ಇಂದೋರ್, ಸೆ. 25: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದುಕೊಂಡಿರುವ ಭಾರತಕ್ಕೆ ಇನ್ನಷ್ಟು ಬಲ ನೀಡಲು ಸ್ಪಿನ್ನರ್ ಅಕ್ಷರ್ ಪಟೇಲ್ ತಂಡಕ್ಕೆ ಮರಳಿದ್ದಾರೆ. ಆದರೆ, ಆಲ್ ರೌಂಡರ್ ರವೀಂದ್ರ ಜಡೇಜ ಅವರನ್ನು ಕೈ ಬಿಡಲಾಗಿದೆ.
ಎಂಎಸ್ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ ಭಾನುವಾರ ಪ್ರಕಟಿಸಿರುವ ತಂಡದಲ್ಲಿ ಆರಂಭಿಕ ಆಟಗಾರ ಶಿಖರ್ ಧವನ್ ಗೂ ಸ್ಥಾನ ನೀಡಲಾಗಿಲ್ಲ. ಪತ್ನಿಯ ಅನಾರೋಗ್ಯ ಕಾರಣದಿಂದ ಮೊದಲ ಮೂರು ಪಂದ್ಯಗಳನ್ನು ಹೊರಗುಳಿದಿದ್ದರು.
ಹಿರಿಯ ಸ್ಪಿನ್ನರ್ ರವೀಂದ್ರ ಜಡೇಜ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು ಏಕೆ ಎಂಬ ಪ್ರಶ್ನೆ ಎದ್ದಿದೆ. ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದ ಸ್ಪಿನ್ನರ್ ಅಕ್ಷರ್ ಪಟೇಲ್ ತಂಡಕ್ಕೆ ಮರಳಿದ್ದಾರೆ. ಮಿಕ್ಕಂತೆ ಮೊದಲ ಮೂರು ಪಂದ್ಯಗಳಿಗೆ ಆಯ್ಕೆಯಾಗಿದ್ದ ತಂಡವನ್ನೇ ಮುಂದುವರೆಸಲಾಗಿದೆ.
ಸರಣಿಯ ಇನ್ನುಳಿದ ಎರಡು ಪಂದ್ಯಗಳು ಸೆ.28 ಹಾಗೂ ಅ.1 ರಂದು ಕ್ರಮವಾಗಿ ಬೆಂಗಳೂರು ಮತ್ತು ನಾಗ್ಪುರ್ನಲ್ಲಿ ನಡೆಯಲಿವೆ.
ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್. ರಾಹುಲ್, ಮನೀಷ್ ಪಾಂಡೆ, ಕೇದಾರ್ ಜಾಧವ್, ಅಜಿಂಕ್ಯ ರಹಾನೆ, ಎಂ.ಎಸ್.ಧೋನಿ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯಾ, ಕುಲ್ದೀಪ್ ಯಾದವ್, ಯಜುವೇಂದ್ರ್ ಚಾಹಲ್, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಅಕ್ಷರ್ ಪಟೇಲ್.