ಏಷ್ಯಾ ಕಪ್ನಲ್ಲಿ ವೃತ್ತಿಜೀವನದ ತಮ್ಮ ಕಳಪೆ ಪ್ರದರ್ಶನ ನೀಡಿದರು
ಪಂಜಾಬ್ ವೇಗಿ ಅರ್ಶ್ದೀಪ್ ಸಿಂಗ್ ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ ಟಿ20 ಸರಣಿಯಲ್ಲಿ ಎಲ್ಲಾ ಐದು ಪಂದ್ಯಗಳನ್ನು ಆಡಿದರು ಮತ್ತು 16.14 ಸರಾಸರಿಯಲ್ಲಿ ಏಳು ವಿಕೆಟ್ಗಳನ್ನು ಪಡೆದರು.
ಅರ್ಶ್ದೀಪ್ ಸಿಂಗ್ ಅವರನ್ನು ಯುಎಇಯಲ್ಲಿ ಭಾರತದ ಏಷ್ಯಾ ಕಪ್ ತಂಡಕ್ಕೆ ಆಯ್ಕೆ ಮಾಡಲಾಯಿತು. ಆದರೆ ಅಲ್ಲಿ ಅರ್ಶ್ದೀಪ್ ಅಂತಾರಾಷ್ಟ್ರೀಯ ವೃತ್ತಿಜೀವನದ ತಮ್ಮ ಕಳಪೆ ಪ್ರದರ್ಶನ ನೀಡಿದರು. ಆಸಿಫ್ ಅಲಿಯ ಕ್ಯಾಚ್ ಕೈಬಿಟ್ಟು ಭಾರತದ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು ಮತ್ತು ಕೆಲವರು ಅವರನ್ನು ನಿರಂತರವಾಗಿ ಟ್ರೋಲ್ ಮಾಡಿದರು.
ಜಸ್ಪ್ರೀತ್ ಬುಮ್ರಾ ಬದಲಿಗೆ ಆಯ್ಕೆಯಾದ ಅರ್ಶ್ದೀಪ್ ಸಿಂಗ್
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನಲ್ಲಿ ನಡೆದ ದ್ವಿಪಕ್ಷೀಯ ಸರಣಿಯಲ್ಲಿ 18.80ರ ಸರಾಸರಿಯಲ್ಲಿ ಎರಡು ಪಂದ್ಯಗಳಲ್ಲಿ ಐದು ವಿಕೆಟ್ಗಳನ್ನು ಕಬಳಿಸುವ ಮೂಲಕ ಯುವ ಬೌಲರ್ ಉತ್ತಮ ಪ್ರದರ್ಶನದೊಂದಿಗೆ ಮರಳಿದರು ಮತ್ತು ನಂತರ ಅರ್ಶ್ದೀಪ್ ಸಿಂಗ್ರ ಪ್ರಗತಿಯನ್ನು ತಡೆಯಲಾಗಲಿಲ್ಲ.
ಬೆನ್ನುನೋವಿನಿಂದಾಗಿ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ನಿಂದ ಹೊರಗುಳಿದಿದ್ದರಿಂದ, ಅರ್ಶ್ದೀಪ್ ಸಿಂಗ್ ಭಾರತದ ವೇಗದ ವಿಭಾಗದಲ್ಲಿ ಜವಾಬ್ದಾರಿಯನ್ನು ತೆಗೆದುಕೊಂಡರು.
ಇನ್ನು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಅರ್ಶ್ದೀಪ್ ಸಿಂಗ್ ತನ್ನ ಸುವರ್ಣ ಅವಕಾಶವನ್ನು ಹೇಗೆ ಬಳಸಿಕೊಂಡರು ಎಂಬುದರ ಕುರಿತು ಬ್ರೆಟ್ ಲೀ ಪ್ರತಿಕ್ರಿಯಿಸಿದರು.
ವಿಶ್ವ ದರ್ಜೆಯ ಯಾರ್ಕರ್ ಎಸೆತಗಳೊಂದಿಗೆ ಸೂಪರ್ಸ್ಟಾರ್
"ಹಿರಿಯ ಜಸ್ಪ್ರೀತ್ ಬುಮ್ರಾ ಅವರು ಟಿ20 ವಿಶ್ವಕಪ್ನಿಂದ ಹೊರಗುಳಿದ ಸಮಯಕ್ಕೆ ಹಿಂತಿರುಗಿದರೆ, ಆಗ ಅರ್ಶ್ದೀಪ್ ಸಿಂಗ್ ಉತ್ತಮವಾಗಿ ಅವರ ಸ್ಥಾನ ತುಂಬಲಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು, ಇದು ಖಂಡಿತವಾಗಿಯೂ ನಿಜವಾಯಿತು. ನನ್ನ ಪ್ರಕಾರ, ಅರ್ಶ್ದೀಪ್ ತಮ್ಮ ವಿಶ್ವ ದರ್ಜೆಯ ಯಾರ್ಕರ್ ಎಸೆತಗಳೊಂದಿಗೆ ಸೂಪರ್ಸ್ಟಾರ್ ಆಗಿದ್ದಾರೆ. ಡೆತ್ ಓವರ್ಗಳಲ್ಲಿ ಖಂಡಿತವಾಗಿ ಚೆನ್ನಾಗಿ ಬೌಲ್ ಮಾಡುತ್ತಾರೆ," ಎಂದು ಬ್ರೆಟ್ ಲೀ ಹೊಗಳಿದರು.
"ಕ್ರಿಕೆಟ್ನಲ್ಲಿ ಒಬ್ಬ ವ್ಯಕ್ತಿಯ ಅನುಪಸ್ಥಿತಿಯು ನಮಗೆ ತಿಳಿದಿರುವಂತೆ ಇನ್ನೊಬ್ಬ ಆಟಗಾರನಿಗೆ ಮಿಂಚುವ ಅವಕಾಶವಾಗಬಹುದು. ಈ ಯುವಕ ಅರ್ಶ್ದೀಪ್ ಸಿಂಗ್ ಅದನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ದೊಡ್ಡ ಪಂದ್ಯಾವಳಿಯಲ್ಲಿ ತಮ್ಮ ಮೊದಲ ವಿಶ್ವಕಪ್ ಆಡಿದರು. ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದರು. ಹೀಗಾಗಿ ಅರ್ಶ್ದೀಪ್ ಸಿಂಗ್ ಭಾರತದ ನನ್ನ ನೆಚ್ಚಿನ ಎಡಗೈ ವೇಗದ ಬೌಲರ್," ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ತಿಳಿಸಿದರು.
ಭಾರತದ ಪರ ಆರು ಪಂದ್ಯಗಳಲ್ಲಿ 10 ವಿಕೆಟ್ಗಳನ್ನು ಗಳಿಸಿದರು
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಟಿ20 ವಿಶ್ವಕಪ್ 2022ರ ಸೂಪರ್ 12 ಹಂತದ ಭಾರತದ ಆರಂಭಿಕ ಪಂದ್ಯದಲ್ಲಿ ಅರ್ಶ್ದೀಪ್ ಸಿಂಗ್ 32 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಅವರು ಪಡೆದ ವಿಕೆಟ್ಗಳಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ, ವಿಕೆಟ್ ಕೀಪರ್-ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮತ್ತು ಕೆಳ ಕ್ರಮಾಂಕದ ಬ್ಯಾಟರ್ ಆಸಿಫ್ ಅಲಿ ಸೇರಿದ್ದರು.
ಇನ್ನು ಅಡಿಲೇಡ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಒತ್ತಡದ ಪಂದ್ಯದಲ್ಲಿ 38 ರನ್ ನೀಡಿ 2 ವಿಕೆಟ್ ಕಿತ್ತರು ಮತ್ತು ಅಂತಿಮ ಓವರ್ನಲ್ಲಿ 20 ರನ್ಗಳನ್ನು ರಕ್ಷಿಸಿದರು. ವಿಕೆಟ್ಕೀಪರ್ ನೂರುಲ್ ಹಸನ್ ವಿರುದ್ಧ ಶಾರ್ಟ್ ಬಾಲ್ ಬಳಸಿ, ಡಕ್ವರ್ತ್-ಲೂಯಿಸ್-ಸ್ಟರ್ನ್ (ಡಿಎಲ್ಎಸ್) ವಿಧಾನದ ಮೂಲಕ ಅರ್ಶ್ದೀಪ್ ಭಾರತಕ್ಕೆ ಐದು ರನ್ಗಳ ಜಯವನ್ನು ಗಳಿಸುವಲ್ಲಿ ಯಶಸ್ವಿಯಾದರು.
ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಟಿ20 ವಿಶ್ವಕಪ್ ಅಭಿಯಾನದಲ್ಲಿ ಭಾರತದ ಪರ ಆರು ಪಂದ್ಯಗಳಲ್ಲಿ ಆಡಿ 15.60 ಸರಾಸರಿಯಲ್ಲಿ 10 ವಿಕೆಟ್ಗಳನ್ನು ಗಳಿಸಿದರು.