ಏಳಕ್ಕೆ ಏಳರಲ್ಲೂ ಭಾರತಕ್ಕೆ ಜಯ
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ, ರೋಹಿತ್ ಶರ್ಮಾ ಅವರ ಶತಕ (140), ಕೆಎಲ್ ರಾಹುಲ್ (57) ಮತ್ತು ವಿರಾಟ್ ಕೊಹ್ಲಿ (77) ಅವರ ಸಮಯೋಚಿತ ಆಟದಿಂದ ಬೃಹತ್ ಎನ್ನುವಂಥ 336 ರನ್ ಕಲೆಹಾಕಿತು. 337 ರನ್ ಬೆನ್ನತ್ತಿದ ಪಾಕಿಸ್ತಾನ 117 ರನ್ ವರೆಗೂ ಒಂದೇ ವಿಕೆಟ್ ಕಳೆದುಕೊಂಡಿದ್ದರೂ, ನಂತರ ಕುಲದೀಪ್ ಯಾದವ್ ಮಾರಕ ಬೌಲಿಂಗಿಗೆ ಪಟಪಟನೆ ಕೆಲ ವಿಕೆಟ್ ಕಳೆದುಕೊಂಡಿತು. ಕಡೆಗೆ 40 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 212 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬೌಲಿಂಗ್ ನಲ್ಲಾಗಲಿ, ಬ್ಯಾಟಿಂಗ್ ನಲ್ಲಾಗಲು ಪಾಕಿಸ್ತಾನ ಎಂದೂ ಭಾರತಕ್ಕೆ ಸಮನಾಗಿರಲೇ ಇಲ್ಲ. ಸದ್ಯಕ್ಕೆ ಈ ವಿಶ್ವಕಪ್ ನಲ್ಲಿ ಅಜೇಯವಾಗುಳಿದಿರುವ ಭಾರತದ ಈ ದಿಗ್ವಿಜಯಕ್ಕೆ ಬಂದಿರುವ ಪ್ರಶಂಸೆಯ ಮಾತುಗಳು ಕೆಳಗಿನಂತಿವೆ.
ಮತ್ತೊಂದು (ಸರ್ಜಿಕಲ್) 'ಸ್ಟ್ರೈಕ್'
ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಭಾರತದ ಈ ದಿಗ್ವಿಜಯವನ್ನು ಪಾಕಿಸ್ತಾನದ ಮೇಲಾದ ಮತ್ತೊಂದು (ಸರ್ಜಿಕಲ್) 'ಸ್ಟ್ರೈಕ್' ಎಂದೇ ಬಣ್ಣಿಸಿದ್ದಾರೆ. ಪಾಕ್ ಉಗ್ರರ ಮೇಲೆ ಇತ್ತೀಚೆಗೆ ನಡೆದ ಏರ್ ಸ್ಟ್ರೈಕ್ ಅನ್ನು ಗಮನದಲ್ಲಿಟ್ಟುಕೊಂಡು, "ಪಾಕಿಸ್ತಾನದ ಮೇಲೆ ಭಾರತದ ಮತ್ತೊಂದು 'ಸ್ಟ್ರೈಕ್', ಆದರೆ ಫಲಿತಾಂಶ ಮಾತ್ರ ಒಂದೇ. ಅತ್ಯದ್ಭುತ ಆಟ ಪ್ರದರ್ಶಿಸಿದ್ದಕ್ಕೆ ಭಾರತ ತಂಡಕ್ಕೆ ಅಭಿನಂದನೆಗಳು. ಪ್ರತಿಯೊಬ್ಬ ಭಾರತೀಯನಲ್ಲಿಯೂ ಅಭಿಮಾನ ಉಕ್ಕಿ ಹರಿಯುತ್ತಿದೆ, ಎಲ್ಲರೂ ಈ ಸಂಭ್ರಮವನ್ನು ಆಚರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ವಿಶ್ವಕಪ್: ಪಾಕ್ ವಿರುದ್ಧದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಹಿಟ್ಮ್ಯಾನ್!
