ಮೊದಲ ಪಂದ್ಯದ ಸೋಲಿನಿಂದ ಆಘಾತ
"ಈ ತಂಡ ಮೊದಲ ಪಂದ್ಯದ ಸೋಲಿನ ಬಳಿಕ ಮಾನಸಿಕವಾಗಿ ಕುಸಿದುಹೋಗಿತ್ತು. ಯಾಕೆಂದರೆ ಕೇವಲ ಎರಡು ದಿನಗಳ ಅವಧಿಯಲ್ಲಿ ರಚಿಸಿದ ತಂಡದ ವಿರುದ್ಧ ಅವರು ಸೋಲು ಕಂಡಿದ್ದರು. ಆ ಸೋಲಿನ ಆಘಾತದಿಂದ ಅವರು ಹೊರಗೆ ಬರುವುದು ಸಾಧ್ಯವಿರಲಿಲ್ಲ" ಎಂದು ರಮೀಜ್ ರಾಜಾ ವಿಶ್ಲೇಷಣೆ ಮಾಡಿದ್ದಾರೆ.
ಒತ್ತಡದಿಂದ ತಪ್ಪುಗಳನ್ನು ದ್ವಿಗುಣಗೊಳಿಸುತ್ತಾರೆ
"ಅವರು ಮೊದಲ ಪಂದ್ಯದಲ್ಲಿ ಸೋಲಿನ ಬಳಿಕ ಒತ್ತಡಕ್ಕೆ ಒಳಗಾದರು. ಇದರಿಂದಾಗಿ ತಪ್ಪುಗಳನ್ನು ಮಾಡುತ್ತಾ ಹೋದರು. ಇದು ಪಾಕಿಸ್ತಾನ ತಂಡದ ಕೆಟ್ಟ ಅಭ್ಯಾಸವಾಗಿದೆ. ಅವರು ತಪ್ಪುಗಳಿಂದ ಪಾಠ ಕಲಿಯುವುದಿಲ್ಲ. ಬದಲಾಗಿ ಒತ್ತಡದಿಂದಾಗಿ ತಪ್ಪನ್ನು ದ್ವಿಗುಣಗೊಳಿಸುತ್ತಾರೆ" ಎಂದು ರಮೀಜ್ ರಾಜಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿಕೆ ನೀಡಿದ್ದಾರೆ.
ತಂಡದಲ್ಲಿ ಬದಲಾವಣೆಯಾಗಬೇಕು
ಇನ್ನು ಇದೇ ಸಂದರ್ಭದಲ್ಲಿ ಅವರು ಪಾಕಿಸ್ತಾನ ತಂಡದ ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ತಂಡದೊಳಗಿನ ವಾತಾವರಣವನ್ನು ಬದಲಾಯಿಸುವ ಪ್ರಯತ್ನ ಮಾಡಬೇಕು ಎಂದಿದ್ದಾರೆ. "ಇದು ಬದಲಾವಣೆಯ ಸಮಯ. ಅವರು ಮನಸ್ಥಿತಿಯನ್ನು ಬದಲಾಯಿಸುವ ಅಗತ್ಯವಿದೆ. ಹೊಸ ಪ್ರತಿಭೆಗಳೊಂದಿಗೆ ಪ್ರಯೋಗವನ್ನು ನಡೆಸಬೇಕು. ಪಾಕಿಸ್ತಾನ ಕ್ರಿಕೆಟ್ನ ಒಳಿತಿಗಾಗಿ ಮಹತ್ವದ ಬದಲಾವಣೆಗಳನ್ನು ಮಾಡುವ ಅಗತ್ಯವಿದೆ" ಎಂದಿದ್ದಾರೆ ರಮೀಜ್ ರಾಜಾ.
ಟಿ20 ಸರಣಿಗೆ ಪಾಕಿಸ್ತಾನ ಸಜ್ಜು
ಪಾಕಿಸ್ತಾನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವೈಟ್ವಾಶ್ ಅವಮಾನಕ್ಕೆ ತುತ್ತಾದ ಬಳಿಕ ಈಗ ಟಿ20 ಸರಣಿಗೆ ಸಜ್ಜಾಗುತ್ತಿದೆ. ಇದು ಕೂಡ ಮೂರು ಪಂದ್ಯಗಳ ಸರಣಿಯಾಗಿದ್ದು ಈ ಸರಣಿಗಾಗಿ ಇಂಗ್ಲೆಂಡ್ ಇಯಾನ್ ಮೋರ್ಗನ್ ನೇತೃತ್ವದ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಶುಕ್ರವಾರ ಈ ಸರಣಿಯ ಮೊದಲ ಪಂದ್ಯ ನಡೆಯಲಿದೆ.