ಫುಟ್ಬಾಲ್ ವಿಧಾನ ಬರಲಿ
'ಎರಡೂ ತಂಡಗಳು ಗಳಿಸಿದ ಬೌಂಡರಿ ಸಂಖ್ಯೆಗಳಿಗೆ ಬದಲಾಗಿ ಮತ್ತೊಂದು ಸೂಪರ್ ಓವರ್ ನಡೆಸಿ, ಆ ಮೂಲಕ ವಿಶ್ವಕಪ್ ವಿಜೇತರನ್ನು ಆರಿಸಬೇಕು ಎಂದು ನನಗನ್ನಿಸುತ್ತಿದೆ. ಇದು ವಿಶ್ವಕಪ್ಗೆ ಮಾತ್ರವೆಂದಲ್ಲ. ಪ್ರಮುಖ ಎಲ್ಲಾ ಪಂದ್ಯಗಳಲ್ಲೂ ಈ ವಿಧಾನ ಪಾಲಿಸುವಂತಾಗಬೇಕು. ಫುಟ್ಬಾಲ್ನಲ್ಲಿ ತಂಡಗಳು ಸಮಬಲ ಸಾಧಿಸಿದಾಗ ಹೆಚ್ಚುವರಿ ಕಾಲಾವಕಾಶ ನೀಡಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಇದರಿಂದ ಹೆಚ್ಚಿನ ಸಮಸ್ಯೆಗಳೇನೂ ಆಗೋಲ್ಲ' ಎಂದು 100 ಎಂಬಿ ಜೊತೆ ಮಾತನಾಡುತ್ತ ತೆಂಡೂಲ್ಕರ್ ಹೇಳಿಕೊಂಡಿದ್ದಾರೆ.
ಪಂದ್ಯಗಳು ಸಮಬಲ
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ಮತ್ತು ಕೇನ್ ವಿಲಿಯಮ್ಸನ್ ಮುಂದಾಳತ್ವದ ನ್ಯೂಜಿಲೆಂಡ್ ಇರಡೂ 241 ರನ್ ಬಾರಿಸಿದ್ದವು. ಕಿವೀಸ್ 50 ಓವರ್ಗೆ 8 ವಿಕೆಟ್ ಕಳೆದು 241 ರನ್ ಬಾರಿಸಿದ್ದರೆ, ಇಂಗ್ಲೆಂಡ್ ಎಲ್ಲಾ ವಿಕೆಟ್ ಕಳೆದು 241 ರನ್ ಬಾರಿಸಿತ್ತು. ಸೂಪರ್ ಓವರ್ನಲ್ಲೂ ಇತ್ತಂಡಗಳು ತಲಾ 15 ರನ್ ಬಾರಿಸಿದ್ದವು. ಆದರೆ ನ್ಯೂಜಿಲೆಂಡ್ನ 17 ಬೌಂಡರಿಗಳಿಗೆ ಬದಲಾಗಿ ಇಂಗ್ಲೆಂಡ್ 26 ಬೌಂಡರಿಗಳನ್ನು ಪರಿಗಣಿಸಿ ಆಂಗ್ಲರಿಗೆ ಚಾಂಪಿಯನ್ ಪಟ್ಟ ನೀಡಲಾಗಿತ್ತು.
ಕ್ರಿಕೆಟಿಗರಿಂದ ಟೀಕೆ
ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಮುಕ್ತಾಯಗೊಂಡ ವಿಶ್ವಕಪ್ ಫೈನಲ್ ಬಳಿಕ ಈಗಿನ ಮತ್ತು ಮಾಜಿ ಕ್ರಿಕೆಟಿಗರೆಲ್ಲ ಫೈನಲ್ನಲ್ಲಿನ ನಿಯಮದ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ರೋಹಿತ್ ಶರ್ಮಾ, ಯುವರಾಜ್ ಸಿಂಗ್, ಗೌತಮ್ ಗಂಭೀರ್, ಚೇತೇಶ್ವರ್ ಪೂಜಾರ ಇವರೆಲ್ಲ ಫೈನಲ್ ನಿಯಮದ ಬಗ್ಗೆ ಅಸಮಾಧಾನ ತೋರಿಕೊಂಡಿದ್ದರು. ಟೂರ್ನಿಯುದ್ದಕ್ಕೂ ಜಂಟಲ್ಮನ್ ಆಟ ತೋರಿದ್ದ ನ್ಯೂಜಿಲೆಂಡ್ ತಂಡ ಟ್ರೋಫಿಯಿಂದ ವಂಚಿಲ್ಪಟ್ಟಿದ್ದು ಅಪಾರ ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿತ್ತು.
ನಾಕೌಟ್ನಲ್ಲಿ ಬದಲಾವಣೆಬೇಕು
ವಿಶ್ವಕಪ್ ನಾಕೌಟ್ ಹಂತಗಳಲ್ಲಿ ಬದಲಾವಣೆಗಳಾಗಬೇಕಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ತೆಂಡೂಲ್ಕರ್, 'ಟೂರ್ನಿಯುದ್ದಕ್ಕೂ ಅದ್ಭುತ ಆಟ ನೀಡಿದ, ಅಗ್ರ ಸ್ಥಾನದಲ್ಲಿ ಕಾಣಿಸಿಕೊಂಡ ಎರಡು ತಂಡಗಳನ್ನು ನಾಕೌಟ್ ಹಂತಗಳಲ್ಲಿ ಪರಿಗಣಿಸುವಂತಾಗಬೇಕು,' ಎಂದರು. ವಿರಾಟ್ ಕೊಹ್ಲಿ ಕೂಡ ವಿಶ್ವಕಪ್ನಲ್ಲಿ ನಾಕೌಟ್ ಬದಲು ಐಪಿಎಲ್ ಮಾದರಿಯ ಪ್ಲೇ ಆಫ್ ಪಂದ್ಯಗಳು ನಡೆಯಬೇಕು ಎಂದು ಹೇಳಿಕೊಂಡಿದ್ದರು.