ನಿತೀಶ್ ರಾಣಾ
ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ ಟ್ವೆಂಟಿ ಪಂದ್ಯಗಳ ಪೈಕಿ ಇತರ ಯುವ ಆಟಗಾರರಿಗಿಂತ ನಿತೀಶ್ ರಾಣಾಗೆ ತುಸು ಹೆಚ್ಚೇ ಅವಕಾಶ ಸಿಕ್ಕಿತು ಎಂದು ಹೇಳಬಹುದು. ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ನಿತೀಶ್ ರಾಣಾ 14 ಎಸೆತಗಳಲ್ಲಿ ಕೇವಲ 7 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಅಷ್ಟೇ ಅಲ್ಲದೆ ಲಂಕಾ ವಿರುದ್ಧದ ಎರಡನೇ ಮತ್ತು ಮೂರನೇ ಟಿ ಟ್ವೆಂಟಿ ಪಂದ್ಯಗಳಲ್ಲಿಯೂ ಸಹ ನಿತೀಶ್ ರಾಣಾಗೆ ಅವಕಾಶ ಲಭಿಸಿತು. ಲಂಕಾ ವಿರುದ್ಧದ ಎರಡನೇ ಟಿ ಟ್ವೆಂಟಿ ಪಂದ್ಯದಲ್ಲಿ 12 ಎಸೆತಗಳಿಗೆ 9 ರನ್ ಬಾರಿಸಿ ಔಟ್ ಆಗಿದ್ದ ನಿತೀಶ್ ರಾಣಾ ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ 15 ಎಸೆತಗಳಿಗೆ 6 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡು ನಿರಾಸೆ ಮೂಡಿಸಿದರು. ಹೀಗೆ ಸಿಕ್ಕ 3 ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ ನಿತೀಶ್ ರಾಣಾಗೆ ಮತ್ತೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡುವ ಸಾಹಸಕ್ಕೆ ಆಯ್ಕೆಗಾರರು ಕೈ ಹಾಕಲಾರರು ಎನಿಸುತ್ತದೆ.
ಕೃಷ್ಣಪ್ಪ ಗೌತಮ್
ಕನ್ನಡಿಗ ಕೃಷ್ಣಪ್ಪ ಗೌತಮ್ ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಆ ಪಂದ್ಯದಲ್ಲಿ ಶ್ರೀಲಂಕಾದ ಆಟಗಾರ ಭನುಕಾ ವಿಕೆಟ್ ಪಡೆದ ಕೃಷ್ಣಪ್ಪ ಗೌತಮ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಲಿಲ್ಲ. 8 ಓವರ್ ಬೌಲಿಂಗ್ ಮಾಡಿದ ಕೃಷ್ಣಪ್ಪ ಗೌತಮ್ 49 ರನ್ ನೀಡಿ ಕೇವಲ 1 ವಿಕೆಟ್ ಪಡೆಯಲು ಮಾತ್ರ ಶಕ್ತರಾದರು. ಅದೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನೂ ಪಡೆದ ಕೃಷ್ಣಪ್ಪ ಗೌತಮ್ 3 ಎಸೆತಗಳಿಗೆ 2 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಹೀಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದ ಕೃಷ್ಣಪ್ಪ ಗೌತಮ್ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವೇ ಸರಿ. ಇನ್ನು ಕೃಷ್ಣಪ್ಪ ಗೌತಮ್ ವಯಸ್ಸು ಈಗಾಗಲೇ 32 ಆಗಿದ್ದು ಮತ್ತೆ ಅವಕಾಶ ಸಿಗುವುದು ತೀರಾ ಕಷ್ಟ
ಸಂದೀಪ್ ವಾರಿಯರ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರ ಕೆಲ ಪಂದ್ಯಗಳಲ್ಲಿ ಆಡಿರುವ ಸಂದೀಪ್ ವಾರಿಯರ್ ಶ್ರೀಲಂಕಾ ಪ್ರವಾಸಕ್ಕೆ ನೆಟ್ ಬೌಲರ್ ಆಗಿ ಆಯ್ಕೆಯಾಗಿದ್ದರು. ಆದರೆ ಸಂದೀಪ್ ಅದೃಷ್ಟವೋ ಏನೋ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶ ಅವರಿಗೆ ಲಭಿಸಿತು. ಆದರೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಸಂದೀಪ್ ವಿಫಲರಾದರು. ಮೂರನೇ ಟಿ ಟ್ವೆಂಟಿ ಪಂದ್ಯದಲ್ಲಿ ಅವಕಾಶ ಪಡೆದ ಸಂದೀಪ್ 3 ಓವರ್ ಮಾಡಿ 23 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ನಿರಾಸೆ ಮೂಡಿಸಿದರು.