ಎರಡು ದಶಕಗಳ ಹಿಂದಿನ ಕ್ರಿಕೆಟ್ ಕಥೆ
ಇಂದಿಗೆ ಎರಡು ದಶಕಗಳ ಹಿಂದಿನ ಕ್ರಿಕೆಟ್ ಕಥೆ. ಫೆಬ್ರವರಿ 7, 1999ರಲ್ಲಿ ದೆಹಲಿಯ ಕೋಟ್ಲಾ ಮೈದಾನದಲ್ಲಿ ಭಾರತ - ಪಾಕಿಸ್ತಾನದ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ವಾಸಿಂ ಅಕ್ರಂ, ಸಯೀದ್ ಅನ್ವರ್, ಇಜಾಜ್ ಅಹಮದ್, ಇಂಜಮಾಮ್, ಯೂಸುಫ್ ಯೂಹಾನ ಮುಂತಾದ ಘಟಾನುಗಟಿಗಳಿದ್ದ ಟೀಂ ಅದು. ಆ ಪಂದ್ಯದಲ್ಲಿ ಹತ್ತಕ್ಕೆ ಹತ್ತು ವಿಕೆಟ್ ಅನ್ನು ಕುಂಬ್ಳೆ ಪಡೆದು ದಾಖಲೆ ನಿರ್ಮಿಸಿದ್ದರು. ಈ ಅಪರೂಪದ ದಾಖಲೆಯನ್ನು ತಪ್ಪಿಸಲು ಸಡಗೋಪನ್ ರಮೇಶ್ ಪ್ರಯತ್ನಿಸಿದ್ದರು ಎಂದು ಕುಂಬ್ಳೆ ಸಂದರ್ಶನವೊಂದರಲ್ಲಿ ಇತ್ತೀಚೆಗೆ ಹೇಳಿದ್ದರು.
ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ನೇರಪ್ರಸಾರ
ಇತ್ತೀಚೆಗಿನ ಎಲ್ಲಾ ಕ್ರಿಕೆಟ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡದಲ್ಲೂ ನೇರಪ್ರಸಾರದ ವೀಕ್ಷಕವಿವರಣೆಯನ್ನು ನೀಡುತ್ತಿರುವುದು ಗೊತ್ತಿರುವ ವಿಚಾರ. ವಿಜಯ್ ಭಾರದ್ವಾಜ್ ಸೇರಿದಂತೆ, ಕರ್ನಾಟಕದ ಹಲವು ಮಾಜೀ ಕ್ರಿಕೆಟಿಗರು ಕಾಮೆಂಟ್ರಿ ನೀಡುತ್ತಿದ್ದಾರೆ. ಭಾರತ-ನ್ಯೂಜಿಲ್ಯಾಂಡ್ ನಾಲ್ಕನೇ ಟಿ20 ಪಂದ್ಯದ ವೇಳೆ, ಕುಂಬ್ಳೆ ಕಾಮೆಂಟ್ರಿ ಬಾಕ್ಸಿಗೆ ಆಗಮಿಸಿದ್ದರು.
ಬ್ಯಾಂಡೇಜ್ ಹಾಕಿಕೊಂಡು ಕುಂಬ್ಳೆ ಬೌಲಿಂಗ್
ಆ ವೇಳೆ, ಬ್ಯಾಂಡೇಜ್ ಹಾಕಿಕೊಂಡು ಕುಂಬ್ಳೆ ಬೌಲಿಂಗ್ ಮಾಡಿದ ವಿಚಾರ ಪ್ರಸ್ತಾವಕ್ಕೆ ಬಂದಿದೆ. ಅದು, 2002ರಲ್ಲಿ ಆಂಟಿಗುವಾದಲ್ಲಿ ಭಾರತ-ವೆಸ್ಟ್ ಇಂಡೀಸ್ ನಡುವಿನ ಪಂದ್ಯ. ಬ್ಯಾಂಡೇಜ್ ಹಾಕಿಕೊಂಡು ಕುಂಬ್ಳೆ ಬೌಲಿಂಗ್ ಮಾಡಿದ್ದರು. ಅಂದು ತಮ್ಮ ದವಡೆ ಒಡೆತಕ್ಕೆ ಅಸಲಿ ಕಾರಣ ಏನು ಎನ್ನುವುದನ್ನು ಕುಂಬ್ಳೆ, ಮೊನ್ನೆಯ ಕಾರ್ಯಕ್ರಮದಲ್ಲಿ ವಿವರಿಸಿದ್ದರು.
