ಆಗಸ್ಟ್ 8 ತಂಡ ಪ್ರಕಟಿಸಲು ಕೊನೆಯ ದಿನ
ಏಷ್ಯಾ ಕಪ್ ಕ್ರಿಕೆಟ್ ಕೌನ್ಸಿಲ್ ಇದೇ ತಿಂಗಳ ಅಂತಿಮ ವಾರದಲ್ಲಿ ನಡೆಯಲಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾಗವಹಿಸಲಿರುವ ಎಲ್ಲಾ ತಂಡಗಳೂ ತಮ್ಮ ತಮ್ಮ ತಂಡಗಳನ್ನು ಪ್ರಕಟಿಸಲು ಆಗಸ್ಟ್ 8 ಕೊನೆಯ ದಿನಾಂಕ ಎಂಬ ಅಧಿಸೂಚನೆಯನ್ನು ನೀಡಿದೆ. ಹೀಗಾಗಿ ಬಿಸಿಸಿಐ ಆಯ್ಕೆಗಾರರ ಸಮಿತಿ ಆಗಸ್ಟ್ 8ರ ಸೋಮವಾರದ ಮಧ್ಯಾಹ್ನ ವಿಶೇಷ ಸಭೆ ನಡೆಸಿ ಟೂರ್ನಿಗೆ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಕೆಎಲ್ ರಾಹುಲ್ ಲಭ್ಯತೆ ಇನ್ನೂ ಅನುಮಾನ
ಇನ್ನು ಸದ್ಯ ಬಿಸಿಸಿಐ ಆಯ್ಕೆ ಸಮಿತಿಗೆ ತಲೆ ನೋವಾಗಿ ಪರಿಣಮಿಸಿರುವುದು ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿ. ಹೌದು, ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದ ಇನ್ನೂ ಸಹ ಸಂಪೂರ್ಣವಾಗಿ ಚೇತರಿಸಿಕೊಳ್ಳದೇ ಇರುವುದು ಹಾಗೂ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳದೇ ಇದ್ದು, ಈ ಇಬ್ಬರನ್ನು ಆಯ್ಕೆ ಮಾಡಬೇಕಾ ಅಥವಾ ಕೈಬಿಡಬೇಕಾ ಎಂಬುದು ಆಯ್ಕೆಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸದ್ಯ ವಿರಾಟ್ ಕೊಹ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಮುಂಬರುವ ಏಷ್ಯಾ ಕಪ್ನಿಂದ ತಾನು ಆಯ್ಕೆಗೆ ಸಿದ್ಧ ಎಂದು ತಿಳಿಸಿದ್ದು, ಕೊಹ್ಲಿಗೆ ಅವಕಾಶ ಪಕ್ಕಾ ಎನ್ನಬಹುದು. ಅತ್ತ ಕೆಎಲ್ ರಾಹುಲ್ ಅವರನ್ನೂ ಸಹ ಆಯ್ಕೆ ಮಾಡುವ ಸಾಧ್ಯತೆ ಇದ್ದು, ರಾಹುಲ್ ಟೂರ್ನಿ ಆರಂಭಕ್ಕೂ ಮುನ್ನ ಫಿಟ್ನೆಸ್ ಸಾಬೀತುಪಡಿಸಿದರೆ ಮಾತ್ರ ತಂಡ ಸೇರಲಿದ್ದಾರೆ.
ರಾಹುಲ್ ಬದಲು ಈತ ಉಪನಾಯಕ, ಸಂಭಾವ್ಯ ತಂಡ ಹೀಗಿದೆ
ಇನ್ನು ಗಾಯದ ಸಮಸ್ಯೆ ಎದುರಿಸುತ್ತಿರುವ ಕೆಎಲ್ ರಾಹುಲ್ ಸದ್ಯ ಭಾರತ ತಂಡದ ಪೂರ್ಣಾವಧಿ ಉಪನಾಯಕನಾಗಿದ್ದಾರೆ. ಇನ್ನು ರಾಹುಲ್ ಅಲಭ್ಯತೆ ಅನುಮಾನ ಮೂಡಿಸಿದ್ದು ಬಿಸಿಸಿಐ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸುವ ತಂಡದಲ್ಲಿ ಉಪನಾಯಕನ ಸ್ಥಾನವನ್ನು ಹಾರ್ದಿಕ್ ಪಾಂಡ್ಯಾಗೆ ನೀಡಲಿದೆ ಎಂಬ ಸುದ್ದಿ ಹೊರಬಿದ್ದಿದೆ.ಹಾರ್ದಿಕ್ ಪಾಂಡ್ಯ ಇತ್ತೀಚೆಗಷ್ಟೆ ಟೀಮ್ ಇಂಡಿಯಾದ ನಾಯಕನಾಗಿಯೂ ಉತ್ತಮ ಪ್ರದರ್ಶನ ನೀಡಿದ್ದು, ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಯಕನಾಗಿ ಗುಜರಾತ್ ಟೈಟನ್ಸ್ ತಂಡವನ್ನು ನಾಯಕನಾಗಿ ಯಶಸ್ವಿಯಾಗಿ ಮುನ್ನಡೆಸಿದ್ದರು. ಹೀಗೆ ತಂಡದಿಂದ ಹೊರಬಿದ್ದಿದ್ದ ಹಾರ್ದಿಕ್ ಪಾಂಡ್ಯ ಸಾಲು ಸಾಲು ಉತ್ತಮ ಪ್ರದರ್ಶನ ನೀಡಿ ಕಮ್ಬ್ಯಾಕ್ ಮಾಡುವುದು ಮಾತ್ರವಲ್ಲದೇ ಇದೀಗ ತಂಡದ ಉಪನಾಯಕನಾಗುವ ಹಂತಕ್ಕೆ ಅಭಿವೃದ್ಧಿ ಸಾಧಿಸಿದ್ದಾರೆ.
ಏಷ್ಯಾಕಪ್ ಟೂರ್ನಿಗೆ ಬಿಸಿಸಿಐ ಪ್ರಕಟಿಸಬಹುದಾದ ಭಾರತ ಸ್ಕ್ವಾಡ್ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಕೆಎಲ್ ರಾಹುಲ್ ( ಫಿಟ್ ಆದರೆ ಮಾತ್ರ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ ಯುಜ್ವೇಂದ್ರ ಚಹಾಲ್, ರವಿ ಬಿಷ್ಣೋಯ್/ ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್