ಕೊಹ್ಲಿ ಅವರಿಗೆ ವಿಶೇಷ ಅಭಿನಂದನೆ
ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೂಡ ಭಾರತ ತಂಡವನ್ನು ಅಭಿನಂದಿಸಿದ್ದಾರೆ. ಆಟ ಆರಂಭಕ್ಕೂ ಮೊದಲು ಅವರು ಭಾರತಕ್ಕೆ ಶುಭ ಕೋರಿದ್ದರು. "ಅಮೋಘ ಜಯ ಗಳಿಸಿದ್ದಕ್ಕಾಗಿ ಭಾರತ ತಂಡಕ್ಕೆ ಶುಭಾಶಯಗಳು. ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಕುಲದೀಪ್ ಯಾದವ್ ಮತ್ತು ತಂಡದಿಂದ ಈ ಜಯ ಸಾಧ್ಯವಾಗಿದೆ. ಏಕದಿನ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಅವರು 11 ಸಾವಿರ ರನ್ ದಾಟಿದ್ದಕ್ಕಾಗಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಅಭಿನಂದನೆಗಳು" ಎಂದು ಕುಮಾರಸ್ವಾಮಿ ಅವರು ಹಾಡಿ ಹೊಗಳಿದ್ದಾರೆ.
ವಿಶ್ವಕಪ್ ನಿಮ್ಮ ಕೈಲಾಗುವ ಮಾತಲ್ಲ
ಅಭಿನಂದನ್ ಅವರು ಬಳಸಿದ ಚಹಾ ಕಪ್ಪನ್ನೇ ಹಿಡಿದುಕೊಂಡು ಮಜಾ ಮಾಡ್ರಿ. ಏಕೆಂದ್ರೆ, ವಿಶ್ವಕಪ್ ನಿಮ್ಮ ಕೈಲಾಗುವ ಮಾತಲ್ಲ. ನೀವು ಸಂಭ್ರಮಿಸುವ ಒಂದೇ ಸಂದರ್ಭವೆಂದರೆ, ಅಚಾನಕ್ಕಾಗಿ ಯಾವುದೇ ಆಯುಧ ಹಿಡಿದಿಲ್ಲದ ಭಾರತೀಯ ಯೋಧನನ್ನು ಹಿಡಿದಾಗ ಮಾತ್ರ. ಕಾಶ್ಮೀರದಲ್ಲಿ ಪ್ರಾಕ್ಸಿ ಯುದ್ಧ ಮಾಡಿದಂತೆ, ಕ್ರಿಕೆಟ್ ಅಂಗಳದಲ್ಲಿಯೂ ಪ್ರಾಕ್ಸಿ ಹೋರಾಟ ಮಾಡಿರಿ ಎಂದು ಸೋನಮ್ ಮಹಾಜನ್ ಪಾಕಿಸ್ತಾನವನ್ನು ಛೇಡಿಸಿದ್ದಾರೆ. ಇನ್ನೂ ಮುಂದೆ ಹೋಗಿ, ಪಾಕಿಸ್ತಾನದ ಸೈನ್ಯ ಮಾತ್ರವಲ್ಲ ಪಾಕಿಸ್ತಾನದ ಕ್ರಿಕೆಟ್ ಆಟಗಾರರೂ ಅವರ ಪ್ರಧಾನಿಯ ಮಾತು ಕೇಳುವುದಿಲ್ಲ ಎಂದು ಕಾಲೆಳೆದಿದ್ದಾರೆ. ಸಂಗತಿ ಏನೆಂದರೆ, ಒಂದು ವೇಳೆ ಪಾಕ್ ಟಾಸ್ ಗೆದ್ದರೆ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬೇಕು ಎಂದು ಇಮ್ರಾನ್ ಖಾನ್ ಅವರು ಕಿವಿಮಾತು ಹೇಳಿದ್ದರು. ಆದರೆ, ಪಾಕಿಸ್ತಾನದ ಕ್ಯಾಪ್ಟನ್ ಸರ್ಫರಾಜ್ ಅವರು ಟಾಸ್ ಗೆದ್ದರೂ ಭಾರತಕ್ಕೆ ಮೊದಲು ಬ್ಯಾಟಿಂಗ್ ಬಿಟ್ಟುಕೊಟ್ಟರು. ಇದರಿಂದ ಭಾರತ ಭಾರೀ ಮೊತ್ತ ಪೇರಿಸುವಂತಾಯಿತು.