ಆಗ ಕೋಚ್ ಆಗಿದ್ದವರು ಜಾನ್ ರೈಟ್
ಆಗ ಕೋಚ್ ಆಗಿದ್ದವರು ಜಾನ್ ರೈಟ್. ವೆಸ್ಟ್ ಇಂಡೀಸ್ 2ನೇ ಹೊಸ ಬಾಲ್ ತೆಗೆದುಕೊಂಡಿತ್ತು. ಭಾರತದ ಆರನೇ ವಿಕೆಟ್ ಪತನದ ನಂತರ ಆಗ ವಿಕೆಟ್ ಕೀಪರ್ ಆಗಿದ್ದ ಅಜಯ್ ರಾತ್ರಾ ಬ್ಯಾಟ್ ಮಾಡಲು ಹೋಗಬೇಕಾಗಿತ್ತು. ಆದರೆ ಹೊಸ ಬಾಲ್ಗೆ ರಾತ್ರಾ ಅಷ್ಟು ಚೆನ್ನಾಗಿ ಆಡುವುದಿಲ್ಲ. ನೀನು ಚೆನ್ನಾಗಿ ಆಡ್ತೀಯಾ, ಹೋಗು ಬ್ಯಾಟಿಂಗ್ ಮಾಡೆಂದು ಕೋಚ್ ಜಾನ್ ರೈಟ್ ನನ್ನನ್ನು ಕಳುಹಿಸಿದರು.
ಹೊಸ ಬಾಲ್ ನನ್ನ ದವಡೆಗೆ ಬಿತ್ತು
ಆಗ ಬ್ಯಾಟಿಂಗ್ ಮಾಡುವ ವೇಳೆ, ಹೊಸ ಬಾಲ್ ನನ್ನ ದವಡೆಗೆ ಬಿತ್ತು, ಗಾಯವಾಯಿತು. ಅಂದಿನ ಪಂದ್ಯ ಮುಗಿದ ನಂತರ ವೈದರನ್ನು ಸಂಪರ್ಕಿಸಿದೆ. ನಂತಿಂಗ್ ಟು ವರಿ ಎಂದ್ರು. ಆದರೂ, ನನಗೆ ನೋವು ಕಾಡುತ್ತಿತ್ತು. ಆ ಪಂದ್ಯದಲ್ಲಿ ನಾವು ಫಾಸ್ಟ್ ಬೌಲರ್, ಇಬ್ಬರು ಸ್ಪಿನ್ ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ನಾನು ಗಾಯಗೊಂಡಿದ್ದರಿಂದ ತೆಂಡೂಲ್ಕರ್ ಒಬ್ಬರೇ ಸ್ಪಿನ್ ಮಾಡಬೇಕಿತ್ತು.
ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಿದ್ದೆ
ಟೀಂಗೆ ಸ್ಪಿನ್ನರ್ ಅವಶ್ಯಕತೆ ನನಗೆ ಗೊತ್ತಾಯಿತು. ಕೂಡಲೇ, ಫಿಸಿಯೋಥೆರಪಿಯವರ ಬಳಿ ಬೌಲಿಂಗ್ ಮಾಡುತ್ತೇನೆ ಎಂದು ಕೇಳಿದೆ. ಆಗ ಅವರು ತಮಾಷೆ ಮಾಡಬೇಡಿ ಎಂದರು. ಆದರೂ. ಬೌಲಿಂಗ್ ಮಾಡ್ತೀನಿ ಎಂದು ದೊಡ್ಡ ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಿದೆ.
16 ಓವರ್ ಬ್ರಿಯಾನ್ ಲಾರಾಗೆ ಬೌಲ್ ಮಾಡಿ ಅವರನ್ನು ಔಟ್ ಮಾಡಿದ್ದೆ
ಸತತವಾಗಿ ಹದಿನಾರು ಓವರ್ ಬ್ರಿಯಾನ್ ಲಾರಾಗೆ ಬೌಲ್ ಮಾಡಿ ಅವರನ್ನು ಔಟ್ ಮಾಡಿದ್ದೆ. ಅಂದು, ರಾತ್ರಾ ಮೊದಲು ಬ್ಯಾಟ್ ಮಾಡಲು ಕೋಚ್ ರೈಟ್ ನಿರ್ದೇಶನ ನೀಡಿದ್ದರಿಂದ ನಾನು ಬ್ಯಾಂಡೇಜ್ ಕಟ್ಟಿಕೊಂಡು ಬೌಲ್ ಮಾಡಬೇಕಾಯಿತು ಎಂದು ಅನಿಲ್ ಕುಂಬ್ಳೆ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.