ನವದೆಹಲಿ, ಜುಲೈ 10: ಬಿಸಿಸಿಐ ಮತ್ತು ಸುಪ್ರೀಂಕೋರ್ಟ್ ನೇಮಿತ ಆಡಳಿತ ಸಮಿತಿ (ಸಿಒಎ) ನಡುವಣ ಸಂಘರ್ಷ ಮತ್ತಷ್ಟು ತೀವ್ರವಾಗುವ ಲಕ್ಷಣ ಗೋಚರಿಸಿದೆ.
ಉಭಯ ಸಮಿತಿಗಳ ಮುಖ್ಯಸ್ಥರ ಮುಯ್ಯಿಗೆ ಮುಯ್ಯಿ ಎಂಬ ಧೋರಣೆ ಕಂಡುಬರುತ್ತಿದೆ.
ಮಂಡಳಿಯ ಜನರಲ್ ಮ್ಯಾನೇಜರ್ ಸಾಬಾ ಕರೀಂ ಅವರ ಇಂಗ್ಲೆಂಡ್ ಪ್ರವಾಸದ ಉದ್ದೇಶವನ್ನು ಖಜಾಂಚಿ ಅನಿರುದ್ಧ್ ಚೌಧರಿ ಪ್ರಶ್ನಿಸಿದ್ದಾರೆ.
ಮತ್ತೆ ಶುರುವಾಯಿತು ಬಿಸಿಸಿಐ-ಸಿಒಎ ಜಟಾಪಟಿ
ಇತ್ತೀಚೆಗೆ ಬಿಸಿಸಿಐ ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರು ತಮ್ಮ ಸಹಾಯಕರೊಂದಿಗೆ ಭೂತಾನ್ಗೆ ಭೇಟಿ ನೀಡಿದ್ದನ್ನು ಸಿಒಎ ಪ್ರಶ್ನಿಸಿತ್ತು.
ಸಿಒಎಗೆ ಇಮೇಲ್ ಮೂಲಕ ಪತ್ರ ಬರೆದಿರುವ ಚೌಧರಿ, ಸಾಬಾ ಕರೀಂ ಅವರ ಒಂಬತ್ತು ದಿನಗಳ ಇಂಗ್ಲೆಂಡ್ ಪ್ರವಾಸಕ್ಕಾಗಿ $4,050ಕ್ಕೆ ಸಮನಾದ ವಿದೇಶಿ ವಿನಿಮಯ ಹಣವನ್ನು ಮಂಜೂರು ಮಾಡುವಂತೆ ಇ-ಮೇಲ್ ಕಳುಹಿಸಲಾಗಿದೆ.
ಕರೀಂ ಅವರ ಇಂಗ್ಲೆಂಡ್ ಪ್ರವಾಸದ ಕುರಿತು ನನಗೆ ಈ ಮಾಹಿತಿಗಳನ್ನು ನೀಡುವಂತೆ ಕೋರುತ್ತೇನೆ...
* ಇಂಗ್ಲೆಂಡ್ಗೆ ಅವರ ಭೇಟಿಯ ಉದ್ದೇಶದ ಕುರಿತಾದ ಅಗತ್ಯ ದಾಖಲೆಗಳು ಮತ್ತು ಅದರ ಬಗ್ಗೆ ನಿರ್ಧಾರ ತೆಗೆದುಕೊಂಡ ಪ್ರಕ್ರಿಯೆಯ ವಿವರ ಹಾಗೂ ಈ ಸಂಬಂಧ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ಯಿಂದ ಯಾವುದಾದರೂ ಆಹ್ವಾನ ಬಂದಿದ್ದರೆ ಅಥವಾ ಇದಕ್ಕೂ ಮುನ್ನ ಇಸಿಬಿ ಜತೆ ಯಾವುದಾದರೂ ಸಂವಹನ ನಡೆದಿದ್ದರೆ ಅದರ ಮಾಹಿತಿ.
