2023ರ ಏಕದಿನ ಏಷ್ಯಾ ಕಪ್ ಆತಿಥ್ಯದ ಹಕ್ಕುಗಳನ್ನು ಆರಂಭದಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿತ್ತು ಮತ್ತು ಈ ವರ್ಷದ ಸೆಪ್ಟೆಂಬರ್ನಲ್ಲಿ ಪಂದ್ಯಾವಳಿ ನಿಗದಿಪಡಿಸಲಾಗಿತ್ತು. ಪಾಕಿಸ್ತಾನದಲ್ಲಿ ಪಂದ್ಯಾವಳಿ ನಡೆಸುವುದರ ವಿಚಾರವಾಗಿ ಕಳೆದ ಒಂದು ಕೆಲವು ತಿಂಗಳಿನಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಡುವೆ ವಾಕ್ಸಮರ ಜೋರಾಗಿದೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಕಳೆದ ಅಕ್ಟೋಬರ್ನಲ್ಲಿ ಏಷ್ಯಾಕಪ್ಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಘೋಷಿಸಿದ್ದರು ಮತ್ತು ಆ ನಿಲುವಿಗೆ ಈಗಲೂ ಬದ್ಧರಾಗಿದ್ದಾರೆ.
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
ಪಾಕಿಸ್ತಾನದಲ್ಲಿ ಭಾರತ ತಂಡ 2023ರ ಏಷ್ಯಾ ಕಪ್ ಆಡದಿದ್ದರೆ, ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸುವುದಿಲ್ಲ ಎಂದು ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಬಿಸಿಸಿಐಗೆ ಎಚ್ಚರಿಕೆ ನೀಡಿದ್ದರು. ಅಂದಿನಿಂದ ಎರಡು ಕ್ರಿಕೆಟ್ ಮಂಡಳಿಗಳ ನಡುವಿನ ಜಗಳ ತಾರಕಕ್ಕೇರಿದೆ.
ಶನಿವಾರ, ಫೆಬ್ರವರಿ 4ರಂದು ಬಿಸಿಸಿಐ ಕಾರ್ಯದರ್ಸಿ ಜಯ್ ಶಾ ಮತ್ತು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರು ಬಹ್ರೇನ್ನಲ್ಲಿ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸಭೆಯಲ್ಲಿ 2023ರ ಏಷ್ಯಾ ಕಪ್ ಆತಿಥ್ಯ ವಹಿಸುವ ಬಗ್ಗೆ ಮಾತುಕತೆ ನಡೆಸಿದರು.
ಏಷ್ಯಾ ಕಪ್ ಟೂರ್ನಿ ಅಂತಿಮ ಸ್ಥಳವನ್ನು ಇನ್ನೂ ನಿರ್ಧರಿಸಲಾಗಿಲ್ಲವಾದರೂ, ಕಳೆದ ವರ್ಷದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪಂದ್ಯಾವಳಿಯನ್ನು ಆಯೋಜಿಸುತ್ತದೆ ಎಂದು ವರದಿಯಾಗಿದೆ.
ಕ್ರಿಕೆಟ್ ಪಾಕಿಸ್ತಾನ್, ದಿ ನ್ಯೂಸ್, ಇಎಸ್ಪಿಎನ್ಕ್ರಿಕ್ಇನ್ಫೊ ಮತ್ತು ಜಿಇಒ ಟಿವಿ ಸೇರಿದಂತೆ ಪಾಕಿಸ್ತಾನ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳ ಹಲವು ವರದಿಗಳ ಪ್ರಕಾರ, "ಸೆಪ್ಟೆಂಬರ್ನಲ್ಲಿ ನಡೆಯುವ ಏಷ್ಯಾ ಕಪ್ ಪಂದ್ಯಾವಳಿಯಿಂದ ಭಾರತ ತಂಡ ಹಿಂದೆ ಸರಿದರೆ, ಪಾಕಿಸ್ತಾನ ತಂಡವು ಅಕ್ಟೋಬರ್-ನವೆಂಬರ್ನಲ್ಲಿ ಭಾರತದಲ್ಲಿ ನಡೆಯುವ 2023ರ ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸುವುದಿಲ್ಲ," ಎಂದು ಸಭೆಯಲ್ಲಿ ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
"ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಂಗಸಂಸ್ಥೆಗಳು ಶನಿವಾರ ಸಭೆ ನಡೆಸಿದ್ದು, ಸಾಕಷ್ಟು ರಚನಾತ್ಮಕ ಚರ್ಚೆಗಳು ನಡೆದಿವೆ. ಆದರೆ ಸ್ಥಳ ಬದಲಾವಣೆಯನ್ನು ಮಾರ್ಚ್ಗೆ ಮುಂದೂಡಲಾಗಿದೆ. ಭಾರತ ತಂಡವು ಪಾಕಿಸ್ತಾನಕ್ಕೆ ಹೋಗದಿರುವುದರಿಂದ ಪಂದ್ಯಾವಳಿಯನ್ನು ಸ್ಥಳಾಂತರಿಸುವುದು ಖಚಿತವಾಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಮತ್ತು ಭಾರತದ ಸ್ಟಾರ್ ಆಟಗಾರರು ಇಲ್ಲದ ಪಂದ್ಯಾವಳಿಗೆ ಪ್ರಾಯೋಜಕರು ಹಿಂದೆ ಸರಿಯುತ್ತಾರೆ," ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.
ನಜಮ್ ಸೇಥಿ ಇತ್ತೀಚಿಗಷ್ಟೆ ಪಿಸಿಬಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದಾರೆ. ಮೊದಲ ಸಭೆಯಲ್ಲೇ ಆತಿಥ್ಯ ಹಕ್ಕುಗಳನ್ನು ಅವರು ಬಿಟ್ಟುಕೊಟ್ಟರೆ, ತವರಿನಲ್ಲಿ ಮುಖಭಂಗಕ್ಕೆ ಒಳಗಾಗಲಿದ್ದಾರೆ ಎಂದು ಹೇಳಲಾಗಿದೆ.
ಪ್ರಸ್ತುತ ಪಾಕಿಸ್ತಾನ ದೇಶವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಹಣದುಬ್ಬರವು ದೇಶದ ಕರೆನ್ಸಿ 1 ಯುಎಸ್ ಡಾಲರ್ಗೆ 277 ರೂ.ಗೆ ಕುಸಿಯುವುದರೊಂದಿಗೆ ಆ ದೇಶ ದಿವಾಳಿಯತ್ತ ಸಾಗುತ್ತಿದೆ. ಏಷ್ಯಾ ಕಪ್ನಂತಹ ಉನ್ನತ ಮಟ್ಟದ ಪಂದ್ಯಾವಳಿಯನ್ನು ಆಯೋಜಿಸಿದರೆ, ಎಸಿಸಿ ಅನುದಾನ ನೀಡಿದರೂ, ಪಿಸಿಬಿ ಬೊಕ್ಕಸಕ್ಕೆ ದೊಡ್ಡ ಹೊಡೆತ ಬೀಳಲಿದೆ.