ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು
ಏಷ್ಯಾ ಕಪ್ಗಾಗಿ ತಂಡಕ್ಕೆ ಹೆಚ್ಚಿನ ಸಮತೋಲನವನ್ನು ಸೇರಿಸುವ ಪ್ರಯತ್ನದಲ್ಲಿ ಭಾರತವು ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವೆ ಒಬ್ಬರನ್ನು ಆಯ್ಕೆ ಮಾಡಬೇಕು ಎಂದು ಅನೇಕ ಕ್ರಿಕೆಟ್ ತಜ್ಞರು ಮತ್ತು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದು, ಇದಕ್ಕೆ ರಿಷಭ್ ಪಂತ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟ್ ಪರಿಣಿತರ ಪ್ರಕಾರ, "ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಭಾರತದ ಆಡುವ 11ರ ಬಳಗಕ್ಕೆ ಆಯ್ಕೆಯಾದರೆ, ಹಾರ್ದಿಕ್ ಪಾಂಡ್ಯ ಸೇರಿದಂತೆ ಕೇವಲ ನಾಲ್ಕು ಬೌಲರ್ಗಳು ಆಡಲು ಸಾಧ್ಯವಾಗುತ್ತದೆ".
"ನಾವು ಆ ಮಾರ್ಗಗಳ ಬಗ್ಗೆ ಯೋಚಿಸುವುದಿಲ್ಲ. ಆಟಗಾರರಾಗಿ ನಾವು ಯಾವಾಗಲೂ ನಮ್ಮ 100 ಪ್ರತಿಶತವನ್ನು ತಂಡಕ್ಕೆ ನೀಡಲು ಬಯಸುತ್ತೇವೆ. ಅದರಿಂದ ತಂಡವು ಹೇಗೆ ಪ್ರಯೋಜನ ಪಡೆಯುತ್ತದೆ ಎಂಬುದು ಕೋಚ್ ಮತ್ತು ನಾಯಕನ ಮೇಲೆ ಅವಲಂಬಿತವಾಗಿದೆ," ಎಂದು ವಿಕೆಟ್ ಕೀಪರ್- ಎಡಗೈ ಬ್ಯಾಟ್ಸ್ಮನ್ ರಿಷಭ್ ಪಂತ್ ಝೀ ಹಿಂದೂಸ್ತಾನ್ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಒಂದೇ ತಂಡದ ಭಾಗವಾಗಿರುವ ಪಂತ್ ಮತ್ತು ಕಾರ್ತಿಕ್
ಜೂನ್ನಿಂದ ಹೆಚ್ಚಿನ ಟಿ20 ಪಂದ್ಯಗಳ ಮೂಲಕ ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಒಂದೇ ತಂಡದ ಭಾಗವಾಗಿದ್ದಾರೆ. ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಮತ್ತು ವೆಸ್ಟ್ ಇಂಡೀಸ್ನಲ್ಲಿನ ವಿದೇಶ ಸರಣಿಯಲ್ಲಿ ಪಂತ್ ಮತ್ತು ಕಾರ್ತಿಕ್ ಇಬ್ಬರನ್ನೂ ಒಟ್ಟಿಗೆ ಆಯ್ಕೆ ಮಾಡಿತು. ಯುವ ಆಟಗಾರ ರಿಷಭ್ ಪಂತ್ ವಿಕೆಟ್ಕೀಪರ್ ಹಾಗೂ ಮಾಧ್ಯಮ ಕ್ರಮಾಂಕದಲ್ಲಿ ಆಗಿ ಕಾಣಿಸಿಕೊಂಡರೆ, ಅನುಭವಿ ದಿನೇಶ್ ಕಾರ್ತಿಕ್ ಫಿನಿಶರ್ ರೂಪದಲ್ಲಿ ಕಾಣಿಸಿಕೊಂಡರು.
ಆಗಸ್ಟ್ 18ರಿಂದ ಪ್ರಾರಂಭವಾಗುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿ ಪ್ರವಾಸಕ್ಕೆ ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರನ್ನೂ ಆಯ್ಕೆ ಮಾಡಲಾಗಿಲ್ಲ. ಆದರೆ, ಪಂತ್ ಮತ್ತು ಕಾರ್ತಿಕ್ ಏಷ್ಯಾ ಕಪ್ನಲ್ಲಿ ಆಡಲಿದ್ದಾರೆ. ಅಲ್ಲಿ ಭಾರತವು ತಮ್ಮ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಗಸ್ಟ್ 28ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ತಮ್ಮ ಆರಂಭಿಕ ಪಂದ್ಯದಲ್ಲಿ ಆಡಲಿದೆ.
ಏಷ್ಯಾಕಪ್ಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಸ್ಟ್ಯಾಂಡ್ಬೈ ಆಟಗಾರರು; ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಮತ್ತು ದೀಪಕ್ ಚಹಾರ್.