ಮೊಹಮ್ಮದ್ ಶಮಿಗಿಲ್ಲ ಸ್ಥಾನ
ಏಷ್ಯಾ ಕಪ್ನಲ್ಲಿ ಭಾರತದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಸ್ಥಾನವನ್ನು ಕಳೆದುಕೊಂಡಿದ್ದರೂ ಕೂಡ ಮತ್ತೋರ್ವ ಅನುಭವಿ ಮೊಹಮ್ಮದ್ ಶಮಿಗೆ ಸ್ಥಾನ ದೊರೆತಿಲ್ಲ. ಇತ್ತೀಚಿನ ಸರಣಿಗಳಲ್ಲಿ ಮೊಹಮ್ಮದ್ ಶಮಿ ಭಾರತದ ಟಿ20 ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳದೆ ಇದ್ದಾಗಲೇ ಈ ಬಗ್ಗೆ ಬಹುತೇಕ ಸ್ಪಷ್ಟತೆ ದೊರೆತಿತ್ತು. ಆದರೆ ಯುವ ಆಟಗಾರ ಆವೇಶ್ ಖಾನ್ ಪ್ರದರ್ಶನ ನೀರಸವಾಗಿದ್ದ ಕಾರಣ ಶಮಿಗೆ ಅವಕಾಶ ನೀಡಲೂ ಬಹುದು ಎಂಬ ಲೆಕ್ಕಾಚಾರಗಳು ನಡೆದಿದ್ದವು. ಆದರೆ ಅಂತಿಮವಾಗಿ ಯುವ ವೇಗೊ ಆವೇಶ್ ಖಾನ್ ಅವರೇ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಆಯ್ಕೆ ಬಗ್ಗೆ ಆಕಾಶ್ ಚೋಪ್ರ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಶಮಿಯನ್ನು ಮರೆತಿದ್ದೇಕೆ?
ಭಾರತ ತಂಡದಲ್ಲಿ ಮೊಹಮ್ಮದ್ ಶಮಿಯನ್ನು ಕಡೆಗಣಿಸಿದ್ದಕ್ಕೆ ಆಕಾಶ್ ಚೋಪ್ರ ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತಮ ಪ್ರದರ್ಶನ ನಿಡಿಕೊಂಡು ಬರುತ್ತಿದ್ದರೂ ಐಪಿಎಲ್ನಲ್ಲಿಯೂ ಶ್ರೇಷ್ಠ ಪ್ರದರ್ಶನ ನಿಡಿದ ಬಳಿಕವೂ ಅವರನ್ನು ಯಾವ ಕಾರಣಕ್ಕಾಗಿ ತಂಡದಿಂದ ಕೈಬಿಡಲಾಗಿದೆ ಎಂದು ಆಕಾಶ್ ಚೋಪ್ರ ಪ್ರಶ್ನಿಸಿದ್ದಾರೆ. "ಎಲ್ಲರೂ ಮೊಹಮ್ಮದ್ ಶಮಿಯನ್ನು ಕಡೆಗಣಿಸಿದ್ದೇಕೆ?. ಅವರು ಉತ್ತಮವಾಗಿ ಆಡುತ್ತಿದ್ದರು. ಅವರ ಐಪಿಎಲ್ ಅಂಕಿಅಂಶಗಳು ಕೂಡ ಅದ್ಭುತವಾಗಿದೆ" ಎಂದು ಆಕಾಶ್ ಚೋಪ್ರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆವೇಶ್ಗಿಂತ ಶಮಿ ಮುಂದೆ
ಮುಂದುವರಿದು ಮಾತನಾಡಿದ ಆಕಾಶ್ ಚೋಪ್ರ "ಈ ಸ್ಥಾನಕ್ಕಾಗಿ ಆವೇಶ್ ಖಾನ್ ಹಾಗೂ ಮೊಹಮ್ಮದ್ ಶಮಿ ಮಧ್ಯೆ ಸ್ಪರ್ಧೆಯನ್ನುಟ್ಟು ನನ್ನಲ್ಲಿ ಕೇಳಿದರೆ ನಾನು ಕಣ್ಮುಚ್ಚಿಕೊಂಡು ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಿರುತ್ತಿದ್ದೆ. ಇದರಲ್ಲಿ ಆವೇಶ್ ಖಾನ್ಗೆ ವಿರುದ್ಧವಾಗಿ ಏನೂ ಇಲ್ಲ. ಆದರೆ ಜಸ್ಪ್ರೀತ್ ಬೂಮ್ರಾ ಅಲಭ್ಯತೆಯಲ್ಲಿ ಹೊಸ ಚೆಂಡು ಮೊಹಮ್ಮದ್ ಶಮಿಗೆ ನೀಡುವುದು ಹೆಚ್ಚು ಸೂಕ್ತ" ಎಂದಿದ್ದಾರೆ ಆಕಾಶ್ ಚೋಪ್ರ.
ಕಳೆದ ವಿಶ್ವಕಪ್ ಬಳಿಕ ತಂಡದಿಂದ ಹೊರಬಿದ್ದಿರುವ ಶಮಿ
ಇನ್ನು ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಕಳೆದ ಬಹುತೇಕ ಹತ್ತು ತಿಂಗಳಿನಿಂದ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ನ್ಲಲಿ ಭಾಗವಹಿಸಿದ್ದ ಮೊಹಮ್ಮದ್ ಶಮಿ ನಂತರ ಭಾರತ ತಂಡದಿಂದ ಹೊರಬಿದ್ದಿದ್ದರು. ನಮೀಬಿಯಾ ವಿರುದ್ಧ ಆಡಿದ ಬಳಿಕ ಭಾರತ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಮುಕ್ತಾಯವಾಗಿ ಐಪಿಎಲ್ನಲ್ಲಿ ಶಮಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟಿ20 ಮಾದರಿಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿದ್ದರು. ಆದರೆ ಭಾರತದ ಏಕದಿನ ಹಾಗೂ ಟೆಸ್ಟ್ ತಂಡದ ಭಾಗವಾಗಿದ್ದಾರೆ ಮೊಹಮ್ಮದ್ ಶಮಿ.