ದಿನೇಶ್ ಕಾರ್ತಿಕ್ ಆಯ್ಕೆ ಬಹುತೇಕ ಖಚಿತ
ದಿನೇಶ್ ಕಾರ್ತಿಕ್ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಗುರಿಯೊಂದಿಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್ಸಿಬಿ ಪರ ಮಿಂಚಿ ನಂತರ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ದಿನೇಶ್ ಕಾರ್ತಿಕ್ ಭಾರತ ತಂಡಕ್ಕೆ ಮರಳಿದ ನಂತರ ನಡೆದ ಎಲ್ಲಾ ಸರಣಿಗಳಲ್ಲಿಯೂ ಸಾಲು ಸಾಲು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದು, ಇದು ದಿನೇಶ್ ಕಾರ್ತಿಕ್ ಏಷ್ಯಾ ಕಪ್ಗೆ ಸಿದ್ಧರಾಗಲಿ ಎಂದು ಬಿಸಿಸಿಐ ನೀಡುತ್ತಿರುವ ಅವಕಾಶ ಎಂಬುದನ್ನು ಸುಲಭವಾಗಿ ಅರಿಯಬಹುದಾಗಿದೆ. ಈ ಮೂಲಕ ದಿನೇಶ್ ಕಾರ್ತಿಕ್ಗೆ ಏಷ್ಯಾಕಪ್ ಟಿಕೆಟ್ ಖಚಿತ ಎನ್ನಬಹುದಾಗಿದೆ.
ದಿನೇಶ್ ಕಾರ್ತಿಕ್ಗೆ ಅವಕಾಶ ಸಿಕ್ಕರೆ ಈ ಇಬ್ಬರು ಮನೆಗೆ
ಇನ್ನು ವಿಕೆಟ್ ಕೀಪರ್ ಆಗಿರುವ ದಿನೇಶ್ ಕಾರ್ತಿಕ್ಗೆ ಏಷ್ಯಾಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುವ ಅವಕಾಶ ನೀಡಿದರೆ ತಂಡದ ಇನ್ನಿಬ್ಬರು ವಿಕೆಟ್ ಕೀಪರ್ಗಳಾದ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವಕಾಶ ಸಿಗದೇ ಮೂಲೆಗುಂಪಾಗುವ ಸಾಧ್ಯತೆಗಳಿವೆ. ಆಯ್ಕೆಗಾರರು ಇಬ್ಬರು ವಿಕೆಟ್ ಕೀಪರ್ಗಳನ್ನು ಆಯ್ಕೆ ಮಾಡಿದರೆ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಆಯ್ಕೆಯಾಗಲಿದ್ದು, ಒಂದುವೇಳೆ ಮೂವರು ವಿಕೆಟ್ ಕೀಪರ್ಗಳನ್ನು ಆರಿಸಿದ್ದೇ ಆದರೆ ಇಶಾನ್ ಕಿಶನ್ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಆದರೆ, ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಹಲವು ಆಟಗಾರರು ಇರುವ ಕಾರಣ ಹಾಗೂ ವಿಕೆಟ್ ಕೀಪಿಂಗ್ ಮಾಡಬಲ್ಲ ಕೆಎಲ್ ರಾಹುಲ್ ತಂಡ ಸೇರುವ ಸಾಧ್ಯತೆಗಳಿದ್ದು, ಕೇವಲ ಇಬ್ಬರು ವಿಕೆಟ್ ಕೀಪರ್ಗಳಿಗೆ ಮಣೆ ಹಾಕುವ ಸಾಧ್ಯತೆಗಳಿವೆ.
ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗುವ ತಂಡ ಹೀಗಿರಲಿದೆ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್.
ಬ್ಯಾಕ್ ಅಪ್ ಬ್ಯಾಟರ್: ದೀಪಕ್ ಹೂಡಾ/ಇಶಾನ್ ಕಿಶನ್/ಸಂಜು ಸ್ಯಾಮ್ಸನ್
ಬ್ಯಾಕ್-ಅಪ್ ವೇಗಿಗಳು: ಅರ್ಷದೀಪ್ ಸಿಂಗ್/ಅವೇಶ್ ಖಾನ್/ದೀಪಕ್ ಚಾಹರ್/ಹರ್ಷಲ್ ಪಟೇಲ್.