ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿನ ಹೊಸ್ತಿಲಿನಲ್ಲಿದೆ. ಎರಡು ದಿನಗಳ ಆಟ ಬಾಕಿಯಿದ್ದು ಟೀಮ್ ಇಂಡಿಯಾ ಗೆಲುವಿಗೆ ಕೇವಲ ಐದು ವಿಕೆಟ್ಗಳನ್ನು ತೆಗೆಯಬೇಕಿದೆ. ಆದರೆ ನ್ಯೂಜಿಲೆಂಡ್ ತಂಡದ ಗೆಲುವಿಗೆ 400 ರನ್ಗಳ ಅಸಾಧ್ಯ ಗುರಿ ಮುಂದಿದೆ. ಹೀಗಾಗಿ ಭಾರತ ಸರಣಿ ಗೆಲುವಿಗಾಗಿ ಎದುರು ನೋಡುತ್ತಿದೆ. ನಾಲ್ಕನೇ ದಿನ ಭಾರತದ ಗೆಲುವು ಬಹುತೇಕ ನಿಶ್ಚಿತ.
ಇನ್ನು ಈ ಪಂದ್ಯದ ಎರಡು ಇನ್ನಿಂಗ್ಸ್ನಲ್ಲಿಯೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕಗಳಿಸದೆ ನಿರಾಸೆ ಅನುಭವಿಸಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಶತಕದ ಬರ ಮುಂದುವರಿದಿದೆ. ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿ ಶತಕದ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅನುಭವಿಸುತ್ತಿರುವ ಶತಕದ ಬರವನ್ನು ನೀಗಿಸಲು ತಾಳ್ಮೆಯಿಂದ ಕಾಯಲೇಬೇಕಿದೆ ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.
ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್ಗಳ ಮುನ್ನಡೆ
ವಿರಾಟ್ ಕೊಹ್ಲಿ ಮತ್ತೊಮ್ಮೆ ಶೀಘ್ರದಲ್ಲಿಯೇ ಮೂರಂಕಿಯ ಸ್ಕೋರ್ ಗಳಿಸಲಿದ್ದಾರೆ. ಅದು ಶೀಘ್ರದಲ್ಲಿಯೇ ಬರಲಿದೆ. ಒಮ್ಮೆ ಅದು ಸಾಧ್ಯವಾದರೆ ವಿರಾಟ್ ಕೊಹ್ಲಿ ಬ್ಯಾಟ್ನಿಂದ ಸರಾಗವಾಗಿ ರನ್ ಹರಿದುಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರೆ ವಿವಿಎಸ್ ಲಕ್ಷ್ಮಣ್. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ 36 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ.
