ಬ್ಯಾಡ್ಮಿಂಟನ್ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು ಥಾಮಸ್ ಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಥಾಮಸ್ ಕಪ್ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್ ಸೆಣೆಸಾಟದಲ್ಲಿ ಭಾರತ ತಂಡ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಎನಿಸಿದೆ. ಲಕ್ಷ್ಯ ಸೇನ್ ಅರಿಂದ ಹಿಡಿದು ಕಿಡಂಬಿ ಶ್ರೀಕಾಂತ್ ವರೆಗೆ ಎಲ್ಲಾ ಆಟಗಾರರು ಕೂಡ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಈ ಪಂದ್ಯದಲ್ಲಿ ನೀಡಿದ್ದು ಭಾರತ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿತ್ತು. ಭಾರತ ಬ್ಯಾಡ್ಮಿಂಟನ್ ತಂಡದ ಈ ಸಾಧನೆಗೆ ವಿಶ್ವದ ಮೂಲೆಮೂಲೆಯಿಂದಲೂ ಅಭಿನಂದನೆಯ ಸುರಿಮಳೆ ಹರಿಯುತ್ತಿದೆ.
ಇನ್ನು ಕ್ರಿಕೆಟ್ನ ದಿಗ್ಗಜ ಸುನಿಲ್ ಗವಾಸ್ಕರ್ ಕೂಡ ಈ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಬ್ಯಾಡ್ಮಿಂಟನ್ನಲ್ಲಿ ಭಾರತ ತಂಡದ ಈ ಗೆಲುವು 1983ರಲ್ಲಿ ಭಾರತ ಗೆದ್ದ ವಿಶ್ವಕಪ್ ಗೆಲುವಿಗೆ ಸಮವಾಗಬಹುದು ಎಂದಿದ್ದಾರೆ. ಆ ಗೆಲುವಿನ ಬಳಿಕ ಭಾರತದಲ್ಲಿ ಕ್ರಿಕೆಟ್ ಮೇಲಿನ ಒಲವು ಇಡೀ ದೇಶದಲ್ಲಿ ಹೆಚ್ಚಾಗಿತ್ತು. ಬ್ಯಾಡ್ಮಿಂಟನ್ನಲ್ಲಿ ಕೂಡ ಅಂತಾದ್ದೇ ಬದಲಾವಣೆಗೆ ಈ ಗೆಲುವು ಕಾರಣವಾಗಬಹುದು ಎಂದಿದ್ದಾರೆ ಸುನಿಲ್ ಗವಾಸ್ಕರ್.
ಥಾಮಸ್ ಕಪ್: ಫೈನಲ್ನಲ್ಲಿ ಇಂಡೋನೇಷ್ಯಾ ವಿರುದ್ಧ ಗೆಲುವು, ಭಾರತಕ್ಕೆ ಐತಿಹಾಸಿಕ ಚಿನ್ನದ ಪದಕ
ಸುನಿಲ್ ಗವಾಸ್ಕರ್ ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಬಗೆಗಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ. "14 ಬಾರಿಯ ಚಾಂಪಿಯನ್ ಇಂಡೋನೇಷ್ಯಾ ತಂಡವನ್ನು ಗೆದ್ದು ಚಾಂಪಿಯನ್ ಪಟ್ಟಕ್ಕೇರಿದೆ ಭಾರತ. ಇಂಡೋನೇಷ್ಯಾ ಹಾಲಿ ಚಾಂಪಿಯನ್ ತಂಡ ಕೂಡ ಆಗಿದೆ. ಅವರನ್ನೇ ಮಣಿಸಿದ್ದಾರೆ ನಮ್ಮ ಆಟಗಾರರು. ನಾನೀಗ ಖುಷಿಯಲ್ಲಿ ತೇಲಾಡುತ್ತಿದ್ದೇನೆ. ನನಗೆ ಬ್ಯಾಡ್ಮಿಂಟನ್ ಅಂದರೆ ಬಹಳ ಇಷ್ಟ. ಟಿ20 ಕ್ರಿಕೆಟ್ ಅಥವಾ ಬ್ಯಾಡ್ಮಿಂಟನ್ ಪಂದ್ಯವನ್ನು ನೋಡಬೇಕು ಎಂಬ ಆಯ್ಕೆಯನ್ನು ನನ್ನ ಮುಂದಿಟ್ಟರೆ ನನ್ನ ಆಯ್ಕೆ ಯಾವಾಗಲೂ ಬ್ಯಾಡ್ಮಿಂಟನ್ ಪಂದ್ಯವೇ ಆಗಿರುತ್ತದೆ" ಎಂದು ಸುನಿಲ್ ಗವಾಸ್ಕರ್ ಬ್ಯಾಡ್ಮಿಂಟನ್ ಬಗೆಗಿನ ತಮ್ಮ ಒಲವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಥಾಮಸ್ ಕಪ್ ಗೆಲುವಿನ ಬಗ್ಗೆ ಗವಾಸ್ಕರ್ "ಬ್ಯಾಡ್ಮಿಂಟನ್ ಪ್ರೇಮಿಗಳಿಗೆ ಇದು ನಿಜಕ್ಕೂ ಅದ್ಭುತವಾದ ದಿನವಾಗಿದೆ. ನನ್ನ ಪ್ರಕಾರ ಇದು 1983ರಲ್ಲಿ ಭಾರತದ ವಿಶ್ವಕಪ್ ಗೆಲುವಿಗೆ ಸಮವಾಗಬಹುದು. ಯಾಕೆಂದರೆ ಅಂದು ಯಾರು ಕೂಡ ಭಾರತ ಈ ವಿಶ್ವಕಪ್ ಗೆಲ್ಲಬಹುದು ಎಂದು ಎನಿಸಿರಲಿಲ್ಲ. ಇಲ್ಲಿ ಭಾರತ ಗೆಲ್ಲಬಹುದು ಎಂದು ಯಾರೂ ಎನಿಸಿರಲಿಲ್ಲ ಎಂದು ನಾನು ಹೇಳುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರರು ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಅದ್ಭುತವಾದ ತಂಡ ಸಿದ್ಧವಾಗಿತ್ತು. ಆದರೆ ಅವರು 14 ಬಾರಿಯ ಚಾಂಪಿಯನ್ ತಂಡದ ಎದುರು ಆಡಲು ಇಳಿದಿದ್ದರು. ಹೀಗಾಗಿ ಅನುಮಾನಗಳು ಇದ್ದವು. ಆದರೆ ಈ ಗೆಲುವಿನಿಂದಾಗಿ ನಾನು ಬಾನೆತ್ತರಕ್ಕೆ ಹಾರುತ್ತಿರುವಂತೆ ಭಾಸವಾಗುತ್ತಿದೆ. ಅದ್ಭುತ ಗೆಲುವನ್ನು ಸಾಧಿಸಿದ್ದೀರಿ ಹುಡುಗರೇ" ಎಂದು ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.
ಇನ್ನು ಭಾನುವಾರ ನಡೆದ ಭಾರತ ಮತ್ತು ಇಂಡೋನೇಷ್ಯಾ ನಡುವಿನ ಫೈನಲ್ ಪಂದ್ಯದಲ್ಲಿ ಮೊದಲಿಗೆ ಲಕ್ಷ್ಯ ಸೇನ್ ಇಂಡೋನೇಷ್ಯಾದ ಆಂಥೋನಿ ಗಿಂಟಿಂಗ್ ವಿರುದ್ಧ ಸಿಂಗಲ್ಸ್ ಪಂದ್ಯದಲ್ಲಿ ಸೆಣೆಸಾಡಿ ತಂಡಕ್ಕೆ ಮೊದಲ ಗೆಲುವು ತಂದಿತ್ತರು. ಈ ಮೂಲಕ ಭಾರತ ತಂಡಕ್ಕೆ 1-0 ಮುನ್ನಡೆ ಒದಗಿಸಿದ್ದರು. ಈ ಸ್ಪರ್ಧೆಯ ನಂತರ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಎದುರಾಳಿ ತಂಡದ ಮೊಹಮ್ಮದ್ ಅಹ್ಸಾನ್ ಮತ್ತು ಕೆವಿನ್ ಸಂಜಯ ಸುಕಮುಲ್ಜೊ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು. ಈ ಪಂದ್ಯವನ್ನು 18-21, 23-21, 21-19 ಅಂತರದಿಂದ ಭಾರತದ ಜೋಡಿ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ 2-0 ಅಂತರದಿಂದ ಸಾಧಿಸಿತು.
ಫೈನಲ್ ಪಂದ್ಯದ ಮೂರನೇ ಸೆಣೆಸಾಟದಲ್ಲಿ ಕಿಡಂಬಿ ಶ್ರೀಕಾಂತ್ ಭಾರತದ ಪರವಾಗಿ ಕಣಕ್ಕಿಳಿದಿದ್ದರು. ಎದುರಾಳಿ ಜೊನಾಟನ್ ಕ್ರಿಸ್ಟಿ ವಿರುದ್ಧ ಶ್ರೀಕಾಂತ್ 21-15, 23-21 ಅಂತರದ ನೇರ ಸೆಟ್ಗಳಿಂದ ಗೆಲುವು ಸಾಧಿಸಿದರುಈ ಮೂಲಕ ಬ್ಯಾಂಕಾಕ್ನ ಇಂಪ್ಯಾಕ್ಟ್ ಅರೆನಾದಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರ ಮುಂದೆ ಭಾರತ ಭಾನುವಾರ ಐತಿಹಾಸಿಕ ಸಾಧನೆ ಮಾಡಿತು.