ದೇಶಾದ್ಯಂತ ಕೊರೊನಾ ವೈರಸ್ ಭೀಕರ ಪರಿಸ್ಥಿತಿಯನ್ನು ಉಂಟು ಮಾಡಿದೆ. ಆಮ್ಲಜನಕ ಸಹಿತ ವೈದ್ಯಕೀಯ ಮೂಲಸೌಕರ್ಯಗಳ ಕೊರತೆ ದೇಶದ ಎಲ್ಲೆಡೆ ಕಾಡುತ್ತಿದೆ. ಸಾಮಾನ್ಯರು ಸೆಲೆಬ್ರಿಟಿಗಳು ಎನ್ನದೆ ಎಲ್ಲರೂ ಇದರಿಂದಾಗಿ ಸಾಕಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂತದ್ದೇ ಪರಿಸ್ಥಿತಿಯನ್ನು ಕ್ರಿಕೆಟಿಗ ಸುರೇಶ್ ರೈನಾ ಎದುರಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗನ ನೆರವಿಗೆ ಬಂದಿದ್ದು ನಟ ಸೋನು ಸೂದ್.
ಬಾಲಿವುಡ್ ನಟ ಸೋನು ಸೂದ್ ಮೊದಲ ಅಲೆಯ ಕೊರೊನಾ ವೈರಸ್ ಸಂದರ್ಭದಲ್ಲಿ ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದರು. ಈಗ ಎರಡನೇ ಅಲೆಯಲ್ಲಿಯೂ ಸೋನು ಸೂದ್ ಭಾರೀ ಪ್ರಮಾಣದಲ್ಲಿ ಸ್ಪಂದನೆಯನ್ನು ನೀಡಿ ನೆರವಾಗುತ್ತಿದ್ದಾರೆ. ಸುರೇಶ್ ರೈನಾ ಟ್ವಿಟ್ಟರ್ನಲ್ಲಿ ಕೇಳಿದ ಸಹಾಯಕ್ಕೂ ಸೋನು ಸೂದ್ ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ.
ಐಪಿಎಲ್ ಸ್ಥಗಿತಕ್ಕೆ ಅಸಲಿ ಕಾರಣ ಮತ್ತು ಪುನಾರಂಭದ ಬಗ್ಗೆ ಗಂಗೂಲಿ ಸುಳಿವು
ಟ್ವಿಟ್ಟರ್ನಲ್ಲಿ ಸುರೇಶ್ ರೈನಾ ಉತ್ತರ ಪ್ರದೇಶ್ ಮೀರತ್ನಲ್ಲಿರುವ ಕುಟುಂಬಸ್ಥರೊಬ್ಬರಿಗೆ ಅಗತ್ಯವಾಗಿ ಆಕ್ಸಿಜನ್ ಸಿಲಿಂಡರ್ನ ಅಗತ್ಯವಿದೆ ಎಂದು ಬರೆದುಕೊಂಡು ವಿವರಗಳನ್ನು ನೀಡಿದ್ದರು. ಸಹಾಯ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೂಡ ಉಲ್ಲೇಖಿಸಿದ್ದರು.
ಇದಕ್ಕೆ ನಟ ಸೋನು ಸೂದ್ ಟ್ವಿಟ್ಟರ್ನಲ್ಲಿಯೇ ಪ್ರತಿಕ್ರಿಯೆ ನೀಡಿದರು. "ಪೂರಕ ಮಾಹಿತಿಯನ್ನು ನೀಡಿ ನಾನು ತಲುಪಿಸುತ್ತೇನೆ" ಎಂದು ಸೋನು ಸೂದ್ ಟ್ವೀಟ್ನಲ್ಲಿ ಉತ್ತರಿಸಿದರು. ಅದಾದ ಬಳಿಕ ಸೋನು ಸೂದ್ ಮತ್ತೊಂದು ಟ್ವೀಟ್ನಲ್ಲಿ "ಹತ್ತು ನಿಮಿಷಗಳಲ್ಲಿ ತಲುಪಲಿದೆ" ಎಂದು ತಿಳಿಸಿದ್ದಾರೆ.
ಸುರೇಶ್ ರೈನಾ ಈ ಬಾರಿಯ ಐಪಿಎಲ್ನಲ್ಲಿ ಭಾಗಿಯಾಗಿದ್ದರು. ಆದರೆ ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿ ಹೆಚ್ಚಾದ ಕಾರಣದಿಂದಾಗಿ ಹಾಗೂ ಐಪಿಎಲ್ ಬಯೋಬಬಲ್ನ ಒಳಗೆ ಕೊರೊನಾ ವೈರಸ್ ಪತ್ತೆಯಾದ ಕಾರಣ ಟೂರ್ನಿಯನ್ನು ಮುಂಡೂಡಲಾಗಿದೆ.