ಹರ್ಭಜನ್ ಸಿಂಗ್
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಮೆರೆದಿದ್ದಾರೆ. ಭಾರತ ಗೆದ್ದ ಎಲ್ಲಾ ಐಸಿಸಿ ಟ್ರೋಫಿಗಳ ಭಾಗವಾಗಿದ್ದಾರೆ ಹರ್ಭಜನ್ ಸಿಂಗ್. 2007ರಲ್ಲಿ ಎಂಎಸ್ ಧೋನಿ ನೇತೃತ್ವದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು ಹರ್ಭಜನ್ ಸಿಂಗ್. ಈ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 7 ವಿಕೆಟ್ ಸಂಪಾದಿಸಿದ್ದರು. ಅಲ್ಲದೆ 2011ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿಯೂ ಹರ್ಭಜನ್ ಸಿಂಗ್ ಪ್ರಮುಖ ಸದಸ್ಯರಾಗಿದ್ದರು. ಈ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ 9 ವಿಕೆಟ್ ಸಂಪಾದಿಸಿ ಮಿಂಚಿದ್ದರು. ಇದಲ್ಲದೆ 2002ರಲ್ಲಿ ಭಾರತ ತಂಡ ಸೌರವ್ ಗಂಗೂಲಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಾಗಲೂ ಈ ತಂಡದಲ್ಲಿ ಸ್ಥಾನವನ್ನ ಪಡೆದುಕೊಂಡಿದ್ದರು ಹರ್ಭಜನ್ ಸಿಂಗ್. ಈ ಸಂದರ್ಭದಲ್ಲಿ ಐದು ಪಂದ್ಯಗಳಲ್ಲಿ 6 ವಿಕೆಟ್ ಪಡೆದುಕೊಂಡಿದ್ದರು.
ವೀರೇಂದ್ರ ಸೆಹ್ವಾಗ್
ಮೂರು ಮಾದರಿಯಲ್ಲಿಯೂ ಟ್ರೋಫಿ ಗೆದ್ದ ತಂಡದ ಭಾಗವಾಗಿದ್ದ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿರುವ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್. ಇವರು ಕೂಡ ಮೊದಲ ಬಾರಿಗೆ ಐಸಿಸಿ ಟ್ರೋಫಿ ಎತ್ತಿ ಹಿಡಿದಿದ್ದು 2002ರ ಚಾಂಪಿಯನ್ಸ್ ಟ್ರೋಫಿಯಲ್ಲಿ. ಈ ಟೂರ್ನಿಯಲ್ಲಿ ಸೆಹ್ವಾಗ್ ಅಮೋಘ ಪ್ರದರ್ಶನ ನೀಡಿದ್ದರು. ಐದು ಪಂದ್ಯಗಳಲ್ಲಿ ಸೆಹ್ವಾಗ್ 271 ರನ್ ಬಾರಿಸಿದ್ದರು. ಅದಾದ ಐದು ವರ್ಷಗಳ ಬಳಿಕ 2007ರಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಾಗಲೂ ಸೆಹ್ವಾಗ್ ಈ ತಂಡದ ಭಾಗವಾಗಿದ್ದರು. ಈ ಟೂರ್ನಿಯಲ್ಲಿಯೂ ಸೆಹ್ವಾಗ್ ಅಮೋಘ ಪ್ರದರ್ಶನ ನೀಡಿದ್ದರು. ಗಾಯದ ಕಾರಣದಿಂದಾಗಿ ಫೈನಲ್ ಪಂದ್ಯವನ್ನು ಸೆಹ್ವಾಗ್ ಆಡಿರಲಿಲ್ಲ. ಆದರೆ ಸೆಮಿಫೈನಲ್ವರೆಗೂ ಭಾರತ ತಂಡಕ್ಕೆ ಅದ್ಭುತ ಆರಂಭವನ್ನು ನೀಡಿದ್ದರು. ಇನ್ನು 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಾಗಲೂ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದರು ಸೆಹ್ವಾಗ್. ಈ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ಸೆಹ್ವಾಗ್ ಟೂರ್ನಿಯುದ್ದಕ್ಕೂ ಅಮೋಘ ಆರಂಭವನ್ನು ನೀಡಿದ್ದರು.
ಯುವರಾಜ್ ಸಿಂಗ್
ಭಾರತೀಯ ಕ್ರಿಕೆಟ್ ಕಂಡ ಅತಿ ದೊಡ್ಡ ಮ್ಯಾಚ್ ವಿನ್ನರ್ ಎಂದರೆ ಅದು ಯುವರಾಜ್ ಸಿಂಗ್. ಬ್ಯಾಟಿಂಗ್ ಬೌಲಿಂಗ್ ಜೊತೆಗೆ ಫೀಲ್ಡಿಂಗ್ನಲ್ಲಿಯೂ ಅದ್ಭುತವಾಗಿ ಕೊಡುಗೆ ನೀಡಿರುವ ಆಟಗಾರ ಯುವಿ. ಈ ಕಾರಣದಿಂದಾಗಿಯೇ ಯುವರಾಜ್ ಸಿಂಗ್ ಅವರನ್ನು ಭಾರತ ಕಂಡ ಶ್ರೇಷ್ಠ ಆಲ್ರೌಂಡರ್ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ವಿಶೇಷವೆಂದರೆ ತಾವು ಗೆದ್ದಿರುವ ಮೂರು ಐಸಿಸಿ ಟೂರ್ನಿಗಳಲ್ಲಿಯೂ ಯುವಿ ಅತ್ಯಂತ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದರು. ಆದರೆ 2002ರಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚಿನ ಅವಕಾಶಗಳು ಯುವರಾಜ್ ಸಿಂಗ್ಗೆ ದೊರೆತಿರಲಿಲ್ಲ. ಆ ಟೂರ್ನಿಯಲ್ಲಿ ಯುವಿ ಎರಡು ಬಾರಿ ಮಾತ್ರವೇ ಬ್ಯಾಟಿಂಗ್ ಮಾಡುವ ಅವಕಾಶ ಪಡೆದುಕೊಂಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧಧ ಸೆಮಿಫೈನಲ್ ಪಮದ್ಯದಲ್ಲಿ ಯುವಿ 62 ರನ್ಗಳ ಕೊಡುಗೆ ನೀಡಿದ್ದಲ್ಲದೆ ಒಂದು ವಿಕೆಟ್ ಕೂಡ ಸಂಪಾದಿಸಿ ಮಿಂಚಿದ್ದರು.
