ಜಯದ ಹೊಸ್ತಿಲಲ್ಲಿ ಎಡವಿದ ಕೆಕೆಆರ್
ಮೊದಲು ಇನ್ನಿಂಗ್ಸ್ ಮುಗಿಸಿದ್ದ ಆರ್ಸಿಬಿ, ವಿರಾಟ್ ಕೊಹ್ಲಿ ಶತಕದೊಂದಿಗೆ 213 ರನ್ ಗಳಿಸಿತ್ತು. ರಸೆಲ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರುವಾಗ ಕೆಕೆಆರ್ ಗೆಲುವಿಗೆ 49 ಎಸೆತಗಳಲ್ಲಿ 135 ರನ್ಗಳ ಅಗತ್ಯವಿತ್ತು. ರಸೆಲ್ 25 ಎಸೆತಗಳಿಗೆ 65 ರನ್ ಚಚ್ಚಿ ತಂಡವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರಾದರೂ ಜಯದ ಹೊಸ್ತಿಲಲ್ಲಿ ಕೆಕೆಆರ್ ಎಡವಿತ್ತು.
ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ
'ಎರಡೇ ಎಸೆತಗಳಲ್ಲಿ ಮುಗಿಸಬೇಕಿದ್ದ 10 ರನ್ನಿಂದ ನಾವು ಸೋತಿದ್ದೇವೆ. ಪಂದ್ಯದ ಮಧ್ಯಭಾಗದಲ್ಲಿ ನಾವು ಸ್ಪಲ್ಪ ಉತ್ತಮ ರನ್ ಕಲೆ ಹಾಕಿದ್ದರೆ ಅಂತಿಮ ಕ್ಷಣದಲ್ಲಿ ಒತ್ತಡಕ್ಕೆ ಒಳಗಾಗುತ್ತಿರಲಿಲ್ಲ. ಆರಂಭದಲ್ಲಿ ನಾವು ಸ್ವಲ್ಪವೇ ವೇಗದ ರನ್ ಗಳಿಸಿದ್ದರೂ ಪಂದ್ಯ ಗೆಲ್ಲಲು ಸುಲಭವಾಗುತ್ತಿತ್ತು' ಎಂದು ರಸೆಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿಗೆ ಟೂರ್ನಿಯ 2ನೇ ಜಯ
ಏಪ್ರಿಲ್ 19ರ ಪಂದ್ಯದ ಗೆಲುವು ಬೆಂಗಳೂರು ಪಾಲಿಗೆ ಅತ್ಯಂತ ಪ್ರಮುಖವಾಗಿತ್ತು. ಯಾಕೆಂದರೆ ಅದಕ್ಕೂ ಹಿಂದಿನ 8 ಪಂದ್ಯಗಳಲ್ಲಿ ಆರ್ಸಿಬಿ 7ರಲ್ಲಿ ಸೋತಿತ್ತು. ಪಂದ್ಯದಲ್ಲಿ ವಿರಾಟ್ ಕೊಹ್ಲಿ ಐಪಿಎಲ್ 5ನೇ ಶತಕ (100/58), ಮೋಯಿನ್ ಅಲಿ (66/28) ಅರ್ಧಶತಕ ಬಾರಿಸಿ ಆರ್ಸಿಬಿ ಸಂಭ್ರಮಕ್ಕೆ ಕಾರಣರಾಗಿದ್ದರು.
ಸಿಹಿ ಮತ್ತು ಹುಳಿ ಅನಿಸಿಕೆ
'ನಿತೀಶ್ ರಾಣಾ ಕೂಡ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಆದರೆ ಅಂತಿಮವಾಗಿ ನಾವು ನಿರಾಶೆ ಅನುಭವಿಸುವಂತಾಯ್ತು. ಚೆನ್ನಾಗಿ ಬ್ಯಾಟಿಂಗ್ ನಡೆಸಿದರೂ ಅದಕ್ಕೆ ಫಲ ಸಿಗಲಿಲ್ಲ. ಇದೊಂಥರಾ ಸಿಹಿ-ಹುಳಿ ಅನಿಸಿಕೆ ಎರಡೂ ಒಟ್ಟೊಟ್ಟಿಗೆ ಬಂದಂತೆ' ಎಂದು ರಸೆಲ್ ನುಡಿದಿದ್ದಾರೆ. ನಿತೀಶ್ ರಾಣಾ ಕೂಡ ಭರ್ಜರಿ ಬ್ಯಾಟಿಂಗ್ ನಡೆಸಿ 46 ಎಸೆತಕ್ಕೆ 85 ರನ್ ಸೇರಿಸಿದ್ದರು.