ದುಬೈ, ಸೆಪ್ಟೆಂಬರ್ 18: ಏಷ್ಯಾ ಕಪ್ 2018ರ ಲೀಗ್ ಪಂದ್ಯದಲ್ಲಿ ಭಾರತ ಮತ್ತು ಹಾಂಕಾಂಗ್ ತಂಡಗಳು ಮಂಗಳವಾರ ಮುಖಾಮುಖಿಯಾಗಲಿವೆ. ಭಾರತ ಮೂಲದ ಇಬ್ಬರು ಆಟಗಾರರು ತವರಿನ ತಂಡದ ವಿರುದ್ಧವೇ ಆಡಲಿದ್ದಾರೆ. ಅದರಲ್ಲಿ ಒಬ್ಬರು ನಾಯಕರಾಗಿ ತಮ್ಮ ತಂಡವನ್ನು ನಡೆಸಲಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.
ಹಾಂಕಾಂಗ್ ತಂಡದ ನಾಯಕ ಅನ್ಷುಮಾನ್ ರಾತ್ ಪೋಷಕರು ಒಡಿಶಾ ಮೂಲದವರು. ಹೀಗಾಗಿ 20 ವರ್ಷದ ಈ ಆಟಗಾರನಿಗೆ ಭಾರತದಂತಹ ಬಲಿಷ್ಠ ತಂಡದ ವಿರುದ್ಧ ಆಡುವ ಸವಾಲು ಒಂದಡೆಯಾದರೆ, ಭಾವನಾತ್ಮಕ ನಂಟೂ ಈ ಪಂದ್ಯದೊಂದಿಗೆ ಬೆಸೆದುಕೊಂಡಿದೆ.
ಒಡಿಐ: ತ್ವರಿತಗತಿಯಲ್ಲಿ 2 ಸಾವಿರ ರನ್ ಗಳಿಸಿದ ಟಾಪ್ 5 ಕ್ರಿಕೆಟರ್ಸ್
ಬಿಜಿನೆಸ್ ಉದ್ದೇಶಕ್ಕಾಗಿ ಅನ್ಷುಮಾನ್ ಪೋಷಕರು 1990ರಲ್ಲಿ ಹಾಂಕಾಂಗ್ಗೆ ತೆರಳಿದ್ದರು. 2003ರ ವಿಶ್ವಕಪ್ ಕ್ರಿಕೆಟ್ ನೋಡುತ್ತಿದ್ದ ಆರು ವರ್ಷದ ಬಾಲಕ ಅನ್ಷುಮಾನ್ಗೆ ತೆಂಡೂಲ್ಕರ್ ಕ್ರಿಕೆಟ್ ಆಡುವ ಬಗೆ ಬಲು ಇಷ್ಟವಾಗಿತ್ತು. ಅಂದಿನಿಂದಲೂ ಭಾರತ ತಂಡದ ಬಹುತೇಕ ಎಲ್ಲ ಪಂದ್ಯಗಳನ್ನೂ ವೀಕ್ಷಿಸುತ್ತಲೇ ಬೆಳೆದರು.
ಎಡಗೈ ಬ್ಯಾಟ್ಸ್ಮನ್ ಆದ ಅನ್ಷುಮಾನ್, ವಿಕೆಟ್ ಕೀಪರ್ ಕೂಡ ಹೌದು. ತಮ್ಮ ಬ್ಯಾಟಿಂಗ್ ಶೈಲಿಯ ವಿಚಾರದಲ್ಲಿ ಅವರಿಗೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಸ್ಫೂರ್ತಿ.
'ಭಾರತದ ನನ್ನ ಬೇರು ಹಾಂಕಾಂಗ್ನಲ್ಲಿ ಕ್ರಿಕೆಟ್ಅನ್ನು ಆಯ್ದುಕೊಳ್ಳುವಂತೆ ಪ್ರೇರೇಪಣೆ ನೀಡಿತು. ನಾನು ಒಡಿಶಾದಲ್ಲಿ ಅನೇಕ ವರ್ಷದವರೆಗೂ ಹೋಗಿಯೇ ಇರಲಿಲ್ಲ. ಆದರೆ, 2003ರಲ್ಲಿ ಭಾರತವು ವಿಶ್ವಕಪ್ನಲ್ಲಿ ಚೆನ್ನಾಗಿ ಆಡಿತ್ತು. ಆಗಲೇ ನಾನು ಕ್ರಿಕೆಟ್ ಆಡಲು ಆರಂಭಿಸಿದ್ದು. ನನ್ನೊಳಗೆ ಇರುವ ಭಾರತದ ಏಕೈಕ ಅಂಶವೆಂದರೆ ಅದು ಕ್ರಿಕೆಟ್' ಎಂದು ಅನ್ಷುಮಾನ್ ಹೇಳಿದ್ದಾರೆ.
ಏಷ್ಯಾಕಪ್: ಭಾರತ-ಪಾಕಿಸ್ತಾನ ಮುಖಾಮುಖಿಯ ಕುತೂಹಲಕಾರಿ ಅಂಶಗಳಿವು!
