ಭಾರತದ ಏಸ್ ಸ್ಪಿನ್ನರ್ ಮತ್ತು ಆಲ್ರೌಂಡರ್ ರವಿಚಂದ್ರನ್ ಅಶ್ವಿನ್, ಇತ್ತೀಚೆಗಗಷ್ಟೇ ರವಿಶಾಸ್ತ್ರಿಯ ಒಂದು ಹೇಳಿಕೆಯ ಕುರಿತು ಸಾಕಷ್ಟು ಮನನೊಂದು ಮಾತನಾಡಿದ್ದರು. 2019ರ ಸಿಡ್ನಿ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದು ವಿಕೆಟ್ಗಳನ್ನು ಕಬಳಿಸಿದ ನಂತರ ಕುಲ್ದೀಪ್ ಯಾದವ್, ಭಾರತದ ಪ್ರಮುಖ ವಿದೇಶಿ ಸ್ಪಿನ್ನರ್ ಎಂದು ಆಗಿನ ಭಾರತದ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದರು. ಈ ಮಾತು ಕೇಳಿದಾಗ ನನಗೆ ಬಸ್ ಅಡಿಯಲ್ಲಿ ಎಸೆಯಲ್ಪಟ್ಟಂತಾಯಿತು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
ಆದ್ರೆ ಈ ಮಾತನ್ನು ರವಿಶಾಸ್ತ್ರಿ ಸಮರ್ಥಿಸಿಕೊಂಡಿದ್ದು , ಆ ಮಾತಿನಿಂದ ಅವರು ಅಶ್ವಿನ್ ಅವರನ್ನು "ಬೇರೆಯೇನಾದರೂ" ಮಾಡಲು ಪ್ರೇರೇಪಿಸಲು ಸಾಧ್ಯವಾಗಿದೆ ಎಂದಾದ್ರೆ, ಆ ನೋವು ತಿಳಿದು ನನಗೆ ಸಂತೋಷವಾಗಿದೆ ಎಂದು ಬಣ್ಣಿಸಿದ್ದಾರೆ.
ಅಶ್ವಿನ್ ಸಿಡ್ನಿಯಲ್ಲಿ ಟೆಸ್ಟ್ ಆಡಲಿಲ್ಲ ಮತ್ತು ಕುಲದೀಪ್ ಉತ್ತಮವಾಗಿ ಬೌಲಿಂಗ್ ಮಾಡಿದರು. ಹಾಗಾಗಿ, ನಾನು ಕುಲದೀಪ್ಗೆ ಅವಕಾಶ ನೀಡುವುದು ನ್ಯಾಯಯುತವಾಗಿದೆ, "ಎಂದು ಶಾಸ್ತ್ರಿ ಇಂಡಿಯನ್ ಎಕ್ಸ್ಪ್ರೆಸ್ ಇ.ಅಡ್ಡಾ ಜೊತೆಗಿನ ಸಂಭಾಷಣೆಯಲ್ಲಿ ಹೇಳಿದರು.
"ಇದು ಅಶ್ವಿನ್ಗೆ ನೋವುಂಟುಮಾಡಿದರೆ, ನನಗೆ ತುಂಬಾ ಸಂತೋಷವಾಗಿದೆ. ಇದು ಅವನನ್ನು ವಿಭಿನ್ನವಾಗಿ ಬೌಲ್ ಮಾಡುವಂತೆ ಮಾಡಿತು. ನನ್ನ ಕೆಲಸ ಎಲ್ಲರ ಟೋಸ್ಟ್ ಗೆ ಬೆಣ್ಣೆ ಹಾಕುವುದಲ್ಲ. ಅಜೆಂಡಾ ಇಲ್ಲದೆ ಸತ್ಯಗಳನ್ನು ಹೇಳುವುದು ನನ್ನ ಕೆಲಸ'' ಎಂದು ಶಾಸ್ತ್ರಿ ವಾದಿಸಿದ್ದಾರೆ.
"ನಿಮ್ಮ ಕೋಚ್ ನಿಮಗೆ ಸವಾಲು ಹಾಕಿದರೆ, ನೀವು ಏನು ಮಾಡುತ್ತೀರಿ? ಅಳುತ್ತಾ ಮನೆಗೆ ಹೋಗಿ ನಾನು ಹಿಂತಿರುಗುವುದಿಲ್ಲ ಎಂದು ಹೇಳುತ್ತೀರಾ? ಒಬ್ಬ ಆಟಗಾರನಾಗಿ ನಾನು ಕೋಚ್ ಹೇಳಿದ್ದು ತಪ್ಪು ಎಂದು ಸಾಬೀತುಪಡಿಸುವುದನ್ನು ಸವಾಲಾಗಿ ತೆಗೆದುಕೊಳ್ಳುತ್ತೇನೆ. ಕುಲದೀಪ್ ಕುರಿತ ನನ್ನ ಹೇಳಿಕೆಯು ಅಶ್ವಿನ್ಗೆ ನೋವಾಗಿದ್ದರೆ, ನಾನು ಆ ಹೇಳಿಕೆ ನೀಡಿದ್ದಕ್ಕೆ ನನಗೆ ಸಂತೋಷವಾಗಿದೆ. ಇದು ಅವನನ್ನು ವಿಭಿನ್ನವಾಗಿ ಬೌಲ್ ಮಾಡುವಂತೆ ಮಾಡಿತು ಎಂದು ಶಾಸ್ತ್ರಿ ಹೇಳಿದ್ದಾರೆ.
