎದುರಿಸಲಿದ್ದಾರೆ.
ವಿಶ್ವಕಪ್ ಫೈನಲ್ ಸೋಲಿನ ದುಖಃ ತೋಡಿಕೊಂಡ ವಿಲಿಯಮ್ಸನ್
ಇದೇ ವರ್ಷ ಸ್ವಿಸ್ ಓಪನ್ ಟೂರ್ನಿಯ ಫೈನಲ್ ತಲುಪಿದ್ದ ಭಾರತದ ಅನುಭವಿ ಆಟಗಾರ ಬಿ. ಸಾಯ್ ಪ್ರಣೀತ್, ಮೊದಲ ಸುತ್ತಿನ ಹಣಾಹಣಿಯಲ್ಲೇ ಆಘಾತ ಅನುಭವಿಸಿದ್ದಾರೆ. ನಿರೀಕ್ಷಿತ ಪ್ರದರ್ಶನ ಹೊರತರುವಲ್ಲಿ ವಿಫಲರಾದ ಪ್ರಣೀತ್ 15-21, 21-13, 10-21 ಅಂತರದಲ್ಲಿ ಹಾಂಕಾಂಗ್ನ ವಿನ್ಸೆಂಟ್ ವಾಂಗ್ ವಿಂಗ್ ಕಿ ವಿರುದ್ಧ ಸೋಲೊಪ್ಪಿಕೊಂಡರು.