ಮೂರು ಲಕ್ಷ ಲೀಟರ್ ನೀರು ಹೊರಕ್ಕೆ
ಮೈದಾನ ಒಣಗಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಓವರ್ಗಳ ಕಡಿತವನ್ನು ಮಾಡಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಮಾರ್ಗವನ್ನು ಕೆಎಸ್ಸಿಎ ಕಂಡುಕೊಂಡಿದೆ.
ಶುಕ್ರವಾರ ಸಂಜೆ ಧಾರಾಕಾರವಾಗಿ ಮಳೆ ಸುರಿದಿತ್ತು. ಚಿನ್ನಸ್ವಾಮಿ ಅಂಗಳ ಕೆರೆಯ ಸ್ವರೂಪ ಪಡೆದುಕೊಂಡಿತ್ತು. ಆದರೆ ಸಬ್ ಏರ್ ಸಿಸ್ಟಂ ಮೂಲಕ 3 ಲಕ್ಷ ಲೀಟರ್ ನೀರನ್ನು ಕೇವಲ 45 ನಿಮಿಷದಲ್ಲಿ ಸ್ಟೋರೇಜ್ ಟ್ಯಾಂಕ್ಗೆ ಪಂಪ್ ಮಾಡಿ ಮೈದಾನವನ್ನು ಒಣಗಿಸಲಾಯಿತು.
ತಗ್ಗಿದ ನಷ್ಟದ ಭೀತಿ
ಮಳೆ ಬಂದು ನಿಂತ ಮೇಲೆ ಮೈದಾನವನ್ನು ಒಣಗಿಸಲು ಹರಸಾಹಸ ಪಡಬೇಕು. ಜೋರಾಗಿ ಮಳೆ ಸುರಿದರೆ ಅಂಗಳದಿಂದ ನೀರು ಹೊರಹಾಕಿ ಆಟ ನಡೆಸಲು ಅನುವು ಮಾಡಿಕೊಡುವುದು ಸುಲಭದ ಕೆಲಸವಲ್ಲ. ಸಾವಿರಾರು ರೂಪಾಯಿ ತೆತ್ತು ಕ್ರಿಕೆಟ್ ನೋಡಲು ಬರುವ ಅಭಿಮಾನಿಗಳು ನಿರಾಶೆಯಿಂದ ಮಳೆಗೆ ಹಿಡಿಶಾಪ ಹಾಕಿ ಮನೆಗೆ ಮರಳುವ ಎಷ್ಟೋ ಉದಾಹರಣೆಗಳಿವೆ. ಜತೆಗೆ ಪ್ರಾಯೋಜಕರು, ನೇರ ಪ್ರಸಾರದ ಜವಾಬ್ದಾರಿ ಹೊತ್ತುಕೊಂಡ ವಾಹಿನಿಗಳಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ.
ಮಳೆರಾಯ ವಿರಾಮ ನೀಡಿದರೆ ಸಾಕು
ಈ ತಂತ್ರಜ್ಞಾನದಿಂದಾಗಿ ಮೈದಾನದಲ್ಲಿ ಬಿದ್ದ ನೀರು ಅಲ್ಲಿಯೇ ನಿಲ್ಲದೆ ಇಂಗಿಹೋಗುತ್ತದೆ. ಗುರುತ್ವಾಕರ್ಷಣೆ ಸಹಾಯದ ವಿಧಾನಕ್ಕೂ 36 ಪಟ್ಟು ವೇಗವಾಗಿ ನೀರನ್ನು ಹೀರಿ ಹೊರಹಾಕುವ ಸಾಮರ್ಥ್ಯ ಇದರದ್ದು. ನಿಮಿಷಕ್ಕೆ ಸುಮಾರು 10 ಸಾವಿರ ಲೀಟರ್ನಷ್ಟು ನೀರನ್ನು ಹೊರಹಾಕಬಹುದು. ಮೈದಾನದ ಹುಲ್ಲನ್ನು ಒಣಗಿಸಲು ಈ ತಂತ್ರಜ್ಞಾನ ನೆರವು ನೀಡುತ್ತದೆ. ಇದರಿಂದ ಬೇಗನೆ ಆಟವನ್ನು ಆರಂಭಿಸಬಹುದು. ಅದಕ್ಕೆ ಮಳೆರಾಯ ಅವಕಾಶ ನೀಡಬೇಕಷ್ಟೇ.
