ಕರಾಚಿ, ಜನವರಿ 10 : ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು ಮಂಗಳವಾರದಂದು ಮಾಜಿ ಕ್ರಿಕೆಟರ್ ವಾಸೀಂ ಅಕ್ರಂ ವಿರುದ್ಧ ಬಂಧನ ವಾರೆಂಟ್ ಜಾರಿಗೊಳಿಸಿದೆ. ಕರಾಚಿಯಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ 31 ಬಾರಿ ಗೈರು ಹಾಜರಾಗಿದ್ದರಿಂದ ಅಕ್ರಂ ವಿರುದ್ಧ ವಾರೆಂಟ್ ಜಾರಿಯಾಗಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಿನಲ್ಲಿ ತಮ್ಮ ಕಾರಿನ ಮೇಲೆ ಗುಂಡಿನ ದಾಳಿ ನಡೆದಿದ್ದಕ್ಕೆ ಸಂಬಂದಧಿಸಿದಂತೆ ಮೇಜರ್ (ನಿವೃತ್ತ) ಅಮಿರುರ್ ರೆಹಮಾನ್ ವಿರುದ್ಧ ವಾಸೀಂ ಅಕ್ರಂ ಅವರು ಪ್ರಕರಣ ದಾಖಲಿಸಿದ್ದರು. ಈಗ ಇದೇ ಪ್ರಕರಣದಲ್ಲಿ ಅಕ್ರಂ ಅವರಿಗೆ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ. ಜನವರಿ 17ರಂದು ಕೋರ್ಟಿಗೆ ಖುದ್ದು ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಡಾನ್ ವರದಿ ಮಾಡಿದೆ.
ಕರಾಚಿಯ ರಾಷ್ಟ್ರೀಯ ಮೈದಾನದ ಬಳಿ ವಾಸೀಂ ಅಕ್ರಂ ಅವರು ಕಾರಿನಲ್ಲಿ ಸಾಗುತ್ತಿದ್ದಾಗ ಗುಂಡಿನ ದಾಳಿ ನಡೆದಿತ್ತು. ಮುಸುಕುಧಾರಿ ವ್ಯಕ್ತಿಗಳು ವಾಸೀಂ ಅವರಿದ್ದ ಕಾರನ್ನು ಹಿಂಬಾಲಿಸಿಕೊಂಡು ಬಂದು ಗುಂಡಿನ ದಾಳಿ ನಡೆಸಿದ್ದರು.
ಸ್ಟೇಡಿಯಂನಲ್ಲಿ ಪಾಕಿಸ್ತಾನಿ ಬೌಲರ್ ಗಳಿಗೆ ತರಬೇತಿ ನೀಡಲು ಹೋಗುತ್ತಿದ್ದ ವಾಸೀಂ ಅವರು ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲದೆ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು. ಆದರೆ, ನಂತರ ಘಟನೆಗೆ ಸಂಬಂಧಿಸಿದಂತೆ ಅಮಿರುರ್ ಅವರು ಲಿಖಿತ ಕ್ಷಮಾಯಾಚನೆ ಮಾಡಿದ್ದರು.(ಐಎಎನ್ ಎಸ್)