ವಿಶ್ವಕಪ್: ಸಚಿನ್ ವಿಶ್ವ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ!
ತಂಡವನ್ನು ಕೊಂಡಾಡಿದ ಪಿಯೂಶ್
ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರು ಭಾರತ ತಂಡದ ವಿಜಯವನ್ನು ಕೊಂಡಾಡಿದ್ದಾರೆ ಮತ್ತು ಮುಂದಿನ ಪಂದ್ಯಗಳಲ್ಲಿಯೂ ಜಯಭೇರಿ ಬಾರಿಸಿ ವಿಶ್ವಕಪ್ ಅನ್ನು ಎತ್ತಿಕೊಂಡು ಬರಲಿ ಎಂದು ಹಾರೈಸಿದ್ದಾರೆ. ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಮತ್ತೊಂದು ಅಭೂತಪೂರ್ವ ವಿಜಯ ಸಾಧಿಸಿದ್ದಕ್ಕೆ ಟೀಮ್ ಇಂಡಿಯಾಗೆ ಹೃತ್ಪೂರ್ವಕ ಅಭಿನಂದನೆಗಳು. ನೀಲಿ ದಿರಿಸಿನ ಹುಡುಗರಿಗೆ ಮುಂದಿನ ಪಂದ್ಯಗಳಿಗಾಗಿ ಶುಭ ಹಾರೈಕೆಗಳು, ವಿಶ್ವಕಪ್ ಗೆದ್ದು ಬನ್ನಿ ಎಂದು ಅವರು ಆಶಿಸಿದ್ದಾರೆ.
ಟ್ರೋಲ್ ಆಗುತ್ತಿದ್ದಾರೆ ಪಾಕ್ ಆಟಗಾರರು
ಭಾರತಕ್ಕೆ ದಕ್ಕಿದ ಈ ಅರ್ಹ ವಿಜಯದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ಅಭಿಮಾನಿಗಳು ಕೆಂಡ ಕಾರುತ್ತಿದ್ದಾರೆ. ನಾವಿಲ್ಲಿ ವಿಜಯದ ಚಿಂತೆ ಮಾಡುತ್ತಿದ್ದರೆ, ಪಾಕಿಸ್ತಾನದ ಆಟಗಾರರು ಹಿಂದಿನ ರಾತ್ರಿ ಬರ್ಬರ್ ತಿಂದುಕೊಂಡು ಮಜಾ ಮಾಡುತ್ತಿದ್ದರು ಎಂದು ಅಭಿಮಾನಿಯೊಬ್ಬ ವಾಗ್ದಾಳಿ ಮಾಡಿದ್ದಾನೆ. ಅಲ್ಲದೆ, ಪಾಕಿಸ್ತಾನಿ ಆಟಗಾರರು ಸೋತು ಪೆವಿಲಿಯನ್ನಿಗೆ ಮರಳುತ್ತಿದ್ದಾಗ, ಪಾಕ್ ಕ್ರಿಕೆಟ್ ಪ್ರೇಮಿಗಳು ಅವರನ್ನು ನಿಂದಿಸುತ್ತಿದ್ದುದು ಕೆಲ ವಿಡಿಯೋಗಳಲ್ಲಿ ಕಂಡುಬಂದಿದೆ. ಜೊತೆಗೆ, ಟ್ವಿಟ್ಟರ್ ನಲ್ಲಿಯೂ ತರಹೇವಾರಿ ತಮಾಷೆಯ ಟ್ವೀಟ್ ಗಳನ್ನು ಮಾಡಲಾಗುತ್ತಿದ್ದು, ಪಾಕಿಸ್ತಾನಿ ಕ್ಯಾಪ್ಟನ್ ಸರ್ಫರಾಜ್ ಸೇರಿದಂತೆ ಹಲವರು ಟ್ರೋಲ್ ಆಗುತ್ತಿದ್ದಾರೆ.