* ಅನುಮೋದನೆಗೊಂಡಿದಕ್ಕೆ ಅಗತ್ಯವಾದ ದಾಖಲೆಗಳು
* ಸಮಿತಿಯ ಯಾವುದಾದರೂ ಸಿಬ್ಬಂದಿ ಇತ್ತೀಚೆಗೆ ಇಂಗ್ಲೆಂಡ್ಗೆ ಭೇಟಿ ನೀಡಿದ್ದರೇ ಎಂಬ ಮಾಹಿತಿ
* ಇತ್ತೀಚೆಗೆ ಇಂಗ್ಲೆಂಡ್ಗೆ ತೆರಳಿದ್ದ ಯಾವುದಾದರೂ ಸಿಬ್ಬಂದಿಯಿಂದ ಕಾರ್ಯ ಪೂರ್ಣವಾಗದೆ ಇದ್ದು, ಅದನ್ನು ಪೂರ್ಣಗೊಳಿಸಲು ಕರೀಂ ಅವರು ಹೋಗುತ್ತಿರುವ ಸಾಧ್ಯತೆ ಇದೆಯೇ?
ಕಳೆದ ತಿಂಗಳು ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಅವರಿಗೆ ಇಂಗ್ಲೆಂಡ್ಗೆ ಹೋಗಲು ಸಿಒಎ ಅನುಮತಿ ನಿರಾಕರಿಸಿದ್ದರ ಕುರಿತು ಸಹ ಖಜಾಂಚಿ ಉಲ್ಲೇಖಿಸಿದ್ದಾರೆ.
ದೇಶಿ ಕ್ರಿಕೆಟಿಗರ ಶುಲ್ಕ ಏರಿಕೆ ಪ್ರಸ್ತಾವ ತಿರಸ್ಕರಿಸಿದ ಸಿಒಎ
'ಇಲ್ಲಿ ತಪ್ಪು ತಿಳಿವಳಿಕೆಯ ಅಗತ್ಯವಿಲ್ಲ. ಹಂಗಾಮಿ ಕಾರ್ಯದರ್ಶಿ ಅವರು ಇಂಗ್ಲೆಂಡ್ಗೆ ತೆರಳಲು ಮಾನ್ಯ ಸಿಒಎ ಅನುಮತಿ ನಿರಾಕರಿಸಿ ಜೂನ್ 18ರಂದು ಇಮೇಲ್ ಕಳುಹಿಸಿತ್ತು.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಟಿ20 ಸರಣಿಯನ್ನು ನೋಡುವ ಸಲುವಾಗಿಯಷ್ಟೇ ನೀವು ಅಲ್ಲಿಗೆ ತೆರಳುವುದರಿಂದ ಬಿಸಿಸಿಐಗೆ ಯಾವುದೇ ಮೌಲ್ಯವರ್ಧನೆಯಾಗುವುದು ಕಾಣಿಸುತ್ತಿಲ್ಲ ಎಂದು ಹೇಳಲಾಗಿತ್ತು.
ನನಗೆ ಸಾಬಾ ಕರೀಮ ಅವರ ಇಂಗ್ಲೆಂಡ್ ಪ್ರವಾಸದ ಕಾರಣಗಳು ತಿಳಿದಿಲ್ಲ. ಅದರ ಬಗ್ಗೆ ಯಾವುದೇ ಪತ್ರಗಳು, ದಾಖಲೆಗಳು ಅಥವಾ ನನ್ನ ಸಹಿ ಬಯಸಿ ಕಳುಹಿಸಿರುವ ಪತ್ರದ ಹೊರತು ಇನ್ಯಾವುದೇ ಸಂವಹನಗಳು ನಡೆದಿಲ್ಲ.
ನನ್ನ ಕುತೂಹಲವನ್ನು ತಣಿಸಿಕೊಳ್ಳಲು ಸಹ ನಾನು ಬಯಸಿದ್ದೇನೆ. ಇದರಲ್ಲಿ ಸಿಒಎಯ ನಿರ್ಧಾರದ ಮಹತ್ವ ಮತ್ತು ಪತ್ರದಿಂದ ನುಣುಚಿಕೊಳ್ಳಲು ಯಾರೂ ಪ್ರಯತ್ನಿಸುತ್ತಿಲ್ಲ ಎಂಬ ಎಚ್ಚರಿಕೆಯನ್ನು ಖಚಿತಪಡಿಸಿಕೊಳ್ಳಲು ಇಚ್ಛಿಸಿದ್ದೇನೆ ಎಂದು ತೀಕ್ಷ್ಣವಾಗಿ ಅವರು ಪತ್ರದಲ್ಲಿ ಹೇಳಿದ್ದಾರೆ.