ಯುವ ಪ್ರತಿಭೆ ಪೃಥ್ವಿ ಶಾ
ಭಾರತದ ಅಂಡರ್-19 ವಿಶ್ವಕಪ್ ವಿಜೇತ ತಂಡದ ನಾಯಕ ಪೃಥ್ವಿ ಶಾ ಇತ್ತೀಚೆಗೆ ಸಚಿನ್ ತೆಂಡೂಲ್ಕರ್ ಬಳಿಕ ಟೆಸ್ಟ್ನಲ್ಲಿ ಶತಕ ದಾಖಲಿಸಿದ ಎರಡನೇ ಅತಿ ಕಿರಿಯ ಆಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಪೃಥ್ಬಿ ಶಾ ಯುವ ಆಟಗಾರ, ಆದರೆ ಈಗಾಗಲೇ ಸಾಕಷ್ಟು ಕಠಿಣ ಸಂದರ್ಭವನ್ನು ಎದುರಿಸಿ ಬಂದಿದ್ದಾರೆ. ನಾಲ್ಕನೇ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡ ಮುಂಬೈ ಮೂಲದ ಈ ಆಟಗಾರ ಕ್ರಿಕೆಟ್ ಅಭ್ಯಾಸಕ್ಕಾಗಿ ನಿತ್ಯವೂ 70 ಕಿಲೋ ಮೀಟರ್ ಪ್ರಯಾಣಿಸಬೇಕಿತ್ತು. ಮಗನ ಯಶಸ್ಸಿಗಾಗಿ ಶಾ ತಂದೆ ಸಾಕಷ್ಟು ತ್ಯಾಗವನ್ನು ಮಾಡಿದ್ದಾರೆ.
ಆಲ್ರೌಂಡರ್ ರವೀಂದ್ರ ಜಡೇಜಾ
ರವೀಂದ್ರ ಜಡೇಜಾ ಪ್ರಸಕ್ತ ಕಾಲದ ಓರ್ವ ಅತ್ಯುತ್ತಮ ಆಲ್ರೌಂಡರ್ ಆಗಿದ್ದಾರೆ. ಇತ್ತೀಚೆಗಷ್ಟೇ ಜಡೇಜಾ 'ವಿಸ್ಡನ್'ನಿಂದ ಅತ್ಯಂತ ಮೌಲ್ಯಯುತ ಭಾರತದ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡರು. ಆದರೆ ರವೀಂದ್ರ ಜಡೇಜಾ ಅವರ ಹಾದಿ ಸಾಕಷ್ಟು ಕಠಿಣವಾಗಿತ್ತು. ಜಡೇಜಾ ತಂದೆ ವಾಚ್ಮನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹದಿಯರೆಯದಲ್ಲಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ಜಡೇಜಾ ತಮ್ಮ ಛಲವನ್ನು ಕಳೆದುಕೊಳ್ಳಲಿಲ್ಲ. ವಿರಾಟ್ ಕೊಹ್ಲಿ ನೇತೃತ್ವದ ವಿಶ್ವಕಪ್ ಗೆದ್ದ ಅಂಡರ್-19 ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡು ಈಗ ಟೀಮ್ ಇಂಡಿಯಾದ ಪ್ರಮುಖ ಆಟಗಾರನಾಗಿದ್ದಾರೆ.
ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ
ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕೂಡ ಕಡು ಬಡತನದಿಂದಲೇ ಬಂದು ಸಾಧನೆಯ ಶಿಖರವನ್ನೇರಿದ ಆಟಗಾರ. ಧೋನಿ ತಂದೆ ಪಾನ್ ಸಿಂಗ್ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದರು. ಆದರೆ ಕುಟುಂಬ ನಿರ್ವಹಣೆಗೆ ಕಷ್ಟವಾಗುತ್ತಿತ್ತು. ಹೀಗಾಗಿ ಅನಿವಾರ್ಯವಾಗಿ ಧೋನಿಯನ್ನು ಟಿಕೆಟ್ ಚೆಕ್ಕರ್ ಆಗಿ ಕೆಲಸಕ್ಕೆ ಸೇರಿಸಿದ್ದರು. ಆದರೆ ಇಂತಾ ಸಂದರ್ಭದಲ್ಲು ಧೋನಿ ತನ್ನ ಕನಸನ್ನು ಕೈಬಿಟ್ಟಿರಲಿಲ್ಲ. ಕ್ರಿಕೆಟರ್ ಆಗುವ ಕನಸನ್ನು ಪೂರೈಸಿದ ಮಹೇಂದ್ರ ಸಿಂಗ್ ಧೋನಿ ವಿಶ್ವ ಕ್ರಿಕೆಟ್ನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಿಂಗ್ ಸ್ಪೆಶಲಿಸ್ಟ್ ಭುವನೇಶ್ವರ್ ಕುಮಾರ್
