ಮಾಜಿ ಟೀಮ್ ಇಂಡಿಯಾ ನಾಯಕ ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಮತ್ತೊಮ್ಮೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕೊಲ್ಕತ್ತಾದ ಅಪೋಲೋ ಆಸ್ಪತ್ರೆಗೆ ಸೌರವ್ ಗಂಗೂಲಿಯನ್ನು ಕರೆದೊಯ್ಯಲಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಸೌರವ್ ಗಂಗೂಲಿ ಆರೋಗ್ಯದ ಬಗ್ಗೆ ಕೊಲ್ಕತ್ತಾದ ಅಪೊಲೊ ಆಸ್ಪತ್ರೆ ಮಾಹಿತಿಯನ್ನು ನೀಡಿದೆ. ಸೌರವ್ ಗಂಗೂಲಿ ಸಾಮಾನ್ಯ ಪರೀಕ್ಷೆಗಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಅವರ ಆರೋಗ್ಯ ಸಂಪೂರ್ಣವಾಗಿ ಸ್ಥಿರವಾಗಿದ್ದು ಹೃದಯ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದೆ. ಅವರ ಪ್ಯಾರಾ ಮೀಟರ್ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹಿಂದೆ ಆಸ್ಪತ್ರೆಯಿಂದ ಬಿಡುಗಡೆಯಾದಾಗ ಇದ್ದಂತೆಯೇ ಸ್ಥಿರವಾಗಿದೆ ಎಂದು ಅಪೊಲೊ ಆಸ್ಪತ್ರೆಗೆ ಹೇಳಿಕೆಯಲ್ಲಿ ತಿಳಿಸಿದೆ.
ಸೌರವ್ ಗಂಗೂಲಿ ಇತ್ತೀಚೆಗೆ ತಮ್ಮ ನಿವಾಸದ ಜಿಮ್ನಲ್ಲಿದ್ದಾದ ಲಘು ಹೃದಯಾಘಾತವಾಗಿದ್ದು ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಂಜಿಯೋಪ್ಲಾಸ್ಟಿ ನಡೆಸಿದ ಬಳಿಕ ಮೂರು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆದ ಸೌರವ್ ಗಂಗೂಲಿಯನ್ನು ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿತ್ತು.
ಸೌರವ್ ಗಂಗೂಲಿ ಮತ್ತೊಂದು ಆಂಜಿಯೋಪ್ಲಾಸ್ಟಿಗೆ ಒಳಗಾಗಬೇಕಾಗುತ್ತದೆ, ಆದರೆ ಕೆಲ ದಿನಗಳ ವಿಶ್ರಾಂತಿಯ ಬಳಿಕ ಅದನ್ನು ನಡೆಸುವುದು ಉತ್ತಮ ಎಂಬ ನಿರ್ಧಾರವನ್ನು ತಜ್ಞ ವೈದ್ಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಹಿತಿಯನ್ನು ಗಂಗೂಲಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಂದರ್ಭದಲ್ಲಿ ವಿವರಿಸಿದ್ದರು.