ಅನಾಮಧೇಯರಿಂದ ಮೇಲ್
ಪಿಸಿಬಿ ಅಧಿಕೃತ ಇಮೇಲ್ ಖಾತೆಗೆ ಅನಾಮಧೇಯರಿಂದ ಒಂದು ಇ-ಮೇಲ್ ಬಂದಿತ್ತು. ಇದರಲ್ಲಿ ಸದ್ಯ ವಿಂಡೀಸ್ ಪ್ರವಾಸದಲ್ಲಿರುವ ಕೊಹ್ಲಿ ಬಳಗದ ಮೇಲೆ ಭಯೋತ್ಪಾದನಾ ದಾಳಿಯಾಗಲಿದೆ ಎಂದು ತಿಳಿಸಲಾಗಿತ್ತು. ಪಿಸಿಬಿ ಕೂಡಲೇ ಆ ಇ-ಮೇಲ್ ಅನ್ನು ಐಸಿಸಿ ಮತ್ತು ಬಿಸಿಸಿಐಗೆ ಫಾರ್ವರ್ಡ್ ಮಾಡಿತ್ತು ಎಂದು ತಿಳಿದುಬಂದಿದೆ.
ಸಂಘಟನೆಯ ಸುಳಿವಿಲ್ಲ
ಪಿಸಿಬಿಗೆ ಬಂದಿದ್ದ ಮೇಲ್ನಲ್ಲಿ ಬೆದರಿಕೆಯೊಡ್ಡಿದ್ದು ಯಾವ ಸಂಘಟನೆ ಎಂದು ನಿಖರವಾಗಿ ಹೇಳಲಾಗಿಲ್ಲ. ಬಿಸಿಸಿಐ ಅಧಿಕಾರಿಗಳು ಈ ಬಗ್ಗೆ ಮಾತನಾಡಿ, 'ನಾವು ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದೇವೆ ಮತ್ತು ಅದು ವಂಚನೆಯ ಇ-ಮೇಲ್ ಎಂದು ತಿಳಿದುಬಂದಿದೆ,' ಎಂದು ಪಿಟಿಐಗೆ ಮಾಹಿತಿ ನೀಡಿದ್ದಾರೆ. ಹಾಗಂತ ಆಟಗಾರರಿಗೆ ಭದ್ರತೆ ಒದಗಿಸುವ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಟಿ20, ಏಕದಿನ ಸರಣಿ ಗೆಲುವು
ವೆಸ್ಟ್ ಇಂಡೀಸ್ ಪ್ರವಾಸದ ಟಿ20, ಏಕದಿನ ಸರಣಿಗಳನ್ನು ಗೆದ್ದಿರುವ ಭಾರತ, ಇನ್ನು 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಸದ್ಯ 3 ದಿನಗಳ ಅಭ್ಯಾಸ ಪಂದ್ಯ ನಡೆಯುತ್ತಿದ್ದು, ಆಗಸ್ಟ್ 22ರಂದು ಮೊದಲ ಟೆಸ್ಟ್ ಪಂದ್ಯ ಆ್ಯಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.
ಪೂಜಾರ ಶತಕ
ಅಭ್ಯಾಸ ಪಂದ್ಯದಲ್ಲಿ ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಚೇತೇಶ್ವರ ಪೂಜಾರ ಶತಕ ಬಾರಿಸಿದ್ದಾರೆ. 187 ಎಸೆತಕ್ಕೆ ಪೂಜಾರ ಭರ್ತಿ 100 ರನ್ ಗಳಿಸಿದ್ದರು. ರೋಹಿತ್ ಶರ್ಮಾ 68 ರನ್ನೊಂದಿಗೆ ಭಾರತ 297 ರನ್ ಮಾಡಿತ್ತು. ಇನ್ನಿಂಗ್ಸ್ ಆರಂಭಿಸಿದ್ದ ವಿಂಡೀಸ್ 181 ರನ್ ಪೇರಿಸಿತ್ತು. ದ್ವಿತೀಯ ಇನ್ನಿಂಗ್ಸ್ ಆಡುತ್ತಿರುವ ಭಾರತ 1 ವಿಕೆಟ್ ಕಳೆದು 84 ರನ್ ಮಾಡಿದೆ. ನಾಯಕ ಅಜಿಂಕ್ಯ ರಹಾನೆ (20), ಹನುಮ ವಿಹಾರಿ (48) ಕ್ರೀಸ್ನಲ್ಲಿದ್ದಾರೆ.