2011ರ ಏಕದಿನ ವಿಶ್ವಕಪ್ಅನ್ನು ಭಾರತಕ್ಕೆ ಶ್ರೀಲಂಕಾ ಮಾರಾಟ ಮಾಡಿತ್ತು ಎಂದು ಹೇಳಿ ಲಂಕಾ ಕ್ರಿಕೆಟ್ ತಂಡದ ವಿರುದ್ಧ ಅಂದಿನ ಕ್ರೀಡಾ ಸಚಿವರೇ ಗಂಭೀರ ಆರೋಪವನ್ನು ಮಾಡಿದ್ದರು. ಈ ವಿಚಾರವಾಗಿ ಶ್ರೀಲಂಕಾ ಸರ್ಕಾರ ತನಿಖೆಯನ್ನು ನಡೆಸಲು ಆದೇಶಿಸಿದೆ. ಆದರೆ ಈ ಮಧ್ಯೆ ತನ್ನ ಹೇಳಿಕೆಯಲ್ಲಿ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ ಶ್ರೀಲಂಕಾ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್ಗಮಗೆ.
ಇತ್ತೀಚೆಗೆ ಶ್ರೀಲಂಕಾದ ಖಾಸಗೀ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ನೇರವಾಗಿ ಶ್ರೀಲಂಕಾ ತಂಡ ಈ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂದು ಮಹಿಂದಾನಂದ ಅಲುತ್ಗಮಗೆ ಹೇಳಿದ್ದರು. ಆದರೆ ಈಗ 'ಅಂದಿನ ಪಂದ್ಯದಲ್ಲಿ ಫಿಕ್ಸಿಂಗ್ಸ್ ನಡೆದಿರಬಹುದು ಎಂಬ ಅನುಮಾನ ತನ್ನನ್ನು ಕಾಡುತ್ತಿದೆ' ಎಂದು ಮಾತನ್ನು ಬದಲಿಸಿಕೊಂಡಿದ್ದಾರೆ.
ಐಪಿಎಲ್ಗಾಗಿ ಏಷ್ಯಾಕಪ್ ರದ್ದಾಗಲ್ಲ, ಶ್ರೀಲಂಕಾ ಇಲ್ಲವೇ ಯುಎಇನಲ್ಲಿ ಟೂರ್ನಿ: ಪಿಸಿಬಿ ಮುಖ್ಯಸ್ಥ
ಶ್ರೀಲಂಕಾ ಸರ್ಕಾರ ಈ ಪ್ರಕರಣದ ಕುರಿತಾಗಿ ತನಿಖೆಯನ್ನು ನಡೆಸಲು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದೆ. ಆ ತಂಡ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್ಗಮಗೆ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಈ ಸಂದರ್ಭದಲ್ಲಿ ಮಹಿಂದಾನಂದ ಫಿಕ್ಸಿಂಗ್ ನಡೆದಿದೆ ಎಂಬ ಅನುಮಾನವಿದೆ ಎಂದಿದ್ದಾರೆ.
ಆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಹಿಂದಾನಂದ ಅಲುತ್ಗಮಗೆ ಫಿಕ್ಸಿಂಗ್ ನಡೆದಿರಬಹುದಾದ ನನ್ನ ಅನುಮಾನದ ಕುರಿತಾಗಿ ತನಿಖೆಯನ್ನು ನಾನು ಬಯಸಿದ್ದೇನೆ. ಈ ಬಗ್ಗೆ 2011ರಲ್ಲಿ ಐಸಿಸಿಗೆ ನೀಡಿದ್ದ ದೂರಿನ ಪ್ರತಿಯನ್ನು ಕೂಡ ತನಿಖಾಧಿಕಾರಿಗಳಿಗೆ ನೀಡಿದ್ದೇನೆ ಎಂದಿದ್ದಾರೆ.
ಭಾರತ ಮೊದಲ ವಿಶ್ವಕಪ್ ಗೆದ್ದ ಅವಿಸ್ಮರಣೀಯ ದಿನ: ಹೇಗಿತ್ತು ಗೊತ್ತಾ ಆ ರೋಚಕ ಹಾದಿ!
ಮಹಿಂದಾನಂದ ಮಾಡಿದ್ದ ಈ ಆರೋಪಕ್ಕೆ ಶ್ರೀಲಂಕಾದ ಅಂದಿನ ವಿಶ್ವಕಪ್ ತಂಡದ ನಾಯಕ ಕುಮಾರ ಸಂಗಕ್ಕರ ಮತ್ತು ಹಿರಿಯ ಆಟಗಾರ ಮಹೇಲ ಜಯವರ್ಧನೆ ಪ್ರತಿಕ್ರಿಯಿಸಿದ್ದರು. ಮಾಜಿ ಕ್ರೀಡಾ ಸಚಿವರ ಬಳಿ ಈ ಆರೋಪಕ್ಕೆ ಸಂಬಂಧಪಟ್ಟಂತೆ ಇರುವ ದಾಖಲೆಯನ್ನು ತೋರಿಸಲು ಮತ್ತು ಅದಕ್ಕೆ ಪೂರಕವಾದ ತನಿಖೆ ನಡೆಯಲಿ ಎಂದು ಅವರು ಆಗ್ರಹಿಸಿದ್ದರು.