ಏನೇನಿದೆ ಮೈದಾನದಲ್ಲಿ?
ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಸಲು ಕೆಎಸ್ಸಿಎ ಸಾಕಷ್ಟು ಶ್ರಮವಹಿಸಿದೆ. ಇದಕ್ಕಾಗಿ ಮೈದಾನವನ್ನು ಕೆಲವು ತಿಂಗಳ ಕಾಲ ಮುಚ್ಚಲಾಗಿತ್ತು. ಕ್ರೀಡಾಂಗಣದಿಂದ 10 ಸಾವಿರ ಟನ್ ಮಣ್ಣನ್ನು ಹೊರಹಾಕಲಾಗಿತ್ತು. ಗ್ರೇಡಿಂಗ್, ಕಂಪ್ಯಾಷನ್, ಜಿಯೊ ಟೆಕ್ಸ್ ಟೈಲ್ ಅಳವಡಿಕೆ, ಟ್ರೆಂಜಿಂಗ್, 150 ಎಂಎಂನಿಂದ 800 ಎಂಎಂ ವ್ಯಾಸದ ಪರ್ಫೊರೇಟೆಡ್ ಪೈಪ್ ಲೈನ್ ಗಳ ಅಳವಡಿಕೆ ಇವೆಲ್ಲವನ್ನೂ ಸಬ್ ಏರ್ ಸಿಸ್ಟಂನ ಪ್ರಧಾನ ಭಾಗವಾಗಿ ಅಳವಡಿಸಲಾಗಿದೆ. ಇವು ಮಳೆ ನೀರನ್ನು ಹೀರಿಕೊಳ್ಳಲು, ಮೈದಾನದಿಂದ ಹೊರಹಾಕಲು ನೆರವಾಗುತ್ತವೆ. ಮೈದಾನದ ಮೇಲೆ ಬರ್ಮಡಾ ಹುಲ್ಲನ್ನು ಬೆಳೆಸಲಾಗಿದೆ. 4.5 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಸಿರುವ ಈ ತಂತ್ರಜ್ಞಾನ, ವಿಶ್ವದ ಇತರೆ ಕ್ರಿಕೆಟ್ ಪ್ರಿಯ ರಾಷ್ಟ್ರಗಳಿಗೆ ಮಾದರಿಯಾಗಿದೆ.
ಇವತ್ತಿನ ಪಂದ್ಯಕ್ಕೂ ಕಾಡುತ್ತಾ ಮಳೆ?
ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಎದುರು ಆರ್ಸಿಬಿ ರನ್ ಮಳೆ ಸುರಿಸುವುದನ್ನು ನೋಡಲು ಅಭಿಮಾನಿಗಳು ಕಾದಿದ್ದಾರೆ. ಆದರೆ, ಅದಕ್ಕೆ ಮಳೆ ಅವಕಾಶ ನೀಡಬೇಕಿದೆ. ಕೆಲವು ದಿನಗಳಿಂದ ಸಂಜೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ, ಪಂದ್ಯಕ್ಕೆ ಅಡ್ಡಿಯಾಗುವ ಭೀತಿ ಮೂಡಿಸಿದೆ. ಶನಿವಾರ ಬೆಳಿಗ್ಗೆಯೂ ಸ್ವಲ್ಪ ಸಮಯ ಮಳೆ ಹನಿ ಬಿದ್ದಿದ್ದರಿಂದ ಮತ್ತು ಮೋಡದ ವಾತಾವರಣ ಇರುವುದರಿಂದ ಅಭಿಮಾನಿಗಳಲ್ಲಿ ಆತಂಕ ಮೂಡಿದೆ.