ಇಂಗ್ಲೆಂಡ್ನಲ್ಲಿ ಓದಿದ ಅವರಲ್ಲಿ ಕ್ರಿಕೆಟ್ ಆಸಕ್ತಿ ತೀವ್ರವಾಗಿತ್ತು. ಆದರೆ, ವೃತ್ತಿಪರ ಕ್ರಿಕೆಟ್ ತರಬೇತಿ ಪಡೆಯಲು ಅಲ್ಲಿ ವೀಸಾ ನಿಯಮಾವಳಿಗಳು ಅಡ್ಡಿಯಾದವು. ಆದರೂ, ಓದಿಗಿಂತಲೂ ಅವರ ಕ್ರಿಕೆಟ್ ಪ್ರೀತಿಯೇ ಆದ್ಯತೆ ಪಡೆದುಕೊಂಡಿತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವ ಅನ್ಷುಮಾನ್ ಅವರಿಗೆ 20ನೇ ವಯಸ್ಸಿನಲ್ಲಿಯೇ ತಂಡವನ್ನು ಮುನ್ನಡೆಸುವ ಜವಾಬ್ದಾರಿಯೂ ಸಿಕ್ಕಿದೆ. ಅನ್ಷುಮಾನ್ ಪ್ರತಿಭೆ ಕಂಡಿರುವ ಒಡಿಶಾ ಕ್ರಿಕೆಟ್ ಸಂಸ್ಥೆ ಅವರನ್ನು ರಾಜ್ಯಕ್ಕೆ ಕರೆತರುವ ಪ್ರಯತ್ನನ ನಡೆಸಿದೆಯಂತೆ.
ಭಾರತದಲ್ಲಿ ಕ್ರಿಕೆಟ್ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಹಾಂಕಾಂಗ್ ಕ್ರಿಕೆಟ್ ಸಂಸ್ಥೆ ಮೂಲಕ ಒಡಿಶಾ ಕ್ರಿಕೆಟ್ ಸಂಸ್ಥೆಯ ಜನರು ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾರೆ ಎಂದು ನನ್ನ ತಂದೆ ತಿಳಿಸಿದ್ದರು. ಆದರೆ, ನನಗೆ ಅಲ್ಲಿಂದ ಭರವಸೆ ಸಿಗದೆ ಇದ್ದರೆ, ನಾನು ಅಲ್ಲಿಗೆ ಹೋಗಲು ಸಾಧ್ಯವಿಲ್ಲ ಎಂದು ಅನ್ಷುಮಾನ್ ಹೇಳುತ್ತಾರೆ.
ನನ್ನ ಅಜ್ಜ ಅಜ್ಜಿ ಭುವನೇಶ್ವರದಲ್ಲಿ ಇದ್ದರೂ, ಎರಡು ವರ್ಷದ ಹಿಂದೆ ವಿಶ್ವ ಟಿ20ಯಲ್ಲಿ ಆಡುವ ಸಲುವಾಗಿಯಷ್ಟೇ ನಾನು ಭಾರತಕ್ಕೆ ಒಮ್ಮೆ ಹೋಗಿದ್ದೆ. ನನ್ನ ಪಥ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾದ ಕಾರಣ ಒಡಿಶಾ ಅಡುಗೆಯ ರುಚಿಯನ್ನು ಕೂಡ ಸವಿದಿಲ್ಲ ಎಂದಿದ್ದಾರೆ.
ಏಷ್ಯಾಕಪ್: ಹಾಂಕಾಂಗ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿ ಭಾರತ
2014ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಪಂದ್ಯದಲ್ಲಿ ಪಪುವಾ ನ್ಯೂಗಿನಿ ತಂಡದ ವಿರುದ್ಧ ಅನ್ಷುಮಾನ್ ಪಾದಾರ್ಪಣೆ ಮಾಡಿದ್ದರು.
16 ಏಕದಿನ ಪಂದ್ಯಗಳನ್ನು ಆಡಿರುವ ಅನ್ಷುಮಾನ್, 52.57ರ ಸರಾಸರಿಯಲ್ಲಿ ಒಂದು ಶತಕದೊಂದಿಗೆ 736 ರನ್ ಗಳಿಸಿದ್ದಾರೆ. 14 ವಿಕೆಟ್ಗಳನ್ನು ಕೂಡ ಪಡೆದುಕೊಂಡಿದ್ದಾರೆ.
2015-17ರ ಐಸಿಸಿ ವಿಶ್ವ ಕ್ರಿಕೆಟ್ ಲೀಗ್ ಚಾಂಪಿಯನ್ಷಿಪ್ನಲ್ಲಿ ಪಪುವಾ ನ್ಯೂಗಿನಿ ವಿರುದ್ಧ ಅಜೇಯ 143 ರನ್ ಗಳಿಸಿದ್ದರು. ಅದು ಹಾಂಕಾಂಗ್ ತಂಡದ ಯಾವುದೇ ಬ್ಯಾಟ್ಸ್ಮನ್ನ ಗರಿಷ್ಠ ಮೊತ್ತವಾಗಿದೆ.
ಮುಂಬೈ ಮೂಲದ ಕಿಂಚಿತ್ ಶಾ
ಹಾಂಕಾಂಗ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಕಿಂಚಿತ್ ದೇವಾಂಗ್ ಶಾ ಮುಂಬೈ ಮೂಲದವರು. 22 ವರ್ಷದ ಅವರು ಹಾಂಕಾಂಗ್ನಲ್ಲಿ ನೆಲೆಸಿದ್ದಾರೆ.
2012ರಲ್ಲಿ ಕೆನಡಾ ವಿರುದ್ಧ ಟಿ20 ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದರು. 2014ರಲ್ಲಿ ಪಪುವಾ ನ್ಯೂಗಿನಿ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ್ದರು. ಎಂಟು ಏಕದಿನ ಪಂದ್ಯಗಳನ್ನು ಆಡಿರುವ ಕಿಂಚಿತ್ ಶಾ, 13.28 ಸರಾಸರಿಯಲ್ಲಿ 93 ರನ್ ಗಳಿಸಿದ್ದಾರೆ. ಆಫ್ಬ್ರೇಕ್ ಬೌಲರ್ ಆಗಿರುವ ಅವರು, 4 ವಿಕೆಟ್ಗಳನ್ನು ಪಡೆದುಕೊಂಡಿದ್ದಾರೆ.