ಚುನಾವಣಾ ಪ್ರಚಾರದಲ್ಲಿ ಜಡೇಜಾ ಭಾಗಿ
ಸದ್ಯ ವಿಶ್ರಾಂತಿಯಲ್ಲಿರುವ ರವೀಂದ್ರ ಜಡೇಜಾ ತಮ್ಮ ಬಿಡುವಿನ ಸಮಯದಲ್ಲಿ ಪತ್ನಿಗಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಜಡೇಜಾ ಪತ್ನಿ ರಿವಾಬಾ ಗುಜರಾತ್ನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಜಾಮ್ನಗರ (ಉತ್ತರ) ಕ್ಷೇತ್ರದಲ್ಲಿ ಅವರು ಸ್ಪರ್ಧೆ ಮಾಡಿದ್ದು, ರವೀಂದ್ರ ಜಡೇಜಾ ಪತ್ನಿಯ ಪರವಾಗಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ರವೀಂದ್ರ ಜಡೇಜಾ ಸಹೋದರಿ ಕೂಡ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಸೂರ್ಯಕುಮಾರ್ ಆಯ್ಕೆ ಸಾಧ್ಯತೆ?
ರವೀಂದ್ರ ಜಡೇಜಾ ಅನುಪಸ್ಥಿತಿ ಹಿನ್ನೆಲೆಯಲ್ಲಿ ಆಯ್ಕೆಗಾರರು ಸೂರ್ಯಕುಮಾರ್ ಯಾದವ್ ಮತ್ತು ಸೌರಭ್ ಕುಮಾರ್ ಅವರನ್ನು ಸ್ಟಾಂಡ್ಬೈ ಆಟಗಾರರಾಗಿ ಹೆಸರಿಸಿದ್ದಾರೆ. ಆದರೆ, ಇವರಿಬ್ಬರಲ್ಲಿ ಯಾರಿಗೆ ಅವಕಾಶ ಸಿಗುತ್ತದೆ ಎನ್ನುವುದು ಶೀಘ್ರದಲ್ಲೇ ತಿಳಿಯಲಿದೆ.
ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಬಾಂಗ್ಲಾದೇಶದಲ್ಲಿ ಭಾರತ ಎ ತಂಡದೊಂದಿಗೆ ಇರಲಿದ್ದಾರೆ. ಸೂರ್ಯಕುಮಾರ್ ಯಾದವ್ ಪ್ರಸ್ತುತ ಏಕದಿನ ಸರಣಿಗಾಗಿ ನ್ಯೂಜಿಲೆಂಡ್ನಲ್ಲಿದ್ದಾರೆ. ನ್ಯೂಜಿಲೆಂಡ್ ಪ್ರವಾಸದ ನಂತರ ಅವರು ವಿಶ್ರಾಂತಿ ಪಡೆಯಲಿದ್ದಾರೆ.
"ಸೂರ್ಯ ಮತ್ತು ಸೌರಭ್ ಸ್ಟ್ಯಾಂಡ್ಬೈನಲ್ಲಿದ್ದಾರೆ. ಆದರೆ ಭಾರತ ಎ ಸರಣಿಯ ನಂತರ ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಅಕ್ಷರ್ ಪಟೇಲ್ ತಂಡದೊಂದಿಗೆ ಇರುತ್ತಾರೆ ಮತ್ತು ಏಷ್ಯಾಖಂಡದಲ್ಲಿ ಅತ್ಯುತ್ತಮ ಟೆಸ್ಟ್ ದಾಖಲೆಯನ್ನು ಹೊಂದಿದ್ದಾರೆ. ಸೂರ್ಯಕುಮಾರ್ ಯಾದವ್ ಸೀಮಿತ ಓವರ್ ಕ್ರಿಕೆಟ್ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ, ಅವರನ್ನು ಟೆಸ್ಟ್ ಕ್ರಿಕಟ್ ಆಡಿಸುವ ಬಗ್ಗೆ ನಾವು ಚಿಂತಿಸಬೇಕಿದೆ" ಎಂದು ಆಯ್ಕೆ ಸಮಿತಿಯ ಸದಸ್ಯರು ಹೇಳಿದರು.
ಆದರೆ, ಜಡೇಜಾ ಅನುಪಸ್ಥಿತಿಯಲ್ಲಿ ಭಾರತಕ್ಕೆ ಹೆಚ್ಚಿನ ತೊಂದರೆ ಎದುರಾಗುವುದಿಲ್ಲ. ಅಕ್ಷರ್ ಪಟೇಲ್ ಬಾಂಗ್ಲಾದೇಶದಲ್ಲಿ ತಂಡದೊಂದಿಗೆ ಇರುತ್ತಾರೆ ಮತ್ತು ಅವರು ಎರಡೂ ಟೆಸ್ಟ್ಗಳಲ್ಲಿ ಅವಕಾಶ ಪಡೆಯುವುದು ಖಚಿತವಾಗಿದೆ.
ಬಾಂಗ್ಲಾದೇಶ ಟೆಸ್ಟ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಕೆಎಸ್ ಭರತ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್ , ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.