ಚರ್ಚೆ ಶುರುವಾಗಿದ್ದೆಲ್ಲಿ?
ಪ್ರಣವ್ ಮತ್ತು ಸರ್ಜುನ್ ಆಯ್ಕೆಯ ಚರ್ಚೆ ಶುರುವಿನ ಮೂಲ 4 ವರ್ಷಗಳ ಹಿಂದಿನದ್ದು. ಅಂದರೆ ತಂಡಕ್ಕೆ ಆಯ್ಕೆ ನಡೆದಿದ್ದು 2016ರ ಜೂನ್ನಲ್ಲಿ. ಪ್ರಣವ್ ಅವರು 327 ಎಸೆತಗಳಲ್ಲಿ 1009 ರನ್ ಬಾರಿಸಿದ್ದರೂ ಯಾವುದೇ ಕೊಡುಗೆ ನೀಡಿರದ ಅರ್ಜುನ್ ಅವರನ್ನು ಅಂಡರ್ 16 ವೆಸ್ಟ್ ಝೋನ್ ತಂಡಕ್ಕೆ ಆಯ್ಕೆ ಮಾಡಲಾಗಿತ್ತು, ಪ್ರಣವ್ ಅವರನ್ನು ಕೈಬಿಡಲಾಗಿತ್ತು. ಇದಕ್ಕೆ ಕಾರಣವೆಂದರೆ ಪ್ರಣವ್ ಒಬ್ಬ ಆಟೋ ಡ್ರೈವರ್ ಮಗ, ಅರ್ಜುನ್ ಅವರು ಸಚಿನ್ ಅವರ ಪುತ್ರ ಎಂದು ಎಡಿಟೆಡ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಓಡಾಡಿತ್ತು.
ನಂಜು ಕಾರಿದ್ದವರ ಬಣ್ಣ ಬಯಲು
ಜಾಲತಾಣದಲ್ಲಿ ಹರಿದಾಡುತ್ತಿದ್ದ ಸ್ವಜನಪಕ್ಷಪಾತದ ಆರೋಪ ಹೊರಿಸಿದ್ದ ಫೋಟೋವನ್ನು 'ಲಾಜಿಕಲ್ ಇಂಡಿಯನ್' ತನಿಖೆ ನಡೆಸಿತ್ತು. ಇದರಲ್ಲಿ ತಿಳಿದುಬಂದ ವಿಚಾರವೆಂದರೆ, ವೆಸ್ಟ್ ಝೋನ್ ತಂಡಕ್ಕೆ ಆಯ್ಕೆಯಾಗಬೇಕಾದರೆ ಪ್ರಣವ್ ಅದಕ್ಕೂ ಮುನ್ನ ಮುಂಬೈ ತಂಡದ ಪರ ಆಡಬೇಕಿತ್ತು. ಅಲ್ಲದೆ ಪ್ರಣವ್ ದಾಖಲೆಯ ಆಟವಾಡಿದ್ದು ವೆಸ್ಟ್ ಝೋನ್ ಅಂಡರ್ 16 ತಂಡ ಆಯ್ಕೆ ಮುಗಿದ ಬಳಿಕ. ವೆಸ್ಟ್ ಝೋನ್ ಅಂಡರ್ 16 ತಂಡದ ಆಯ್ಕೆ ನಡೆದು ಒಂದಿಷ್ಟು ಪಂದ್ಯಗಳೂ ನಡೆದು ಆಗಿತ್ತು, ಆ ಬಳಿಕ ಪ್ರಣವ್ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಆಯೋಜಿಸಿದ್ದ ಎಚ್ಟಿ ಭಂಡಾರಿ ಕಪ್ ಇಂಟರ್ಸ್ಕೂಲ್ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ನೀಡಿದ್ದರು.
