ದುಬೈ, ಸೆಪ್ಟೆಂಬರ್ 18: ಇಡೀ ಕ್ರಿಕೆಟ್ ಜಗತ್ತಿನ ಗಮನ ಬುಧವಾರ (ಸೆ.18) ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ಪಂದ್ಯದ ಮೇಲೆ ನೆಟ್ಟಿದೆ.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಈ ಸಾಂಪ್ರದಾಯಕ ಎದುರಾಳಿಗಳು ಕೊನೆಯ ಬಾರಿ ಮುಖಾಮುಖಿಯಾಗಿದ್ದವು. ಇದರಲ್ಲಿ ಪಾಕ್ ಭಾರತವನ್ನು 180 ರನ್ಗಳ ಭಾರಿ ಅಂತರದಿಂದ ಮಣಿಸಿತ್ತು.
ಏಷ್ಯಾ ಕಪ್: ಭಾರತದ ವಿರುದ್ಧವೇ ಆಡಲಿದ್ದಾರೆ ಭಾರತ ಮೂಲದ 'ನಾಯಕ'
ಏಷ್ಯಾ ಕಪ್ ಇತಿಹಾಸದಲ್ಲಿ ಉಭಯ ತಂಡಗಳು ಸಮಯ ಬಲ ಸಾಧಿಸಿವೆ. 12 ಪಂದ್ಯಗಳಲ್ಲಿ ಎರಡೂ ತಂಡಗಳು ಸೆಣೆಸಿದ್ದು, ಭಾರತ ಆರು ಮತ್ತು ಪಾಕಿಸ್ತಾನ ಐದು ಪಂದ್ಯಗಳಲ್ಲಿ ಗೆದ್ದಿವೆ. ಇನ್ನೊಂದು ಪಂದ್ಯ ಮಳೆಗೆ ಆಹುತಿಯಾಗಿತ್ತು.
ಕಾಡಲಿದೆಯೇ ಕೊಹ್ಲಿ ಗೈರು?
ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಗಳು ಯಾವಾಗಲೂ ಹೈವೋಲ್ಟೇಜ್ನಿಂದ ಕೂಡಿರುತ್ತವೆ. ಈ ಪಂದ್ಯ ಮತ್ತಷ್ಟು ಮಹತ್ವ ಪಡೆದುಕೊಳ್ಳಲು ಕಾರಣ, ವಿರಾಟ್ ಕೊಹ್ಲಿ ಅನುಪಸ್ಥಿತಿ.
ಭಾರತ ಈ ಹಿಂದೆ ಪಾಕ್ ವಿರುದ್ಧ ಆಡಿದ ಪಂದ್ಯಗಳಲ್ಲಿನ ಭಾರತದ ಗೆಲುವಿನಲ್ಲಿ ಕೊಹ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಬುಧವಾರದ ಪಂದ್ಯದಲ್ಲಿ ಕೊಹ್ಲಿ ಗೈರು ಭಾರತವನ್ನು ಕಾಡುವ ಸಾಧ್ಯತೆ ಇದೆ.
ದುಬೈ ವಾತಾವರಣ, ಪಿಚ್ ಇಂಗ್ಲೆಂಡ್ಗಿಂತ ವಿಭಿನ್ನ. ಮಿಗಿಲಾಗಿ ಭಾರತ ಬಹುತೇಕ ಬೇರೆಯದೇ ತಂಡದೊಂದಿಗೆ ಕಣಕ್ಕಿಳಿಯುತ್ತಿದೆ. ನಾಯಕತ್ವದ ಹೊಣೆಗಾರಿಕೆಯೂ ಬದಲಾಗಿದೆ.
ಏಷ್ಯಾಕಪ್: ಭಾರತ-ಪಾಕಿಸ್ತಾನ ಮುಖಾಮುಖಿಯ ಕುತೂಹಲಕಾರಿ ಅಂಶಗಳಿವು!
ನಾಯಕ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಮೇಲಿನ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಅಂಬಾಟಿ ರಾಯುಡು ಅನುಭವ ಭಾರತಕ್ಕೆ ನೆರವಾಗಬಲ್ಲದು. ಮಧ್ಯಮ ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ, ಮನೀಶ್ ಪಾಂಡೆ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ ರನ್ ಪೇರಿಸುವಲ್ಲಿ ಸಮರ್ಥರಾಗಿದ್ದಾರೆ.
ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿರುವುದು ಬೌಲಿಂಗ್ ವಿಭಾಗಕ್ಕೆ ಚೇತರಿಕೆ ನೀಡಿದೆ. ಜಸ್ ಪ್ರೀತ್ ಬೂಮ್ರಾ ಜತೆಗೆ ಶಾರ್ದೂಲ್ ಠಾಕೂರ್ ಅಥವಾ ಖಲೀಲ್ ಅಹ್ಮದ್ ಹೊಸ ಚೆಂಡನ್ನು ಹಂಚಿಕೊಳ್ಳುವ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.
ಬ್ಯಾಟಿಂಗ್ ಮೇಲೆ ಹೆಚ್ಚು ಗಮನ ಹರಿಸಲು ಮುಂದಾದರೆ ನಾಯಕ ರೋಹಿತ್ ಶರ್ಮಾ, ಇಬ್ಬರು ವೇಗಿಗಳ ಜತೆಗೆ ಹಾರ್ದಿಕ್ ಪಾಂಡ್ಯ ಅವರನ್ನು ಮೂರನೇ ವೇಗಿಯನ್ನಾಗಿ ಆಯ್ದುಕೊಂಡು ಮತ್ತೊಬ್ಬ ಬ್ಯಾಟ್ಸ್ಮನ್ಗೆ ಅವಕಾಶ ನೀಡಬೇಕಾಗುತ್ತದೆ.
ಸ್ಪಿನ್ನರ್ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕೇದಾರ್ ಜಾಧವ್ ಕೂಡ ಬೌಲಿಂಗ್ನಲ್ಲಿ ಕಾಣಿಕೆ ನೀಡಬಲ್ಲರು.
ದೌರ್ಬಲ್ಯವೂ ಇದೆ
ಉತ್ತಮ ಆಟಗಾರರಿದ್ದರೂ ಭಾರತದ ಬ್ಯಾಟಿಂಗ್ ಶಕ್ತಿಯುತವಾಗಿದೆ ಎನ್ನುವಂತಿಲ್ಲ. ಮುಖ್ಯವಾಗಿ ಅನುಭವ ಹಾಗೂ ಸ್ಥಿರತೆಯ ಕೊರತೆ ಕಾಣಿಸುತ್ತಿದೆ.
ಶಿಖರ್ ಧವನ್ರಿಂದ ನಿರೀಕ್ಷಿತ ಆಟ ಕಾಣಿಸುತ್ತಿಲ್ಲ. ಕೆ.ಎಲ್. ರಾಹುಲ್ ಕೆಲವೊಮ್ಮೆ ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾಗುತ್ತಿದ್ದಾರೆ.
ಗಾಯದಿಂದ ಚೇತರಿಸಿಕೊಂಡು ಬಂದಿರುವ ಕೇದಾರ್ ಜಾಧವ್ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬ ಕುತೂಹಲವಿದೆ. ಅಂಬಾಟಿ ರಾಯುಡು, ಮನೀಶ್ ಪಾಂಡೆ ಹಾಗೂ ಧೋನಿ ಕೂಡ ಈ ಹಿಂದಿನ ಸರಣಿಗಳಲ್ಲಿ ಸ್ಥಿರತೆ ಪ್ರದರ್ಶಿಸಿರಲಿಲ್ಲ.
ಏಷ್ಯಾ ಕಪ್ ಮೊದಲ ಪಂದ್ಯಕ್ಕೆ ಟೀಂ ಇಂಡಿಯಾದ ಸಂಭಾವ್ಯ ತಂಡ
ಬೌಲಿಂಗ್ನಲ್ಲಿ ಜಸ್ ಪ್ರೀತ್ ಬೂಮ್ರಾ ಡೆತ್ ಓವರ್ಗಳಲ್ಲಿ ಅದ್ಭುತವಾಗಿ ಬೌಲ್ ಮಾಡಿದರೂ ಅವರ ನೋಬಾಲ್ ಎಸೆತಗಳು ತಂಡಕ್ಕೆ ದುಬಾರಿಯಾಗಿ ಪರಿಣಮಿಸುತ್ತಿವೆ. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಅವನ ನೋಬಾಲ್ ಎಸೆತಕ್ಕೆ ಔಟ್ ಆಗಿದ್ದರಿಂದ ಜೀವದಾನ ಪಡೆದಿದ್ದ ಫಖರ್ ಜಮಾನ್ ಶತಕ ಬಾರಿಸಿ ಭಾರತದ ಸೋಲಿಗೆ ಕಾರಣವಾಗಿದ್ದರು.
