ಬ್ಯಾಟಿಂಗ್ ವಿಭಾಗದ ಬಗ್ಗೆ ಚೋಪ್ರ ಪ್ರತಿಕ್ರಿಯೆ
ಟೀಮ್ ಇಂಡಿಯಾದ ಮಾಜಿ ಆಟಗಾರನಾಗಿರುವ ಆಕಾಶ್ ಚೋಪ್ರ ಭಾರತದ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಕಳವಳ ಪಡುವಂತಿದೆ ಎಂದಿದ್ದಾರೆ. ಇದರಲ್ಲಿ ಆರಂಭಿಕ ಆಟಗಾರ ಕೆಎಲ್ ರಾಹುಲ್ ಬಗ್ಗೆ ಆತಂಕ ಪಡುವಂತದ್ದೇನೂ ಇಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ್ ಪೂಜಾರ ಕೂಡ ರನ್ಗಳಿಸುತ್ತಿದ್ದಾರೆ ಎಂದಿದ್ದಾರೆ ಚೋಪ್ರ. ಆದರೆ ಭಾರತದ ಅನುಭವಿ ಆಟಗಾರನಾಗಿರುವ ಅಜಿಂಕ್ಯಾ ರಹಾನೆ ಬ್ಯಾಟ್ನಿಂದ ಕೆಲ ಪ್ರಮಾಣದ ರನ್ ಬಂದಿದ್ದರೂ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ ಎಂದಿದ್ದಾರೆ ಚೋಪ್ರಾ.
ಕಳವಳ ಪಡಲು ದೊಡ್ಡ ಕಾರಣ ಪಂತ್
ಆಕಾಶ್ ಚೋಪ್ರ ಟೀಮ್ ಇಂಡಿಯಾದ ಪ್ರದರ್ಶನದಲ್ಲಿ ಹೆಚ್ಚು ಕಳವಳ ಪಡಬೇಕಾದ ವಿಚಾರವನ್ನು ಹೇಳಿದ್ದಾರೆ. ಯುವ ಆಟಗಾರ ರಿಷಭ್ ಪಂತ್ ಪ್ರದರ್ಶನ ಹೆಚ್ಚಿನ ಕಳವಳವನ್ನು ಮೂಡಿಸಿತ್ತಿದೆ ಎಂದಿದ್ದಾರೆ. ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಆಕಾಶ್ ಚೋಪ್ರ ಕೆಳ ಕ್ರಮಾಂಕದಲ್ಲಿ ರಿಷಭ್ ಪಂತ್ ಮೇಲೆ ಹೆಚ್ಚಿನ ಜವಾಬ್ಧಾರಿಯಿದೆ ಎಂದಿದ್ದಾರೆ. ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಹಾಗೂ ಇಂಗ್ಲೆಂಡ್ ವಿಒರುದ್ಧ ಭಾರತದಲ್ಲಿ ನಡೆದ ಪಂದ್ಯದಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ರಿಷಭ್ ಪಂತ್ ಇಂಗ್ಲೆಂಡ್ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ.
ಐದು ಬೌಲರ್ಗಳು ಆಡುತ್ತಿರುವಾಗ ಪಂತ್ ರನ್ಗಳಿಸಲೇಬೇಕಿದೆ
ಆಕಾಶ್ ಚೋಪ್ರಾ ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಐದು ಬೌಲರ್ಗಳೊಂದಿಗೆ ಕಣಕ್ಕಿಳಿಯುತ್ತಿರುವಾಗ ರಿಷಭ್ ಪಂತ್ ಮೇಲೆ ಹೆಚ್ಚಿನ ಜವಾಬ್ಧಾರಿಯಿರುತ್ತದೆ. ಅವರು ಬ್ಯಾಟ್ನಿಂದ ರನ್ಗಳಿಸಲೇಬೇಕಾಗುತ್ತದೆ ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಅವರು ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ರಿಷಭ್ ಪಂತ್ ಸ್ಥಾನವನ್ನು ಪಡೆದುಕೊಂಡಿದ್ದಾಗ ವೃದ್ಧಿಮಾನ್ ಸಾಹಾ ಅವರಂತಾ ಆಟಗಾರರು ತಂಡದಲ್ಲಿ ಸ್ಥಾನ ಪಡೆಯಲು ಅವಕಾಶವಿರುವುದಿಲ್ಲ ಎಂದಿದ್ದಾರೆ.
ಪಂತ್ಗೆ ಮುನ್ನ ಜಡೇಜಾ ಕಣಕ್ಕಿಳಿಯಲಿ
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ನಾಲ್ಕನೇ ಪಂದ್ಯದಲ್ಲಿ ಆಡುವ ಕ್ರಮಾಂಕದಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ ಚೋಪ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾದ ಆಲ್ರೌಂಡರ್ ರವೀಂದ್ರ ಜಡೇಜಾ ಅವರನ್ನು ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಿ ನಂತರದ ಕ್ರಮಾಂಕದಲ್ಲಿ ರಿಷಭ್ ಪಂತ್ ಅವರನ್ನು ಕಣಕ್ಕಿಳಿಸಲು ಸಲಹೆ ನೀಡಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಸೆಪ್ಟೆಂಬರ್ 2 ರಿಂದ ಆರಂಭವಾಗಲಿದೆ. ಲಂಡನ್ನ ಕಿಂಗ್ಸ್ಟನ್ ಓವಲ್ನಲ್ಲಿ ಈ ಪಂದ್ಯ ನಡೆಯಲಿದೆ.