ಭಾರತೀಯ ಕ್ರಿಕೆಟ್ ತಂಡದ ಆಟಗಾರ ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಆಘಾತ ನೀಡಿ ಸೈ ಎನಿಸಿಕೊಂಡ ಕ್ರಿಕೆಟಿಗ. ಪಾಕಿಸ್ತಾನದ ವಿರುದ್ಧ ಸರಣಿಯಲ್ಲಿ ಪದಾರ್ಪಣೆ ಮಾಡಿದ್ದ ಭುವನೇಶ್ವರ್ ಕುಮಾರ್ ತಮ್ಮ ಸ್ವಿಂಗ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟಿಂಗ್ ಲೈನಪ್ಅನ್ನು ಮುರಿದಿದ್ದರು. ಉತ್ತರ ಪ್ರದೇಶ ಮೂಲಕ ಈ ಕ್ರಿಕೆಟಿಗ ಕುಡ ಬಡು ಬಡತನದ ಹಿನ್ನೆಲೆಯನ್ನು ಹೊಂದಿದ್ದಾರೆ. ಐಪಿಎಲ್ನಲ್ಲಿ ಕಿತ್ತಳೆ ಟೋಪಿ ಪಡೆದ ಈ ಬೌಲರ್ ಅಭ್ಯಾಸವನ್ನು ನಡೆಸಲು ಸರಿಯಾದ ಶೂ ಕೂಡ ಹೊಂದಿರಲಿಲ್ಲ. ಆದರೆ ಕಠಿನ ಪರಿಶ್ರಮ ಭುವನೇಶ್ವರ್ ಕುಮಾರ್ ಅವರನ್ನು ಭಾರತದ ಅತ್ಯಂತ ಮೌಲ್ಯಯುತ ಆಟಗಾರರಲ್ಲಿ ಒಬ್ಬರನ್ನಾಗಿಸಿದೆ.
ಉಪ ನಾಯಕ ರೋಹಿತ್ ಶರ್ಮಾ
ಟೀಮ್ ಇಂಡಿಯಾದ ಸೀಮಿತ ಓವರ್ಗಳ ಉಪನಾಯಕ ರೋಹಿತ್ ಶರ್ಮಾ ಐಪಿಎಲ್ನ ಅತ್ಯಂತ ಯಶಸ್ವಿ ನಾಯಕರೆನಿಸಿದ್ದಾರೆ. ಅನೇಕ ಕ್ರಿಕೆಟ್ ಪಂಡಿತರು ರೋಹಿತ್ ಭಾರತ ನಾಯಕನಾಗಬೇಕು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮಹಾರಾಷ್ಟ್ರ ಮೂಲದ ಈ ಕ್ರಿಕೆಟಿಗನ ಹಿನ್ನೆಲೆ ಕೂಡ ಸಾಕಷ್ಟು ಬಡತನದಿಂದಲೇ ಕೂಡಿತ್ತು. ರೋಹಿತ್ ಶಾಲಾ ಫೀಸ್ ಕಟ್ಟಲು ಕೂಡ ರೋಹಿತ್ ಹೆತ್ತವರಿಂದ ಸಾಧ್ಯವಾಗಿರಲಿಲ್ಲವಂತೆ. ಆದರೆ ತನ್ನ ಬದ್ಧತೆ ಹಾಗೂ ಕುಟುಂಬದ ಸದಸ್ಯರ ಬೆಂಬಲದಿಂದ ಟಈಮ್ ಇಂಡಿಯಾದ ಉಪನಾಯಕರಾಗಿದ್ದಾರೆ.
|
ಪಾಂಡ್ಯ ಸಹೋದರರು
ಟೀಮ್ ಇಂಡಿಯಾದ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಉತ್ತಮ ಭವಿಷ್ಯವನ್ನು ಹೊಂದಿದ್ದಾರೆ. ಹಾರ್ದಿಕ್ ಪಾಂಡ್ಯ ಈಗಾಗಲೇ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಭದ್ರಮಾಡಿಕೊಂಡಿದ್ದರೆ ಕೃಣಾಲ್ ಪಾಂಡ್ಯ ಕೂಡ ಸಾಕಷ್ಟು ಭರವಸೆಯನ್ನು ಮೂಡಿಸುತ್ತಿದ್ದಾರೆ. ಬಡತನದಿಂದ ಬಂದ ಈ ಸೋದರರು ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವೆಬ್ಸೈಟ್ವೊಂದು ವಿವರಿಸಿದಂತೆ ಅದೆಷ್ಟೋ ಬಾರಿ ಈ ಸೋದರರು ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಮ್ಯಾಗಿಯನ್ನು ತಿಂದು ಹೊಟ್ಟೆ ತುಂಬಿಸಿಕೊಂಡಿದ್ದರಂತೆ. ಆದರೆ ಈಗ ಕೋಟಿ ಕೋಟಿ ಬೆಲೆ ಬಾಳುವ ಕಾರಿನಲ್ಲಿ ಓಡಾಡುತ್ತಿದ್ದಾರೆ.