ಭುವನೇಶ್ವರ್ ಕೂಡ ಗಾಯದಿಂದ ಚೇತರಿಸಿಕೊಂಡು ಮರಳಿದ್ದು, ಹಳೆಯ ಮೊನಚು ಮರಳಿ ಪಡೆದುಕೊಳ್ಳಬೇಕಿದೆ.
ಪಾಕಿಸ್ತಾನ ಹೆಚ್ಚು ಪ್ರಬಲ
ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನವೇ ಹೆಚ್ಚು ಪ್ರಬಲವಾಗಿ ಕಾಣಿಸುತ್ತದೆ ಎನ್ನುತ್ತಾರೆ ಕ್ರಿಕೆಟ್ ವಿಶ್ಲೇಷಕರು. ಏಕೆಂದರೆ ತಂಡದ ಬ್ಯಾಟ್ಸ್ಮನ್ಗಳು ಹಾಗೂ ಬೌಲರ್ಗಳು ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ.
ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಅಜಮ್, ನಾಯಕ ಸರ್ಫರಾಜ್ ಅಹ್ಮದ್ ಬ್ಯಾಟಿಂಗ್ ಬಲವಿದೆ.
ಆಲ್ರೌಂಡರ್ಗಳೂ ಪಾಕ್ ತಂಡದಲ್ಲಿ ಹೆಚ್ಚಿದ್ದಾರೆ. ಅನುಭವಿ ಶೋಯೆಬ್ ಮಲಿಕ್, ಶದಬ್ ಖಾನ್, ಫಹೀಮ್ ಅಶ್ರಫ್, ಹ್ಯಾರಿಸ್ ಸೊಹೈಲ್ ಎರಡೂ ವಿಭಾಗಗಳಲ್ಲಿ ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಕೂಡ ಪಾಕ್ ಪ್ರಬಲವಾಗಿದೆ. ನಾಲ್ವರು ಎಡಗೈ ವೇಗಿಗಳು ತಂಡದಲ್ಲಿದ್ದಾರೆ. ಮೊಹಮದ್ ಅಮೀರ್, ಹಸನ್ ಅಲಿ, ಜುನೈದ್ ಖಾನ್, ಉಸ್ಮಾನ್ ಖಾನ್, ಶಹೀನ್ ಅಫ್ರಿದಿ ಫ್ಲಾಟ್ ಪಿಚ್ಗಳಲ್ಲಿಯೂ ಸ್ವಿಂಗ್ ಕಂಡುಕೊಳ್ಳುವ ಶಕ್ತಿ ಹೊಂದಿದ್ದಾರೆ.
ಆರಂಭಿಕ ಬ್ಯಾಟ್ಸ್ಮನ್ಗಳ ವಿಕೆಟ್ ಬೇಗನೆ ಕಿತ್ತರೆ ಉಳಿದ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರುವುದು ಭಾರತಕ್ಕೆ ಸುಲಭವಾಗುತ್ತದೆ.
ಹಾಂಕಾಂಗ್ ವಿರುದ್ಧ ಗೆದ್ದಿರುವ ಪಾಕ್ ಆಟಗಾರರು, ಪಾಕಿಸ್ತಾನ ಸೂಪರ್ ಲೀಗ್ ಟಿ20 ಬಳಿಕ ದೀರ್ಘಕಾಲದಿಂದ ಕ್ರಿಕೆಟ್ ಆಡಿಲ್ಲ.
ಶಿಸ್ತಿನ ಮತ್ತು ಆಕ್ರಮಣಾಕಾರಿ ಮನೋಭಾವ ಪ್ರದರ್ಶಿಸಿದರೆ ಪಾಕ್ ತಂಡವನ್ನು ಮಣಿಸುವುದು ಭಾರತಕ್ಕೆ ಕಷ್ಟವಾಗಲಾರದು.