ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕ್ರೀಡಾಪಟುಗಳು ಸಾಥ್ ನೀಡುತ್ತಿದ್ದಾರೆ. ಟೀಮ್ ಇಂಡಿಯಾ ಆಟಗಾರು ಸರ್ಕಾರಕ್ಕೆ ಆರ್ಥಿಕ ನೆರವನ್ನು ನೀಡುವ ನಿರ್ಧಾರಕ್ಕೆ ಬಂದಿದ್ದಾರೆ. ಇಂದು ಟೀಮ್ ಇಂಡಿಯಾದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ 10 ಲಕ್ಷ ರೂಪಾಯಿಗಳ ನೆರವನ್ನು ನೀಡಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅಜಿಂಕ್ಯಾ ರಹಾನೆ 10 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಈ ದೇಣಿಗೆಯನ್ನು ರಹಾನೆ ನೀಡಿದ್ದಾರೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮತ್ತೋರ್ವ ಕ್ರಿಕೆಟರ್ ಸುರೇಶ್ ರೈನಾ 52 ಲಕ್ಷ ರೂಪಾಯಿ ಮೊತ್ತವನ್ನು ಕೊರೊನಾ ವಿರುದ್ಧದ ಹೋರಾಟಕ್ಕೆ ನೀಡಿದ್ದರು. 31 ಲಕ್ಷ ಪ್ರಧಾನಮಂತ್ರಿ ನಾಗರಿಕ ಸಹಾಯ ಮತ್ತು ತುರ್ತುಪರಿಸ್ಥಿತಿಗಳ ಪರಿಹಾರ ನಿಧಿಗೆ ಮತ್ತು 21 ಲಕ್ಷ ರೂಪಾಯಿಯನ್ನು ಉತ್ತರಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೂ ಮೆಚ್ಚುಗೆ ಸೂಚಿಸಿ ಟ್ವಿಟ್ ಮಾಡಿದ್ದರು.
ಕೊರೊನಾ ವಿರುದ್ಧ ಹೋರಾಟ: 51 ಕೋಟಿ ರೂ. ನೆರವು ಘೋಷಿಸಿದ ಬಿಸಿಸಿಐ
ಟೀಮ್ ಇಂಡಿಯಾದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ 50 ಲಕ್ಷ ರೂಪಾಯಿಯನ್ನು ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ದೇಣಿಗೆಯಾಗಿ ನೀಡಿದ್ದರು. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೂಡ ತೆಲಂಗಾಣ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 5 ಲಕ್ಷ ರೂಪಾಯಿ ನೀಡಿದ್ದಾರೆ.
ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಬಿಸಿಸಿಐ ಕೂಡ ಕೈಜೋಡಿಸಿದ್ದು ದೊಡ್ಡ ಮೊತ್ತದ ಹಣವನ್ನು ದೇಣಿಗೆ ನೀಡಿದೆ. ಪ್ರಧಾನಿಗಳ ನಿಧಿಗೆ ಬಿಸಿಸಿಐ 51 ಕೋಟೊ ರೂಪಾಯಿ ಹಣವನ್ನು ದೇಣಿಗೆಯಾಗಿ ನೀಡಿದೆ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜೈ ಶಾ ಈ ನಿರ್ಧಾರವನ್ನು ಶನಿವಾರ ಪ್ರಕಟಿಸಿದ್ದರು