ಆ್ಯಶಸ್ ಟೆಸ್ಟ್ ಸರಣಿಗಾಗಿ ಕಾಂಗರೂ ನಾಡಿಗೆ ಕಾಲಿಟ್ಟ ಇಂಗ್ಲೆಂಡ್ ಆಡಿದ ಮೂರು ಟೆಸ್ಟ್ಗಳಲ್ಲಿ ಸೋತು ಈಗಾಗಲೇ ಸರಣಿ ಕನಸು ಕೈ ಬಿಟ್ಟಿದೆ. ಐದು ಪಂದ್ಯಗಳ ಸರಣಿಯಲ್ಲಿ 3-0 ಹಿನ್ನಡೆ ಸಾಧಿಸುವ ಮೂಲಕ ಜೋ ರೂಟ್ ಪಡೆ ಭಾರೀ ಟೀಕೆಗೆ ಗುರಿಯಾಗಿದೆ. ಅನೇಕ ಮಾಜಿ ಕ್ರಿಕೆಟಿಗರು ನಾಯಕತ್ವ ಜೊತೆಗೆ ಕೋಚ್ ಬದಲಾವಣೆಗೆ ಆಗ್ರಹಿಸಿದ್ದಾರೆ.
ಆ್ಯಶಸ್ ಟೆಸ್ಟ್ ಸರಣಿ ಸೋತ ಬಳಿಕ ಇಂಗ್ಲೆಂಡ್ ತಂಡವು ಸಾಕಷ್ಟು ಸವಾಲು ಎದುರಿಸುತ್ತಿದೆ. ದೇಶೀಯ ಕ್ರಿಕೆಟ್ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡುವಂತಹ ಆಟಗಾರರನ್ನು ನೀಡುತ್ತಿಲ್ಲ ಎಂಬ ಆರೋಪವು ಕೇಳಿಬಂದಿದೆ.
ಇಸಿಬಿ ವ್ಯವಸ್ಥಾಪಕ ನಿರ್ದೇಶಕ ಆಶೆಲಿ ಗೈಲ್ಸ್ ಪ್ರಸ್ತುತ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ತಂಡ ಅನುಭವಿಸಿದ ಸೋಲಿಗೆ ಕ್ಷಮೆಯಾಚಿಸಿದ್ದಾರೆ. ವ್ಯವಸ್ಥಿತ ಬದಲಾವಣೆಯು ಸಮಯದ ಅಗತ್ಯವಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಆದ್ರೆ ನಾಯಕ ಅಥವಾ ಕೋಚ್ ವಜಾಗೊಳಿಸುವುದರಿಂದ ಇಂಗ್ಲೆಂಡ್ ತಂಡದ ಅದೃಷ್ಟ ಬದಲಾಗುವುದಿಲ್ಲ ಎಂದು ಜೋ ರೂಟ್ ತಂಡವನ್ನ ಬೆಂಬಲಿಸಿದ್ದಾರೆ.
"ಈ ಆಶಸ್ ಸರಣಿಯನ್ನು ಕಳೆದುಕೊಳ್ಳುವ ಜವಾಬ್ದಾರಿಯನ್ನು ನಾನು ಸಂಪೂರ್ಣವಾಗಿ ಹೊರುತ್ತೆನೆ" ಎಂದು ಗೈಲ್ಸ್ ಬಿಬಿಸಿ ಸ್ಪೋರ್ಟ್ಗೆ ತಿಳಿಸಿದರು.
"ನಾವು ಹೆಚ್ಚು ವ್ಯವಸ್ಥಿತ ಬದಲಾವಣೆ, ಸಾಮೂಹಿಕ ಜವಾಬ್ದಾರಿ ಮತ್ತು ಸಾಮೂಹಿಕ ಪರಿಹಾರಗಳನ್ನು ನೋಡದ ಹೊರತು, ನಾವು ಬಯಸಿದ ಯಾವುದೇ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ನೀವು ನನ್ನನ್ನು ಬದಲಾಯಿಸಬಹುದು, ತಂಡದ ಮುಖ್ಯ ಕೋಚ್ ಅನ್ನು ಬದಲಾಯಿಸಬಹುದು ಮತ್ತು ನಾಯಕನನ್ನು ಬದಲಾಯಿಸಬಹುದು, ಆದರೆ ನಾವು ಭವಿಷ್ಯದ ನಾಯಕರನ್ನು ವೈಫಲ್ಯಕ್ಕಾಗಿ ಮಾತ್ರ ಗುರಿಯಾಗಿಸಬಾರದು" ಎಂದು ಗೈಲ್ಸ್ ಹೇಳಿದ್ದಾರೆ.
ಇದರ ಜೊತೆಗೆ ಮಾಜಿ ಸ್ಪಿನ್ನರ್ ಗೈಲ್ಸ್ ತಂಡದ ಸೋಲಿಗೆ ಏನು ಕಾರಣ ಎಂಬುದನ್ನ ಪರಿಶೀಲಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನುಳಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಉತ್ತಮ ಆಟವಾಡಿ , ಆಸ್ಟ್ರೇಲಿಯಾ ಪ್ರವಾಸವನ್ನ ಪಾಸಿಟಿವ್ ಆಗಿ ಕೊನೆಗೊಳಿಸಬೇಕು ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನಾಡುತ್ತಿದ್ದು ಮಳೆಯ ಕಾಟದಿಂದಾಗಿ ಮೊದಲ ದಿನದಾಟ ಅಂತ್ಯಗೊಂಡಿದೆ. ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿದೆ. ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ಮಾರ್ಕ್ ವುಡ್ ತಲಾ 1 ವಿಕೆಟ್ ಪಡೆದಿದ್ದಾರೆ.