ಸಂಪೂರ್ಣ ಹಾದಿತಪ್ಪಿಸುವ ಪೋಸ್ಟ್
ವೆಸ್ಟ್ ಝೋನ್ ಅಂಡರ್ 16 ತಂಡಕ್ಕೆ ಆಯ್ಕೆ ನಡೆಯುವಾಗ ಪ್ರಣವ್ ಧನವಾಡೆಗೆ ಅದಾಗಲೇ 16 ವರ್ಷಗಳು ತುಂಬಿದ್ದವು. ಹೀಗಾಗಿ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ನಿಯಮದ ಪ್ರಕಾರ ಪ್ರಣವ್ಗೆ ವೆಸ್ಟ್ ಝೋನ್ ಅಂಡರ್ 16 ತಂಡಕ್ಕೆ ಆಯ್ಕೆಯಾಗುವ ಅರ್ಹತೆಯೇ ಇರಲಿಲ್ಲ. ಹೀಗಾಗಿಯೇ ಅವರು ಆಯ್ಕೆಯಾಗಿರಲಿಲ್ಲ. ಈ ವಿಚಾರವನ್ನು ಸ್ವತಃ ಪ್ರಣವ್ ತಂದೆಯೇ ಸ್ಪಷ್ಟ ಪಡಿಸಿದ್ದರು. ತನ್ನ ಮಗ 1009 ರನ್ ಬಾರಿಸುವ ಮುನ್ನವೇ ಅವನಿಗೆ ಮುಂಬೈ ಅಂಡರ್ 16 ತಂಡಕ್ಕೆ ಆಯ್ಕೆಯಾಗುವ ಅರ್ಹತೆ ಇರಲಿಲ್ಲ ಎಂದು ಪ್ರಣವ್ ತಂದೆ ಹೇಳಿದ್ದರು.
ಪಕ್ಷಪಾತ ನಡೆದಿಲ್ಲ ಎನ್ನುತ್ತದೆ ಸತ್ಯಾಂಶ
ವೆಸ್ಟ್ ಝೋನ್ ಅಂಡರ್ 16 ತಂಡದ ಆಯ್ಕೆ ನಡೆಯುವಾಗ ಅರ್ಜುನ್ ತೆಂಡೂಲ್ಕರ್ ಮತ್ತು ಪ್ರಣವ್ ಪ್ರಣವ್ ಧನವಾಡೆ ಮಧ್ಯೆ ಯಾವುದೇ ಸ್ವಜನಪಕ್ಷಪಾತ ನಡೆದಿಲ್ಲ ಎನ್ನುವುದನ್ನು ಸತ್ಯಾಂಶಗಳು ಹೇಳುತ್ತವೆ. ವೆಸ್ಟ್ ಝೋನ್ ತಂಡಕ್ಕೆ ಆಯ್ಕೆ ನಡೆಸಲು ಇದ್ದ ನಿಯಮಾವಳಿಗಳು ಸಚಿನ್ ಮತ್ತು ಪ್ರಣವ್ ಇಬ್ಬರ ಕುಟುಂಬಕ್ಕೂ ಗೊತ್ತಿತ್ತು. ಹೀಗಾಗಿ ಪ್ರಣವ್ ಕುಟುಂಬದಿಂದ ಈ ಬಗ್ಗೆ ಅಸಮಾಧಾನ ವ್ಯಕ್ತಗೊಂಡಿರಲಿಲ್ಲ. ಸಾಲದಕ್ಕೆ ಪ್ರಣವ್ ಮತ್ತು ಅರ್ಜುನ್ ಇಬ್ಬರೂ ಒಳ್ಳೆಯ ಸ್ನೇಹಿತರು, ಇಬ್ಬರೂ ಪ್ರತೀದಿನ ಇಬ್ಬರು ಮಾತನಾಡುತ್ತಿರುತ್ತಾರೆ ಎಂದು ಪ್ರಣವ್ ತಂದೆಯೇ ಹೇಳಿಕೊಂಡಿದ್ದರು.