ಇನ್ನು ಅದಾದ ಐದು ವರ್ಷಗಳ ಬಳಿಕ 2007ರಲ್ಲಿ ಭಾರತ ಟಿ20 ವಿಶ್ವಕಪ್ ಗೆಲ್ಲಲು ಯುವಿ ಪ್ರದರ್ಶನ ಪ್ರಮುಖ ಕಾರಣವಾಗಿತ್ತು. ಅದರಲ್ಲೂ ಇಂಗ್ಲೆಂಡ್ ವಿರುದ್ಧಧ ನಿರ್ಣಾಯಕ ಪಂದ್ಯದಲ್ಲಿ ಯುವರಾಜ್ ಸಿಂಗ್ ಒಂದು ಓವರ್ನ ಎಲ್ಲಾ ಎಸೆತಗಳನ್ನು ಸಿಕ್ಸರ್ಗೆ ಅಟ್ಟಿ ದಾಖಲೆ ಬರೆದಿದ್ದರು. ಈ ಟೂರ್ನಿಯಲ್ಲಿ ಯುವರಾಜ್ ಸಿಂಗ್ ಆಡಿದ 6 ಪಂದ್ಯಗಳಲ್ಲಿ 168 ರನ್ಗಳನ್ನು ಗಳಿಸಿದ್ದರು ಯುವಿ. ಅದಾದ ಬಳಿಕ 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆಲ್ಲುವಲ್ಲಿಯೂ ಯುವರಾಜ್ ಸಿಂಗ್ ಮಹತ್ವದ ಪಾತ್ರ ನಿರ್ವಹಿಸಿದ್ದರು. ಯುವಿ ಪ್ರದರ್ಶನದಿಂದಾಗಿಯೇ ಭಾರತ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು.
ಎಂಎಸ್ ಧೋನಿ
ಮಹೇಂದ್ರ ಸಿಂಗ್ ಧೋನಿ ಭಾರತ ಕಂಡ ಶ್ರೇಷ್ಠ ನಾಯಕ ಎನಿಸಿಕೊಂಡಿದ್ದಾರೆ. ಎಂಎಸ್ ಧೋನಿ ನೇತೃತ್ವದಲ್ಲಿ ಭಾರತ ಎಲ್ಲಾ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಂಡಿದೆ. ನಾಯಕನಾಗಿ ಮೊದಲ ಟೂರ್ನಿಯಲ್ಲಿಯೇ ತಮ್ಮ ಸಾಮರ್ಥ್ಯವನ್ನು ಧೋನಿ ಸಾಬೀತುಪಡಿಸಿದ್ದರು. 2007ರಲ್ಲಿ ಯುವ ಆಟಗಾರರನ್ನು ಒಳಗೊಂಡ ತಂಡದೊಂದಿಗೆ ಮೊದಲ ಟಿ20 ವಿಶ್ವಕಪ್ ಗೆದ್ದು ಅಚ್ಚರಿ ಮೂಡಿಸಿದ್ದರು. ಅದಾದ ಬಳಿಕ 2011ರಲ್ಲಿ ಭಾರತ ಏಕದಿನ ವಿಶ್ವಕಪ್ ಕೂಡ ಧೋನಿ ನಾಯಕತ್ವದಲ್ಲಿಯೇ ಗೆದ್ದು ಬೀಗಿತ್ತು. ಈ ವಿಶ್ವಕಪ್ನಲ್ಲಿ ಭಾರತ ಆರಂಭದಿಂದ ಫೈನಲ್ ಹಂತದವರೆಗೂ ಅಮೋಘ ಪ್ರದರ್ಶನ ನೀಡಿತ್ತು. ಅದಾದ ಎರಡು ವರ್ಷಗಳ ಬಳಿಕ ಭಾರತ ಸೆಹ್ವಾಗ್, ಗಂಭೀರ್, ಜಹೀರ್ ಖಾನ್ ಮತ್ತು ಹರ್ಭಜನ್ ಸಿಂಗ್ ಅವರ ಗೈರಿನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕಿಳಿದಿತ್ತು. ಈ ಟೂರ್ನಿಯನ್ನು ಕೂಡ ಭಾರತ ಗೆಲ್ಲುವ ಮೂಲಕ ಧೋನಿ ಇತಿಹಾಸವನ್ನು ನಿರ್ಮಿಸಿದ್ದಾರೆ.