ಕ್ರೀಸ್ನಲ್ಲಿ ಇರುವಷ್ಟು ಕಾಲವೂ ಸಂಪೂರ್ಣ ಹಿಡಿತ: ಇನ್ನು ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಮಾತನಾಡುತ್ತಾ ವಿವಿಎಸ್ ಲಕ್ಷ್ಮಣ್, "ಇದು ಮನಸ್ಥಿತಿಯ ವಿಚಾರವಲ್ಲ, ಪ್ರಮುಖ ಸಂಗತಿಯೆಂದರೆ ವಿರಾಟ್ ಕೊಹ್ಲಿ ಕ್ರೀಸ್ನಲ್ಲಿ ಇರುವಷ್ಟು ಕಾಲ ಕೂಡ ವಿರಾಟ್ ಕೊಹ್ಲಿ ಈ ಪಂದ್ಯಸಲ್ಲಿ ಶತಕವನ್ನು ಗಳಿಸಲಿದ್ದಾರೆ ಎಂಬ ಭಾವನೆ ಎಲ್ಲರಲ್ಲಿಯೂ ಇರುತ್ತದೆ. ಆಟದುದ್ದಕ್ಕೂ ಅವರು ಅಷ್ಟು ಹಿಡಿತವನ್ನು ಸಾಧಿಸಿರುತ್ತಾರೆ. ಇಂಗ್ಲೆಂಡ್ನಲ್ಲಿಯೂ ಒಂದೆರಡು ಪಂದ್ಯಗಳಲ್ಲಿ ಹೀಗೆಯೇ ಆಗಿತ್ತು. ಆಸ್ಟ್ರೇಲಿಯಾದಲ್ಲಿ ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿಯೂ ವಿರಾಟ್ ಕೊಹ್ಲಿ ರನೌಟ್ ಆಗುವ ಮುನ್ನ ಸಾಕಷ್ಟು ಆಕ್ರಮಣಕಾರಿಯಾಗಿದ್ದರು. ಇವತ್ತು ಕೂಡ ವಿರಾಟ್ ಕೊಹ್ಲಿ ಆ ಎಸೆತವನ್ನು ಆಡಿದ್ದು ದುರದೃಷ್ಟಕರ ಸಂಗತಿ. ಚೆಂಡು ಬಹಳ ನಿಧಾನವಾಗಿ ಬರುತ್ತಿತ್ತು. ಅದು ಒಳಭಾಗಕ್ಕೆ ಸವರಿ ವಿಕೆಟ್ಗೆ ಬಿತ್ತು" ಎಂದು ವಿವಿಎಸ್ ಲಕ್ಷ್ಮಣ್ ವಿರಾಟ್ ಕೊಹ್ಲಿ ಪ್ರದರ್ಶನದ ಬಗ್ಗೆ ಮಾತನಾಡಿದ್ದಾರೆ.
ನ್ಯೂಜಿಲೆಂಡ್ 62ರನ್ಗೆ ಆಲೌಟ್ ಆದ್ರೂ, ಭಾರತ ಏಕೆ ಫಾಲೋ ಆನ್ ಹೇರಲಿಲ್ಲ? ದಿನೇಶ್ ಕಾರ್ತಿಕ್ ಉತ್ತರ
ತಾಂತ್ರಿಕ ಸಮಸ್ಯೆಯಿದೆ ಅನಿಸಲಲ್ಲ: ನನ್ನ ಪ್ರಕಾರ ಶತಕವನ್ನು ಗಳಿಸುವ ಸಲುವಾಗಿ ತಾಳ್ಮೆಯಿಂದ ಕಾಯಬೇಕಷ್ಟೆ. ಆತ ಒಂದೇ ರೀತಿಯಾಗಿ ಔಟಾಗುತ್ತಿದ್ದರೆ, ಕ್ರೀಸ್ನಲ್ಲಿರುವಷ್ಟು ಕಾಲ ಪರದಾಟವನ್ನು ನಡೆಸಿತ್ತಿದ್ದರೆ, ಚೆಂಡನ್ನು ಎದುರಿಸಲು ತಿಣುಕಾಡುತ್ತಿದ್ದರೆ ಆಗ ಅಲ್ಲಿ ಸಮಸ್ಯೆ ಇದೆ ಎಂದಾಗುತ್ತಿತ್ತು. ಆದರೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ವಿಚಾರವಾಗಿ ತಾಂತ್ರಿಕ ಸಮಸ್ಯೆಯಿದೆ ಎಂದು ನನಗೆ ಅನಿಸುತ್ತಿಲ್ಲ ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.
ನನ್ನ ಪ್ರಕಾರ ವಿರಾಟ್ ಕೊಹ್ಲಿ ಕಣಕ್ಕಿಳಿದು ಸುದೀರ್ಘ ಇನ್ನಿಂಗ್ಸ್ ಆಡಬೇಕಿದೆ ಅಷ್ಟೆ. ಒಂದು ಬಾರಿ ಆ ಸುದೀರ್ಘ ಇನ್ನಿಂಗ್ಸ್ ಆಡಲು ಕೊಹ್ಲಿಗೆ ಸಾಧ್ಯವಾದರೆ, ಶತಕದ ಗಡಿ ತಲುಪಿದರೆ ನಂತರ ವಿರಾಟ್ ಕೊಹ್ಲಿಯಿಂದ ಯಾವ ರೀತಿಯ ಪ್ರದರ್ಶನ ಬರಲಿದೆ ಎಂಬುದು ನಮಗೆಲ್ಲಾ ತಿಳಿದಿದೆ ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.