1. ಮಯಾಂಕ್ ಮಾರ್ಕಂಡೆ
2018ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕಿಳಿದು 14 ಪಂದ್ಯಗಳಲ್ಲಿ 15 ವಿಕೆಟ್ ಪಡೆದು ಮಿಂಚಿದ್ದ ಸ್ಪಿನ್ ಬೌಲರ್ ಮಯಾಂಕ್ ಮಾರ್ಕಂಡೆ ಕ್ರಿಕೆಟ್ ಜಗತ್ತಿನಲ್ಲಿ ಬೆಳಕಿಗೆ ಬಂದಿದ್ದರು. ಇನ್ನು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿಯೂ ಅಬ್ಬರಿಸಿದ್ದ ಮಯಾಂಕ್ ಮಾರ್ಕಂಡೆ ಪಂಜಾಬ್ ತಂಡದ ಪರ ರಣಜಿ ಟ್ರೋಫಿಯಲ್ಲಿ 6 ಪಂದ್ಯಕ್ಕೆ 29 ವಿಕೆಟ್ ಪಡೆದಿದ್ದರು. ಹೀಗೆ ದೇಸಿ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚಿದ್ದ ಮಯಾಂಕ್ ಮಾರ್ಕಂಡೆ ವಿರಾಟ್ ಕೊಹ್ಲಿ ನಾಯಕತ್ವದಡಿಯಲ್ಲಿ ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯವನ್ನು ಆಡುವ ಅವಕಾಶವನ್ನು ಪಡೆದುಕೊಂಡರು. ಆದರೆ ಆಸ್ಟ್ರೇಲಿಯ ವಿರುದ್ಧ ಆಡಿರುವ ತನ್ನ ಚೊಚ್ಚಲ ಟಿ ಟ್ವೆಂಟಿ ಪಂದ್ಯದಲ್ಲಿ ಯಾವುದೇ ವಿಕೆಟ್ ಪಡೆಯದೇ ಹೆಚ್ಚು ರನ್ ನೀಡಿದ ಮಯಾಂಕ್ ಮಾರ್ಕಂಡೆ ನಂತರದ ದಿನಗಳಲ್ಲಿ ಅವಕಾಶ ಪಡೆದುಕೊಳ್ಳದೇ ಸದ್ಯ ತಂಡದಿಂದ ದೂರ ಉಳಿದಿದ್ದಾರೆ. ಹಾಗೂ ಆ ಸಮಯಕ್ಕೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳಲು ಪೈಪೋಟಿ ಹೆಚ್ಚಾದ ಕಾರಣ ಮಯಾಂಕ್ ಮಾರ್ಕಂಡೆ ಮತ್ತೆ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿಲ್ಲ.
2. ಸಿದ್ಧಾರ್ಥ್ ಕೌಲ್
ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ಟೀಮ್ ಇಂಡಿಯಾಗೆ ಕರೆತರಲಾದ ಮತ್ತೋರ್ವ ಕ್ರಿಕೆಟಿಗ ಸಿದ್ಧಾರ್ಥ್ ಕೌಲ್. 2008ರಲ್ಲಿ ಅಂಡರ್ 19 ವಿಶ್ವಕಪ್ ಗೆದ್ದಿದ್ದ ಭಾರತ ತಂಡದ ಸದಸ್ಯನಾಗಿದ್ದ ಸಿದ್ಧಾರ್ಥ್ ಕೌಲ್ 2017ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಉತ್ತಮ ಪ್ರದರ್ಶನವನ್ನು ನೀಡಿದರು. ಆ ಆವೃತ್ತಿಯಲ್ಲಿ 10 ಪಂದ್ಯಗಳನ್ನಾಡಿದ್ದ ಸಿದ್ಧಾರ್ಥ್ ಕೌಲ್ 16 ವಿಕೆಟ್ ಪಡೆದು ಮಿಂಚಿದ್ದರು ಹಾಗೂ ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲೂ ಕೂಡಾ ಮಿಂಚಿದ ಸಿದ್ಧಾರ್ಥ್ ಕೌಲ್ ಆ ಆವೃತ್ತಿಯಲ್ಲಿ 21 ವಿಕೆಟ್ ಪಡೆದಿದ್ದರು. ಹೀಗೆ ಉತ್ತಮ ಪ್ರದರ್ಶನ ನೀಡಿದ ಸಲುವಾಗಿ ಸಿದ್ಧಾರ್ಥ್ ಕೌಲ್ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಅಂತರರಾಷ್ಟ್ರೀಯ ಟಿ ಟ್ವೆಂಟಿ ತಂಡದಲ್ಲಿ ಸ್ಥಾನ ಪಡೆದುಕೊಂಡರು. ನಂತರ ಐರ್ಲೆಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾಗವಹಿಸಿದ ಸಿದ್ಧಾರ್ಥ್ ಕೌಲ್ ಕೇವಲ 4 ವಿಕೆಟ್ ಮಾತ್ರ ಪಡೆದರು. ಹೀಗೆ ಸಿಕ್ಕ ಅವಕಾಶಗಳಲ್ಲಿ ಸರಿಯಾದ ಪ್ರದರ್ಶನ ನೀಡದ ಸಿದ್ಧಾರ್ಥ್ ಕೌಲ್ ನಂತರ ಮತ್ತೆ ಅಂತರರಾಷ್ಟ್ರೀಯ ತಂಡ ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಳ್ಳಲಿಲ್ಲ.
3. ಟಿ ನಟರಾಜನ್
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕಣಕ್ಕಿಳಿದು ಉತ್ತಮ ಪ್ರದರ್ಶನ ನೀಡುವುದರ ಮೂಲಕ ಟಿ ನಟರಾಜನ್ ಖ್ಯಾತಿ ಪಡೆದರು. 16 ಪಂದ್ಯಗಳನ್ನಾಡಿ 16 ವಿಕೆಟ್ ಪಡೆದಿದ್ದ ಟಿ ನಟರಾಜನ್ ಎಸೆಯುತ್ತಿದ್ದ ಯಾರ್ಕರ್ ಎಲ್ಲರ ಗಮನವನ್ನು ಸೆಳೆದಿತ್ತು. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಟಿ ನಟರಾಜನ್ ಅವರಿಗೆ ಭಾರತ ಟೆಸ್ಟ್ ಹಾಗೂ ಸೀಮಿತ ಓವರ್ ತಂಡಗಳನ್ನು ಪ್ರತಿನಿಧಿಸುವ ಅವಕಾಶಗಳು ಲಭಿಸಿದವು. ಈ ಹಿಂದೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಾಗ ತಂಡದ ಜೊತೆ ನೆಟ್ ಬೌಲರ್ ಆಗಿ ತೆರಳಿದ್ದ ಟಿ ನಟರಾಜನ್ ಇತರೆ ಆಟಗಾರರಿಗೆ ಗಾಯದ ಸಮಸ್ಯೆ ಉಂಟಾದ ಕಾರಣ ಅಂತರರಾಷ್ಟ್ರೀಯ ಪದಾರ್ಪಣೆ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಹಾಗೂ ಆ ಪ್ರವಾಸದಲ್ಲಿ 4 ಪಂದ್ಯಗಳನ್ನಾಡಿ 7 ವಿಕೆಟ್ ಪಡೆದ ನಟರಾಜನ್ ನಂತರದ ದಿನಗಳಲ್ಲಿ ಗಾಯದ ಸಮಸ್ಯೆಗೊಳಗಾಗಿ ಸದ್ಯ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗದೇ ಆಚೆ ಉಳಿದಿದ್ದಾರೆ.