"2019 ರಲ್ಲಿ ಅಶ್ವಿನ್ ಬೌಲಿಂಗ್ ಮಾಡಿದ ರೀತಿ ಮತ್ತು 2021 ರಲ್ಲಿ ಅವರು ಬೌಲಿಂಗ್ ಮಾಡಿದ ರೀತಿ ಚಾಕ್ ಮತ್ತು ಚೀಸ್ ಆಗಿದೆ. ಅಶ್ವಿನ್ ತನ್ನನ್ನು ಬಸ್ನ ಕೆಳಗೆ ಎಸೆದ ರೀತಿ ಆಯ್ತು ಎಂದಿದ್ರು. ಆದ್ರೆ ಅವನು ಚಿಂತಿಸಬೇಕಾಗಿಲ್ಲ ಏಕೆಂದರೆ ನಾನು ಬಸ್ ಡ್ರೈವರ್ಗೆ 2-3 ಅಡಿ ಅಂತರದಲ್ಲೇ ನಿಲ್ಲಿಸಲು ಹೇಳಿದ್ದೆ. 2018ರಲ್ಲಿ ಅಶ್ವಿನ್ಗೆ ಅವರು ಫಿಟ್ ಆಗಿರಬೇಕು ಎಂಬ ಸಂದೇಶವಾಗಿತ್ತು. ಅವರು ಅದರ ಮೇಲೆ ಕೆಲಸ ಮಾಡಿದ್ದಾರೆ ಮತ್ತು ಈಗ ಅವರ ಬೌಲಿಂಗ್ ಹೇಗಿದೆ ನೋಡಿ ಎಂದು "ಶಾಸ್ತ್ರಿ ತಮ್ಮ ಮಾತಿಗೆ ಸೇರಿಸಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಟೆಸ್ಟ್ನಲ್ಲಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಆರ್. ಅಶ್ವಿನ್ ಪ್ರತಿ ಇನ್ನಿಂಗ್ಸ್ನಲ್ಲಿ ಮೂರು ವಿಕೆಟ್ ಪಡೆದರು. ಅದಾಗಲೇ ನೋವಿನಿಂದ ಬಳಲುತ್ತಿದ್ದ ಅಶ್ವಿನ್ ಬಹಳ ಕಷ್ಟದಲ್ಲಿ ಆಡಿದ್ದರು ಎನ್ನಲಾಗಿದೆ.
ಸಿಡ್ನಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ನಲ್ಲಿ ಮೊದಲ ಎರಡು ದಿನಗಳಲ್ಲಿ ಭಾರತವು ಪ್ರಾಬಲ್ಯ ಸಾಧಿಸಿದ ನಂತರ ಮಳೆಯಿಂದಾಗಿ ಸಂಪೂರ್ಣ ಪಂದ್ಯ ಹಾಳಾಯಿತು. ಇಷ್ಟಾದರೂ ಭಾರತವು 2-1ರ ಅಂತರದಲ್ಲಿ ಸರಣಿ ಗೆಲುವು ಸಾಧಿಸಿತು. ಈ ಮೂಲಕ ಭಾರತವು ಇಡೀ ಏಷ್ಯಾದಲ್ಲಿಯೇ ಆಸ್ಟ್ರೇಲಿಯಾವನ್ನು ಅವರ ಸ್ವಂತ ನೆಲದಲ್ಲಿ ಸೋಲಿಸಿದ ಮೊದಲ ತಂಡವಾಗಿ ಐತಿಹಾಸಿಕ ಸಾಧನೆ ಮಾಡಿತು. ಇದಾಗಿ ಎರಡು ವರ್ಷಗಳ ನಂತರ ಭಾರತ 2021 ರಲ್ಲಿ ಈ ಸಾಧನೆಯನ್ನು ಮತ್ತೆ ಮಾಡುವ ಮೂಲಕ ಪ್ರಬಲ ಹೆಜ್ಜೆಯನ್ನಿಟ್ಟಿತು.
ಆಸ್ಟ್ರೇಲಿಯದಲ್ಲಿ ಸ್ಪಿನ್ನರ್ ಆಗಿ ಐದು ವಿಕೆಟ್ಗಳನ್ನು ಕಬಳಿಸುವುದು ಎಷ್ಟು ಕಷ್ಟ ಎಂದು ನನಗೆ ತಿಳಿದಿತ್ತು. ಹೀಗಾಗಿಯೇ ಕುಲ್ದೀಪ್ ಯಾದವ್ ಐದು ವಿಕೆಟ್ ಪಡೆದಿದ್ದರ ಕುರಿತು ನಿಜವಾಗಿಯೂ ಸಂತೋಷವಾಗಿದ್ದೆ. ಇದರ ಜೊತೆಗೆ ಶಾಸ್ತ್ರಿ ಅವರನ್ನು ಹೆಚ್ಚು ಗೌರವಿಸುತ್ತಾರೆ ಎಂದು ಅಶ್ವಿನ್ ಹೇಳಿದರು.