ಹಾರ್ದಿಕ್ ಪಾಂಡ್ಯ ಭಾರತದ ಅತ್ಯಂತ ಮೌಲ್ಯಯುತ ಆಟಗಾರ
ಇತ್ತೀಚಿನ ದಿನಗಳಲ್ಲಿ ಭಾರತದ ಪರವಾಗಿ ಅಮೋಘ ಪ್ರದರ್ಶನ ನೀಡಿ ಮಿಂಚುತ್ತಿರುವ ಹಾರ್ದಿಕ್ ಪಾಂಡ್ಯ ಭಾರತ ತಂಡದ ಅತ್ಯಂತ ಮೌಲ್ಯಯುತ ಆಟಗಾರ ಎಂಬುದು ಆಕಾಶ್ ಚೋಪ್ರ ಅಭಿಪ್ರಾಯ. ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ ಬಳಿಕ ಹಾರ್ದಿಕ್ ಕೆಲ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ್ದು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೂಡ ತನ್ನದಾಗಿಸಿಕೊಂಡಿದ್ದಾರೆ.
ಹಾರ್ದಿಕ್ ಅಮೋಘ ಕಮ್ಬ್ಯಾಕ್
ಕಳೆದ ವರ್ಷ ನಡೆದ ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿ ಫಿಟ್ನೆಸ್ನಲ್ಲಿಯೂ ಸಮಸ್ಯೆಗೆ ಒಳಗಾಗಿದ್ದ ಹಾರ್ದಿಕ್ ಪಾಂಡ್ಯ ಬಳಿಕ ತಂಡದಿಂದ ಹೊರಗುಳಿದಿದ್ದರು. ನಂತರ ಐದು ತಿಂಗಳ ಕಾಲ ವಿರಾಮವನ್ನು ಪಡೆದು ಐಪಿಎಲ್ನಲ್ಲಿ ಆಡಿದ ಅವರು ಆಲ್ರೌಮಡರ್ ಆಗಿ ಮಾತ್ರವಲ್ಲದೆ ನಾಯಕನಾಗಿಯೂ ಮಿಂಚಿದರು. ಈ ಮೂಲಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಭಾರತದ ಪರವಾಗಿಯೂ ಫಾರ್ಮ್ ಮುಂದುವರಿಸಿರುವ ಹಾರ್ದಿಕ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿಯೂ ಹಾರ್ದಿಕ್ ಭರ್ಜರಿ ಪ್ರದರ್ಶನ ನೀಡಿದ್ದು ಭಾರತ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದಾರೆ.
ಹಾರ್ದಿಕ್ ತನ್ನನ್ನು ಸಾಬೀತುಪಡಿಸಿದ್ದಾರೆ
ಆಕಾಶ್ ಚೋಪ್ರ ಹಾರ್ದಿಕ್ ಪಾಂಡ್ಯ ಪ್ರದರ್ಶನದ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. "ಹಾರ್ದಿಕ್ ಪಾಂಡ್ಯ ನಿಜಕ್ಕೂ ಒರ್ವ ಅದ್ಭುತ ಪ್ರತಭಾವಂತ ಆಟಗಾರ. ಭಾರತ ತಂಡದ ವೈಟ್ಬಾಲ್ ಮಾದರಿಯಲ್ಲಿ ತಾನು ಅತ್ಯಂತ ಮೌಲ್ಯಯುತ ಆಟಗಾರ ಎಂಬುದನ್ನು ಅವರೇ ಸಾಬಿತುಪಡಿಸಿದ್ದಾರೆ. ಆತನ ಸನಿಹದಲ್ಲಿಯೂ ಯಾರಾದರೂ ಇದ್ದಾರೆ ಎಂದು ನನಗೆ ಅನಿಸುತ್ತಿಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.
ಪಾಂಡ್ಯಾಗೆ ಬದಲಿ ಆಟಗಾರನ್ನು ಹುಡುಕುವುದು ಅಸಾಧ್ಯ
ತಮ್ಮ ಯೂಟ್ಯೂಬ್ ಚಾನೆಲ್ನ್ಲಲಿ ಮಾತನಾಡಿರುವ ಆಕಾಶ್ ಚೋಪ್ರ ಭಾರತ ತಂಡಕ್ಕೆ ಸ್ಪಿನ್ ಆಲ್ರೌಂಡರ್ಗಳು ಸಾಕಷ್ಟು ಆಯ್ಕೆಗಳು ಇರಬಹುದು. ಆದರೆ ಹಾರ್ದಿಕ್ ಪಾಂಡ್ಯ ರೀದಿ ವೇಗದ ಬೌಲಿಂಗ್ ಆಲ್ರೌಂಡರ್ನನ್ನು ಹುಡುಕುವುದು ಕಷ್ಟ ಎಂದಿದ್ದಾರೆ. "ಹಾರ್ದಿಕ್ ಪಾಂಡ್ಯ ಆಡಲು ಸಮರ್ಥವಾಗಿದ್ದರೆ ಅವರಿಗೆ ಬದಲಿ ಆಟಗಾರನನ್ನು ಹುಡುಕುವುದು ಅಸಾಧ್ಯ. ಭಾರತದಲ್ಲಿ ಸಾಕಷ್ಟು ಸ್ಪಿನ್ ಬೌಲಿಂಗ್ ಆಲ್ರೌಂಡರ್ಗಳು ದೊರೆಯುತ್ತಾರೆ. ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು. ಆದರೆ ವೇಗದ ಬೌಲಿಂಗ್ ಆಲ್ರೌಂಡರ್ನನ್ನು ಹುಡುಕುವುದು ಅಸಾಧ್ಯ. ಅದು ಸಾಧ್ಯವೇ ಇಲ್ಲ" ಎಂದಿದ್ದಾರೆ ಆಕಾಶ್ ಚೋಪ್ರ.