ಪಾಕ್ ತಂಡಕ್ಕೆ ಇಬ್ಬರು ನಾಯಕರು ಬೇಕು: ಅಖ್ತರ್
ಶೊಯೇಬ್ ಅಝ್ತರ್ ಅವರ ಪ್ರಕಾರ ಪಾಕಿಸ್ತಾನ ತಂಡಕ್ಕೆ ಇಬ್ಬರು ನಾಯಕರ ಅವಶ್ಯಕತೆ ಇದೆಯಂತೆ. ಟೆಸ್ಟ್ ತಂಡಕ್ಕೆ ಒಬ್ಬ ಮತ್ತು ಟೀ20 ಹಾಗೂ ಏಕದಿನ ಮಾದರಿಗೆ ಒಬ್ಬ ನಾಯಕನ ಅನಿವಾರ್ಯತೆ ಇದೆ ಎಂಬುದು ಅಖ್ತರ್ ಸಲಹೆಯಾಗಿದೆ. "ಹ್ಯಾರಿಸ್ ಸೊಹೇಲ್ ಅವರಿಗೆ ಟಿ20 ಮತ್ತು ಏಕದಿನ ತಂಡಗಳನ್ನು ಮುನ್ನಡೆಸುವ ಅವಕಾಶ ನೀಡಬೇಕು. ಹಾಗೆಯೇ ಬಾಬರ್ ಆಝಮ್ ಅವರನ್ನು ಟೆಸ್ಟ್ ತಂಡದ ನಾಯಕನನ್ನಾಗಿ ಮಾಡಬೇಕು. ಬಾಬರ್ ಆಝಮ್ ಅದ್ಭುತವಾಗಿ ರನ್ ಗಳಿಸುತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ," ಎಂದು ಅಖ್ತರ್ ತಮ್ಮ ಚಾನಲ್ನಲ್ಲಿ ವಿವರಿಸಿದ್ದಾರೆ.
ಸರ್ಫರಾಝ್ಗೆ ಮೆದುಳೇ ಇಲ್ಲ
ಇನ್ನು ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ತಂಡ ಸೋಲನುಭವಿಸಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಅಖ್ತರ್, 32 ವರ್ಷದ ಅನುಭವಿ ಆಟಗಾರ ಹಾಗೂ ಪಾಕ್ ನಾಯಕ ಸರ್ಫರಾಝ್ ತಲೆಯಲ್ಲಿ ಮಿದುಲೇ ಇಲ್ಲ ಎಂದು ಜರಿದಿದ್ದರು. "ಪಾಕಿಸ್ತಾನ ತಂಡ ರನ್ ಚೇಸ್ ಮಾಡುವುದರಲ್ಲಿ ಅಷ್ಟು ಉತ್ತಮವಾಗಿಲ್ಲ ಎಂಬ ಸತ್ಯವನ್ನು ಎಲ್ಲರೂ ತಿಳಿದಿದ್ದಾರೆ. ಹೀಗಿರುವಾಗ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡದ್ದೇ ಸೋಲಿಗೆ ಬಹುದೊಡ್ಡ ಕಾರಣ. ನಾಯಕ ಸರ್ಫರಾಝ್ ಅವರ ತಲೆಯಲ್ಲಿ ಮೆದುಳೇ ಇಲ್ಲ. ಬ್ರೇಯ್ನ್ ಲೆಸ್," ಎಂದು ಅಖ್ತರ್ ಟೀಕಾ ಪ್ರಹಾರ ನಡೆಸಿದ್ದರು.
ಲೀಗ್ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನ
ವಿಶ್ವಕಪ್ನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ವೆಸ್ಟ್ ಇಂಡೀಸ್ ಎದುರು ಹೀನಾಯ ಸೋಲುಂಡಿದ್ದ ಪಾಕಿಸ್ತಾನ ಬಳಿಕ ಟೀಮ್ ಇಂಡಿಯಾ ವಿರುದ್ಧವೂ ಎಂದಿನಂತೆ ಮುಗ್ಗರಿಸಿತ್ತು. ಆರಂಭಿಕ ಪಂದ್ಯಗಳಲ್ಲಿ ಅನುಭವಿಸಿದ ಸೋಲುಗಳಿಂದಾಗಿ ಭಾರಿ ಹೊಡೆತ ಅನುಭವಿಸಿದ ಪಾಕ್ , ಲೀಗ್ನ ಅಂತಿಮ ಪಂದ್ಯಗಳಲ್ಲಿ ಜಯ ದಾಖಲಿಸಿದರೂ ಕೂಡ ನಾಕ್ಔಟ್ ಟಿಕೆಟ್ ಪಡೆಯಲು ಸಾಧ್ಯವಾಗದೆ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗರೆಲ್ಲಾ ತಂಡದ ವೈಫಲ್ಯಕ್ಕೆ ನಾಯಕ ಸರ್ಫರಾಝ್ ಕೂಡ ಕಾರಣ ಎಂದು ಜರಿದಿದ್ದರು.
ವಿಶ್ವ ಶ್ರೇಷ್ಠ ತಂಡ ರಚಿಸುವ ಕಡೆಗೆ ಮಾಸ್ಟರ್ ಪ್ಲ್ಯಾನ್!
ಇತ್ತೀಚೆಗೆ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್, ವಿಶ್ವ ಶ್ರೇಷ್ಠ ಕ್ರಿಕೆಟ್ ತಂಡ ಕಟ್ಟುವ ಕಡೆಗೆ ಯೋಜನೆ ರೂಪಿಸುತ್ತಿರುವುದಾಗಿ ಹೇಳಿದ್ದರು. ಅಮೆರಿಕಾ ಪ್ರವಾಸದ ವೇಳೆ ಅಮೆರಿಕದಲ್ಲಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಇಮ್ರಾನ್ ಖಾನ್ ಈ ವಿಚಾರ ತಿಳಿಸಿದ್ದರು. "ವಿಶ್ವಕಪ್ ಬಳಿಕ, ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಅಭಿವೃದ್ಧಿ ಪಡಿಸಬೇಕು ಎಂದೆನಿಸಿದೆ. ಪಾಕಿಸ್ತಾನ ಕ್ರಿಕೆಟ್ ತಂಡದ ದಿಕ್ಕನ್ನೇ ಬದಲಾಯಿಸಲಿದ್ದೇನೆ. ಸಾಕಷ್ಟು ನಿರಾಸೆ ಎದುರಾಗಿದೆ. ಮುಂದಿನ ವಿಶ್ವಕಪ್ನಲ್ಲಿ ಅತ್ಯಂತ ವೃತ್ತಿಪರ ಪಾಕಿಸ್ತಾನ ತಂಡ ನಿಮ್ಮೆದುರು ಬರಲಿದೆ. ನನ್ನ ಈ ಮಾತುಗಳನ್ನು ನೆನಪಿನಲ್ಲಿ ಇರಿಸಿ," ಎಂದು ಇಮ್ರಾನ್ ಖಾನ್ ವಿಶ್ವಾಸದ ಮಾತುಗಳನ್ನಾಡಿದ್ದರು.