4. ಖಲೀಲ್ ಅಹ್ಮದ್
ರಾಜಸ್ತಾನ್ ಮೂಲದ ಕ್ರಿಕೆಟಿಗ ಖಲೀಲ್ ಅಹ್ಮದ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೊದಲಿಗೆ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಕಣಕ್ಕಿಳಿದಿರೂ ಕೂಡ ಸನ್ ರೈಸರ್ಸ್ ಹೈದರಾಬಾದ್ ತಂಡ ಸೇರಿದ ನಂತರ ಬೆಳಕಿಗೆ ಬಂದರು. 2018 ಮತ್ತು 2019ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಮಿಂಚಿದ್ದ ಖಲೀಲ್ ಅಹ್ಮದ್ ಭಾರತ ಅಂತರರಾಷ್ಟ್ರೀಯ ಟಿ ಟ್ವೆಂಟಿ ತಂಡವನ್ನು ಪ್ರತಿನಿಧಿಸುವ ಅವಕಾಶ ಪಡೆದುಕೊಂಡರು. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್ ಆರಂಭಿಸಿದ ಖಲೀಲ್ ಅಹ್ಮದ್ ಒಟ್ಟಾರೆ 13 ಪಂದ್ಯಗಳನ್ನಾಡಿ 14 ವಿಕೆಟ್ ಪಡೆದಿದ್ದಾರೆ. ಆದರೆ ನಂತರದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಲಾಗದ ಖಲೀಲ್ ಅಹ್ಮದ್ ಆಯ್ಕೆಗಾರರನ್ನು ತನ್ನತ್ತ ಸೆಳೆಯುವಲ್ಲಿ ವಿಫಲವಾಗಿ ಇದೀಗ ತಂಡದಿಂದ ಹೊರಗುಳಿದಿದ್ದಾರೆ.
5. ಶಿವಮ್ ದುಬೆ
ಮುಂಬೈ ತಂಡದ ಆಲ್ ರೌಂಡರ್ ಶಿವಂ ದುಬೆ ಬರೋಡ ವಿರುದ್ಧದ ರಣಜಿ ಪಂದ್ಯದಲ್ಲಿ 5 ಎಸೆತಗಳಿಗೆ 5 ಸಿಕ್ಸರ್ ಬಾರಿಸಿ ಮಿಂಚುವುದರ ಮೂಲಕ ಹಲವಾರು ಕ್ರಿಕೆಟ್ ಪ್ರೇಮಿಗಳ ಗಮನವನ್ನು ತನ್ನತ್ತ ಸೆಳೆದಿದ್ದರು. ಹೀಗೆ ರಣಜಿ ಟ್ರೋಫಿಯಲ್ಲಿ ಮಿಂಚಿದ ಶಿವಂ ದುಬೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಾದರು. 2020 ಮತ್ತು 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿಯೂ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡದ ಶಿವಮ್ ದುಬೆ ನಂತರದ ದಿನಗಳಲ್ಲಿ ಬಾಂಗ್ಲಾದೇಶ ವಿರುದ್ಧದ ಟಿ ಟ್ವೆಂಟಿ ಪಂದ್ಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದರು. ಹೀಗೆ ಅವಕಾಶ ಪಡೆದ ಶಿವಂ ದುಬೆ ಒಟ್ಟಾರೆ 5 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿ 5 ವಿಕೆಟ್ ಪಡೆದು, 105 ರನ್ ಕಲೆಹಾಕಿದ್ದಾರೆ. ಹೀಗೆ 5 ಪಂದ್ಯಗಳನ್ನಾಡಿದ ನಂತರ ಶಿವಂ ದುಬೆ ಮತ್ತೆ ಭಾರತ ಅಂತರರಾಷ್ಟ್ರೀಯ ತಂಡ ಪ್ರತಿನಿಧಿಸುವ ಅವಕಾಶವನ್ನು ಪಡೆದುಕೊಳ್ಳಲಾಗಲಿಲ್ಲ.