ಮುಂಬೈ, ಸೆಪ್ಟೆಂಬರ್ 16: ಏಷ್ಯಾ ಕಪ್ ಟೂರ್ನಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿರುವುದು ಭಾರತ ಮಾತ್ರವಲ್ಲ, ಬೇರೆ ದೇಶಗಳಲ್ಲಿಯೂ ಭಾರತದ ಪಂದ್ಯಗಳ ಕುರಿತಾದ ಆಸಕ್ತಿ ಕಡಿಮೆಯಾಗಿದೆ. ಈ ಸಂಗತಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಸರಣಿಯನ್ನು ನೇರಪ್ರಸಾರ ಮಾಡುತ್ತಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.
ಭಾರತದ ತಂಡ ವಿರಾಟ್ ಕೊಹ್ಲಿ ಇಲ್ಲದ ಕಾರಣಕ್ಕೆ ಕಳೆಗುಂದಿದೆ. ಮಹತ್ವದ ಈ ಸರಣಿಯಲ್ಲಿ ಕೊಹ್ಲಿ ಆಡಬೇಕಿತ್ತು ಕ್ರಿಕೆಟ್ ಅಭಿಮಾನಿಗಳು ಬೇಸರಪಟ್ಟುಕೊಂಡಿದ್ದರೆ, ಅಷ್ಟೇನೂ ಪ್ರಬಲವಲ್ಲದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ವಿಶ್ರಾಂತಿ ಪಡೆದುಕೊಳ್ಳಬಹುದಾಗಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು.
ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿರುವುದಕ್ಕೆ ಬಿಸಿಸಿಐ ವಿರುದ್ಧ ಅದರ ವಾಣಿಜ್ಯ ಪಾಲುದಾರರು ಮತ್ತು ಅದರ ಅಧಿಕೃತ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ಅಸಮಾಧಾನ ವ್ಯಕ್ತಪಡಿಸಿವೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ವಾಹಿನಿಯ ರೇಟಿಂಗ್ ಗಗನಕ್ಕೇರಿದರೆ, ಕೊಹ್ಲಿ ಔಟಾದ ಕೂಡಲೇ ವೀಕ್ಷಕವರ್ಗದ ಪ್ರಮಾಣ ಪಾತಾಳಕ್ಕೆ ಕುಸಿಯುತ್ತದೆ.
ಹೀಗಿರುವಾಗ ಕೊಹ್ಲಿಯೇ ಇಲ್ಲದಿರುವ ತಂಡದ ಪಂದ್ಯಕ್ಕೆ ತಾನು ನಿರೀಕ್ಷಿಸಿದ ಪ್ರಮಾಣದ ರೇಟಿಂಗ್ ಸಿಗಲಾರದು ಎನ್ನುವುದು ಸ್ಟಾರ್ಸ್ಪೋರ್ಟ್ಸ್ ವಾಹಿನಿ ಅಸಮಾಧಾನಕ್ಕೆ ಕಾರಣ.
ಕೊಹ್ಲಿ ಗೈರಿನಿಂದಾಗಿ ಈ ಟೂರ್ನಿಯಲ್ಲಿ ಗಂಭೀರ ವಾಣಿಜ್ಯಾತ್ಮಕ ಸಮಸ್ಯೆಗಳು ಎದುರಾಗಲಿವೆ. ಅಲ್ಲದೆ, ಟೂರ್ನಿಯ ಸ್ಪರ್ಧಾತ್ಮಕ ಮೌಲ್ಯ ಕುಸಿಯಲಿದೆ ಎಂದು ವಾಹಿನಿ ಹೇಳಿದೆ ಎಂದು ವರದಿಗಳು ತಿಳಿಸಿವೆ.
ಬಿಸಿಸಿಐ ಜತೆ ಮಾಡಿಕೊಂಡಿರುವ ಎಂಟು ವರ್ಷಗಳ ಒಪ್ಪಂದದಲ್ಲಿನ ನಿಯಮಗಳಿಗೆ ಸರಿಯಾದ ಗೌರವ ದೊರೆತಿಲ್ಲ ಎಂದು ವಾಹಿನಿ ಏಷ್ಯನ್ ಕ್ರಿಕೆಟ್ ಸಮಿತಿಗೆ ಬರೆದಿರುವ ಪತ್ರದಲ್ಲಿ ಹೇಳಿದೆ ಎನ್ನಲಾಗಿದೆ.
ವಾಹಿನಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ, ತಂಡದ ಆಯ್ಕೆ ವಿಚಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಪ್ರಸಾರ ವಾಹಿನಿಗೆ ಯಾವುದೇ ಹಕ್ಕು ಇರುವುದಿಲ್ಲವೆಂದು ಸ್ಪಷ್ಟಪಡಿಸಿದೆ ಎಂದು ಹೇಳಲಾಗಿದೆ.