ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಮುಗಿಸಿರುವ ಟೀಮ್ ಇಂಡಿಯಾ ಹರಿಣಗಳ ನೆಲದಲ್ಲಿ ನಡೆದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-2 ಅಂತರದಿಂದ ಸೋಲುಂಡು, ನಂತರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 3 ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ಟೀಮ್ ಇಂಡಿಯಾ ವೈಟ್ ವಾಷ್ ಮುಖಭಂಗಕ್ಕೆ ಒಳಗಾಯಿತು. ಹೀಗೆ ಹರಿಣಗಳ ನೆಲದಲ್ಲಿ ನಡೆದ ಟೆಸ್ಟ್ ಹಾಗೂ ಏಕದಿನ ಎರಡೂ ಸರಣಿಗಳಲ್ಲಿಯೂ ಸೋತ ಟೀಮ್ ಇಂಡಿಯಾ ಭಾರೀ ಟೀಕೆಗಳಿಗೆ ಒಳಗಾಯಿತು. ಹಲವಾರು ಮಾಜಿ ಕ್ರಿಕೆಟಿಗರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಸೋಲಲು ಕೆಎಲ್ ರಾಹುಲ್ ಅವರ ನಾಯಕತ್ವವೇ ಕಾರಣ ಎಂದರೆ, ಇನ್ನೂ ಹಲವಾರು ಮಾಜಿ ಕ್ರಿಕೆಟಿಗರು ಭಾರತದ ಬೌಲಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡಿದ ಕಾರಣದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಹೀನಾಯ ಸೋಲನ್ನು ಅನುಭವಿಸಬೇಕಾಯಿತು ಎಂದು ಟೀಕಿಸಿದರು.
ಹೌದು, ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದ್ದ ಟೀಮ್ ಇಂಡಿಯಾ ಪ್ರಮುಖ ಬೌಲರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅನುಪಸ್ಥಿತಿಯನ್ನು ಎದುರಿಸಿತ್ತು. ಈ ಇಬ್ಬರೂ ಕೂಡ ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕಿಕೊಂಡಾಗಲೆಲ್ಲಾ ವಿಕೆಟ್ ಪಡೆದು ಆಪದ್ಬಾಂಧವರಾಗಿರುತ್ತಿದ್ದರು. ಅದರಲ್ಲಿಯೂ ರವೀಂದ್ರ ಜಡೇಜಾ ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್ ವಿಭಾಗದಲ್ಲಿಯೂ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದರು. ಹೌದು, ಆಲ್ ರೌಂಡರ್ ಆಟಗಾರ ರವೀಂದ್ರ ಜಡೇಜಾ ತಂಡಕ್ಕೆ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಹ ಉತ್ತಮ ಕೊಡುಗೆ ನೀಡುತ್ತಿದ್ದರು.
ಐಪಿಎಲ್ 2022: ಮೆಗಾ ಹರಾಜಿನಲ್ಲಿ ನೂತನ ನಾಯಕರನ್ನು ಖರೀದಿಸಲಿರುವ 5 ತಂಡಗಳಿವು
ಹೀಗೆ ತಂಡದ ಪ್ರಮುಖ ಅಸ್ತ್ರವಾಗಿದ್ದ ರವೀಂದ್ರ ಜಡೇಜಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಗಾಯಕ್ಕೊಳಗಾಗಿದ್ದ ಕಾರಣದಿಂದ ಅಲಭ್ಯರಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಹಲವಾರು ಮಾಜಿ ಕ್ರಿಕೆಟಿಗರು ರವೀಂದ್ರ ಜಡೇಜಾರ ಅನುಪಸ್ಥಿತಿ ಕೂಡ ಟೀಂ ಇಂಡಿಯಾದ ಹೀನಾಯ ಸೋಲಿಗೆ ಕಾರಣವಾಯಿತು ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಹೀಗೆ ಗಾಯದ ಸಮಸ್ಯೆಗೆ ಒಳಗಾಗಿರುವ ರವೀಂದ್ರ ಜಡೇಜಾ ಫೆಬ್ರವರಿ 6ರಿಂದ ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಿಗೂ ಕೂಡ ಅಲಭ್ಯರಾಗಿದ್ದು ಈ ಬಾರಿಯೂ ತಂಡದಿಂದ ಹೊರಬಿದ್ದಿರುವುದು ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ.
ಐಪಿಎಲ್ 2022: ಮೆಗಾ ಹರಾಜಿನಲ್ಲಿ ನೂತನ ನಾಯಕರನ್ನು ಖರೀದಿಸಲಿರುವ 5 ತಂಡಗಳಿವು
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಿಗೆ ಪ್ರಕಟಿಸಲಾದ ತಂಡದಲ್ಲಿ ರವೀಂದ್ರ ಜಡೇಜಾ ಇಲ್ಲದೇ ಇರುವುದನ್ನು ಕಂಡ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಸರಿ ಹೋಗುವುದು ಯಾವಾಗ ಮತ್ತು ಟೀಮ್ ಇಂಡಿಯಾ ಪರ ಮತ್ತೆ ಕಣಕ್ಕಿಳಿಯುವುದು ಯಾವಾಗ ಎಂಬ ಪ್ರಶ್ನೆಗಳನ್ನು ಕೇಳತೊಡಗಿದರು. ಈ ಪ್ರಶ್ನೆಗಳಿಗೆ ಉತ್ತರಿಸಿರುವ ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ರವೀಂದ್ರ ಜಡೇಜಾ ಅವರ ಫಿಟ್ನೆಸ್ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದ್ದು, ಚೇತರಿಕೆಯ ಅಂತಿಮ ಹಂತದಲ್ಲಿ ಇದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಹೀಗೆ ಚೇತರಿಕೆಯ ಅಂತಿಮ ಹಂತದಲ್ಲಿರುವ ರವೀಂದ್ರ ಜಡೇಜಾ ಸಂಪೂರ್ಣವಾಗಿ ಚೇತರಿಕೆ ಕಾಣದ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿಯುತ್ತಿಲ್ಲ ಎಂಬ ಮಾಹಿತಿಯನ್ನು ಬಿಸಿಸಿಐ ಬಿಚ್ಚಿಟ್ಟಿದೆ.