1. ಶುಭಮನ್ ಗಿಲ್ (ಒಡಿಐ ತಂಡಕ್ಕೆ)
ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿರುವ 19 ವರ್ಷದೊಳಗಿನವರ ವಿಶ್ವಕಪ್ ವಿಜೇತ ಆಟಗಾರ ಶುಭಮನ್ ಗಿಲ್, ಟೀಮ್ ಇಂಡಿಯಾದ ಏಕದಿನ ಮತ್ತು ಟಿ20 ತಂಡಕ್ಕೆ ಹೇಳಿ ಮಾಡಿಸಿದ ಆಟಗಾರನಾಗಿದ್ದಾರೆ. ಈಗಾಗಲೇ ಭಾರತ ತಂಡ ತನ್ನ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್ಮನ್ ಸಲುವಾಗಿ ಹಲವು ಪ್ರಯೋಗಗಳನ್ನು ನಡೆಸಿ ವಿಫಲಗೊಂಡಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಆಟಗಾರನಾಗಿ ಗಿಲ್ ಅವರಿಗೆ ಸ್ಥಾನ ನೀಡಿ ಪೋಷಿಸುವ ಅಗತ್ಯತೆ ಇದೆ. ಇನ್ನು ದೇಶಿ ಟೂರ್ನಿಗಳಲ್ಲಿ ಮತ್ತು ಐಪಿಎಲ್ನಲ್ಲೂ ಮಿಂಚಿರುವ ಗಿಲ್ ತಮ್ಮ ಸಾಮರ್ಥ್ಯ ಏನೆಂಬುದನ್ನು ಅನಾವರಣ ಪಡಿಸಿದ್ದಾರೆ. ಅಂದಹಾಗೆ ವಿಶ್ವಕಪ್ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ಪ್ರವಾಸದಲ್ಲಿ ಗಿಲ್ಗೆ ಅವಕಾಶ ನೀಡಲಾಗಿತ್ತಾದರೂ,ಕಿವೀಸ್ ಪಡೆಯ ಭರ್ಜರಿ ಬೌಲಿಂಗ್ ಎದುರು 19 ವರ್ಷದ ಬಲಗೈ ಬ್ಯಾಟ್ಸ್ಮನ್ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು. ತಾಳ್ಮೆ ಜೊತೆಗೆ ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿರುವ ಗಿಲ್, ಭಾರತ ತಂಡದ 4ನೇ ಕ್ರಮಾಂಕದ ಬ್ಯಾಟಿಂಗ್ ಗೊಂದಲಕ್ಕೆ ಶಾಶ್ವತ ಪರಿಹಾರವಾಗಬಲ್ಲ ಆಟಗಾರ. ಹೀಗಾಗಿ ವಿಂಡೀಸ್ ಪ್ರವಾಸಕ್ಕೆ ಗಿಲ್ ಅವರಿಗೆ ಅವಕಾಶ ನೀಡಬಹುದಿತ್ತು.
2. ಮಯಾಂಕ್ ಅಗರ್ವಾಲ್ (ಒಡಿಐ ತಂಡಕ್ಕೆ)
ವಿಶ್ವಕಪ್ ಟೂರ್ನಿ ವೇಳೆ ಮಯಾಂಕ್ ಅಗರ್ವಾಲ್ ಅವರನ್ನು ತಂಡಕ್ಕೆ ಸೇರಿಸಿದ್ದು ಭಾರಿ ವಿವಾದ ಎಬ್ಬಿಸಿತ್ತು. ಆಲ್ರೌಂಡರ್ ವಿಜಯ್ ಶಂಕರ್ ಗಾಯಗೊಂಡ ಸಂದರ್ಭದಲ್ಲಿ ಅಚ್ಚರಿಯಂತೆ ಮಯಾಂಕ್ ಅಗರ್ವಾಲ್ಗೆ ಕರೆ ನೀಡಲಾಗಿತ್ತು. ಆದರೀಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪ್ರಕಟಿಸಲಾದ ಏಕದಿನ ತಂಡದಲ್ಲಿ ಮಯಾಂಕ್ಗೆ ಸ್ಥಾನ ನೀಡದೆ ಆಯ್ಕೆ ಸಮಿತಿ ಮತ್ತೊಮ್ಮೆ ಶಾಕ್ ನೀಡಿದ್ದಾರೆ. ಮಯಾಂಕ್ ಅವರನ್ನು ತಂಡದಿಂದ ಹೊರಗಿಡುವುದೇ ಆದರೆ, ವಿಶ್ವಕಪ್ ತಂಡಕ್ಕೆ ಸೇರಿಸಿದ್ದೇಕೆ? ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ. ಇನ್ನು ದೇಶಿ ಕ್ರಿಕೆಟ್ ಸರಣಿಗಳಲ್ಲಿ ರನ್ ಹೊಳೆಯನ್ನೇ ಹರಿಸಿರುವ ಮಯಾಂಕ್ ಸಹಜವಾಗಿಯೇ ಟೀಮ್ ಇಂಡಿಯಾ ಕದವನ್ನು ತಟ್ಟುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ ಸರಣಿಗೆ ಪ್ರಕಟಿಸಲಾದ ತಂಡಕ್ಕೆಅವರು ಗಾಯಾಳು ಪೃಥ್ವಿ ಶಾ ಅವರ ಸ್ಥಾನದಲ್ಲಿ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಆದರೆ, ಏಕದಿನ ಮತ್ತು ಟಿ20 ಕ್ರಿಕೆಟ್ ತಂಡಗಳಿಗೆ ಕರ್ನಾಟಕದ ಸ್ಫೋಟಕ ಬ್ಯಾಟ್ಸ್ಮನ್ ಅವಕಾಶ ವಂಚಿತರಾಗಿದ್ದಾರೆ.
3. ಕರುಣ್ ನಾಯರ್ (ಟೆಸ್ಟ್ ತಂಡಕ್ಕೆ)
2016ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತ್ರಿಶತಕ ದಾಖಲಿಸಿ ದಾಖಲೆ ಬರೆದ ಕರ್ನಾಟದ ಪ್ರತಿಭಾನ್ವಿತ ಬ್ಯಾಟ್ಸ್ಮನ್ ಕರುಣ್ ನಾಯರ್ ಅವರಿಗೆ ಭಾರತ ಟೆಸ್ಟ್ ತಂಡದ ಬಾಗಿಲು ಮತ್ತೆ ತೆರೆಯಲೇ ಇಲ್ಲ ಎಂಬುದು ವಿಪರ್ಯಾಸವೇ ಸರಿ. ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಗೆ ಅವರನ್ನು ಆಯ್ಕೆ ಮಾಡಲಾಗಿತ್ತಾದರೂ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗದೇ ಹೋಯಿತು. ಈ ನಿಟ್ಟಿನಲ್ಲಿ ನಾಯರ್ ಅವಕಾಶ ವಂಚಿತ ನತದೃಷ್ಟರೇ ಸರಿ. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿದ್ದು, ನಾಯರ್ ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿರುವುದಾಗಿದೆ. 27 ವರ್ಷದ ಪ್ರತಿಭಾನ್ವಿತ ಬಲಗೈ ಬ್ಯಾಟ್ಸ್ಮನ್ಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿನ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಬಹುದಾಗಿತ್ತು.
4. ಕೆ.ಎಸ್ ಭರತ್ (ಟೆಸ್ಟ್ ತಂಡಕ್ಕೆ)
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಥಾನಕ್ಕೆ ಪೈಪೋಟಿ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೈದರಾಬಾದ್ನ ಈ ಪ್ರತಿಭಾನ್ವಿತ ಯುವ ಆಟಗಾರನ ಹೆಸರು ರಾರಾಜಿಸಲಿದೆ. ಭವಿಷ್ಯದ ನಿಟ್ಟಿನಲ್ಲಿ ಕೋನಾ ಶ್ರೀಕರ್ ಭರತ್ (ಕೆ.ಎಸ್ ಭರತ್) ಅವರಿಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿನ ಭಾರತದ ಮೂರು ತಂಡಗಳಲ್ಲಿ ಒಂದರಲ್ಲಾದರೂ ಅವಕಾಶ ನೀಡಬಹುದಿತ್ತು. ಏಕೆಂದರೆ ರಣಜಿ ಟ್ರೋಫಿ ಇತಿಹಾಸದಲ್ಲಿ ತ್ರಿಶತಕ ಬಾರಿಸಿದ ಮೊತ್ತ ಮೊದಲ ವಿಕೆಟ್ಕೀಫರ್ ಎಂಬ ಹೆಗ್ಗಳಿಕೆ ಅವರದ್ದು. ಹೀಗಾಗಿ ಆಯ್ಕೆದಾರರ ರಡಾರ್ನಲ್ಲಿ ಕೆ.ಎಸ್ ಭರತ್ ಇದ್ದಾರೆ ಎಂಬುದರಲ್ಲಿ ಸಂಶಐವಿಲ್ಲ. ಆದರೆ ರಿಷಭ್ ಪಂತ್ ಭಾರತ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದು, ವೃದ್ಧಿಮಾನ್ ಸಹಾ ಕಾಯ್ದಿರಿಸಲ್ಪಟ್ಟ ವಿಕೆಟ್ಕೀಪರ್ ಆಗಿದ್ದಾರೆ. ಇವರಿಬ್ಬರಲ್ಲಿ ಯಾರಾದರೂ ಹೊರಬಿದ್ದರೆ 25 ವರ್ಷದ ಶ್ರೀಕರ್ ಭರತ್ಗೆ ಅವಕಾಶ ಸಿಗಲಿದೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭರತ್ ಪ್ರಯೋಗಕ್ಕೆ ಉತ್ತಮ ವೇದಿಕೆಯಿತ್ತು. ಆದರೆ ಆಯ್ಕೆ ದಾರರ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದಾರೆ.
5. ದಿನೇಶ್ ಕಾರ್ತಿಕ್ (ಟಿ20-ಐ)
ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಅನುಭವಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ ಅವರನ್ನು ಸಂಪೂರ್ಣವಾಗಿ ಕೈಬಿಟ್ಟಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಕಾರ್ತಿಕ್ ಭಾರತ ತಂಡದ ಪರ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಅದರಲ್ಲೂ ಟಿ20-ಐ ಮಾದರಿಯಲ್ಲಿ ಅವರ ಬ್ಯಾಟಿಂಗ್ ಉತ್ತಮವಾಗಿದ್ದರೂ ಕೂಡ ತಂಡದಿಂದ ಕೈಬಿಡಲಾಗಿದೆ. ನಿಧಾಸ್ ಕಪ್ ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಇನಿಂಗ್ಸ್ ಅಂತ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕರೂ 300+ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಏಕಾಂಗಿಯಾಗಿ ಭಾರತಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದರು. ಹೀಗಿರುವಾಗ ಅವರನ್ನು ಕನಿಷ್ಠ ಟಿ20 ತಂಡದಲ್ಲೂ ಆಡಿಸದೇ ಇರುವುದು ದುರದೃಷ್ಟವೇ ಸರಿ.