ಏಷ್ಯಾಕಪ್ ಟೂರ್ನಿಗೆ ಪ್ರಕಟವಾದ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್
ಗಾಯದ ಸಮಸ್ಯೆಗೆ ಒಳಗಾದ ಬುಮ್ರಾ
ಭಾರತ ತಂಡದ ಪ್ರಮುಖ ಬೌಲರ್ಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಇಬ್ಬರೂ ಸಹ ಗಾಯದ ಸಮಸ್ಯೆಗೊಳಗಾಗಿರುವ ಕಾರಣ ಏಷ್ಯಾಕಪ್ ಟೂರ್ನಿಯ ಆಯ್ಕೆಗೆ ಅಲಭ್ಯರಾಗಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ. ಹಾಗೂ ಈ ಇಬ್ಬರೂ ಸಹ ಸದ್ಯ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಹೆಚ್ಚುವರಿ ಆಟಗಾರರು
ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡಕ್ಕೆ ಹೆಚ್ಚುವರಿ ಆಟಗಾರರಾಗಿ ದೀಪಕ್ ಚಹರ್, ಅಕ್ಷರ್ ಪಟೇಲ್ ಹಾಗೂ ಶ್ರೇಯಸ್ ಅಯ್ಯರ್ ಆಯ್ಕೆಯಾಗಿದ್ದಾರೆ.
ತಂಡಕ್ಕೆ ಮರಳಿದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್
ಕಳೆದ ಹಲವಾರು ಸರಣಿಗಳನ್ನು ಕೈ ತಪ್ಪಿಸಿಕೊಂಡಿದ್ದ ಕೆಎಲ್ ರಾಹುಲ್ ಸಾಲುಸಾಲಾಗಿ ಗಾಯದ ಸಮಸ್ಯೆ ಹಾಗೂ ಅನಾರೋಗ್ಯದ ಸಮಸ್ಯೆಗಳಿಂದಾಗಿ ಕಣಕ್ಕಿಳಿಯದೆೇ ಕೆಲ ತಿಂಗಳುಗಳ ಕಾಲ ಕ್ರಿಕೆಟ್ನಿಂದ ದೂರ ಸರಿದು ಏಷ್ಯಾಕಪ್ ಟೂರ್ನಿಯಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದರಲ್ಲಿ ಅನುಮಾನ ಮೂಡಿಸಿದ್ದರು. ಆದರೆ ಇದೀಗ ಬಿಸಿಸಿಐ ಕೆಎಲ್ ರಾಹುಲ್ ಅವರಿಗೆ ಮಣೆ ಹಾಕಿದ್ದು ಏಷ್ಯಾಕಪ್ ಟೂರ್ನಿಯಲ್ಲಿ ಕೆ ಎಲ್ ರಾಹುಲ್ ರೋಹಿತ್ ಶರ್ಮಾ ಜತೆ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ.
ಇನ್ನು ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ ಕೂಡ ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ವಿರಾಟ್ ಕೊಹ್ಲಿ ಏಷ್ಯಾಕಪ್ ಟೂರ್ನಿಗೆ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಮೂಡಿತ್ತು. ಆದರೆ ಈ ಪ್ರಶ್ನೆಗೆ ಇದೀಗ ಬಿಸಿಸಿಐ ಆಯ್ಕೆ ಸಮಿತಿ ಉತ್ತರಿಸಿದ್ದು ವಿರಾಟ್ ಕೊಹ್ಲಿಯನ್ನು ಏಷ್ಯಾಕಪ್ ಟೂರ್ನಿಗೆ ಆಯ್ಕೆ ಮಾಡಿದೆ.
ಅಶ್ವಿನ್ ಮತ್ತು ಅವೇಶ್ ಖಾನ್ ಅಚ್ಚರಿಯ ಆಯ್ಕೆ
ಇನ್ನು ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ಭಾರತ ತಂಡದಲ್ಲಿ ಬೌಲರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಅವೇಶ್ ಖಾನ್ ಆಯ್ಕೆಯಾಗಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ನಿಜಕ್ಕೂ ಅಚ್ಚರಿ ಮೂಡಿಸಿದೆ. ರವಿಚಂದ್ರನ್ ಅಶ್ವಿನ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಆಡುವ ಅವಕಾಶವನ್ನು ನೀಡದೇ ಇದ್ದರೂ ಸ್ಥಾನ ನೀಡಲಾಗಿದ್ದರೆ, ಇತ್ತೀಚಿನ ದಿನಗಳಲ್ಲಿ ಸಿಕ್ಕ ಅವಕಾಶಗಳಲ್ಲಿ ದುಬಾರಿಯಾಗಿ ಬೌಲಿಂಗ್ ಮಾಡಿದ ಅವೇಶ್ ಖಾನ್ ಅವರಿಗೆ ಸ್ಥಾನ ನೀಡಿರುವುದು ಕೂಡ ಅಚ್ಚರಿಗೆ ಕಾರಣವಾಗಿದೆ.
ದಿನೇಶ್ ಕಾರ್ತಿಕ್ ಆಯ್ಕೆ
ಇನ್ನು ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಸೇರ್ಪಡೆಗೊಳಿಸಿಕೊಂಡಿರುವ ವಿಷಯ ಸದ್ಯ ಕ್ರಿಕೆಟ್ ಅಭಿಮಾನಿಗಳ ಪಾಲಿನಲ್ಲಿ ಸಂತಸ ತಂದಿದೆ. ಸಿಕ್ಕ ಅವಕಾಶವನ್ನು ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಅಚ್ಚುಕಟ್ಟಾಗಿ ಉಪಯೋಗಿಸಿಕೊಂಡ ದಿನೇಶ್ ಕಾರ್ತಿಕ್ ನಂತರ ಭಾರತ ತಂಡ ಸೇರಿದ್ದು ಮಾತ್ರವಲ್ಲದೇ ಇದೀಗ ಏಷ್ಯಾಕಪ್ ಟೂರ್ನಿಗೂ ಕೂಡ ಆಯ್ಕೆಯಾಗಿ ತಾವು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ.