ದೇಶಕ್ಕಿಂತ ಹಣ ಮುಖ್ಯ
ದೇಶಕ್ಕಿಂತಲೂ ನಿಮಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯೇ ಮುಖ್ಯವಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಬಿಡಿ ನಿವೃತ್ತಿ ಹೇಳಿ ಒಂದೂವರೆ ವರ್ಷ ಕಳೆಯುತ್ತ ಬಂದಿದೆ ಎಂದು ಅಖ್ತರ್ ಕುಟುಕಿದ್ದಾರೆ. ರಾಷ್ಟ್ರೀಯ ತಂಡಕ್ಕಿಂತಲೂ ಎಬಿ ಡಿವಿಲಿಯರ್ಸ್ ಐಪಿಎಲ್ ಮತ್ತು ಪಿಎಸ್ಎಲ್ ನತ್ತ ಹೆಚ್ಚು ಆಸಕ್ತಿ ತೋರಿಸಿದ್ದಕ್ಕಾಗಿ ಅಖ್ತರ್ ಹೀಗೆ ಕಾಲೆಳೆದಿದ್ದಾರೆ.
ದ.ಆಫ್ರಿಕಾಗೆ ಸತತ ಸೋಲು
ದಕ್ಷಿಣ ಆಫ್ರಿಕಾ ತಂಡ ವಿಶ್ವಕಪ್ ನಲ್ಲಿ ಮೂರು ಪಂದ್ಯಗಳನ್ನು ಆಡಿದೆ. ಈ ಮೂರರಲ್ಲೂ ಸೋತು ಗ್ರೂಪ್ ಹಂತದ ಸ್ಪರ್ಧೆಯಲ್ಲೇ ಹೊರಬೀಳುವ ಭೀತಿ ಅನುಭವಿಸುತ್ತಿದೆ. ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಸೋಲಿನ ಮುಖಭಂಗ ಅನುಭವಿಸಿತ್ತು. ಈ ನಡುವೆ ಎಬಿ ಡಿವಿಲಿಯರ್ಸ್ಗೆ ತಾನು ನಿವೃತ್ತಿ ನೀಡಿರುವ ಬಗ್ಗೆ ಪಶ್ಚಾಚಾಪಯಾಯಿತೋ ಏನೋ. ವಿಶ್ವಕಪ್ನಲ್ಲಿ ಆಡಲು ಅನುಮತಿ ನೀಡುವಂತೆ ಕ್ರಿಕೆಟ್ ದಕ್ಷಿಣ ಆಫ್ರಿಕಾದ ಕದ ತಟ್ಟಿದ್ದರು.
ಗಿಮಿಕ್ ಅಲ್ಲದೆ ಮತ್ತೇನು?
ಮಿಸ್ಟರ್ 360 ಡಿಗ್ರಿಯನ್ನು ಗುರಿಯಾಗಿಸಿ ಯು ಟ್ಯೂಬ್ ಚಾನೆಲ್ನಲ್ಲಿ ಮಾತನಾಡುತ್ತ ಅಖ್ತರ್, 'ನಿವೃತ್ತಿ ನೀಡಿ ನೀವೀಗಾಗಲೇ ಸುಮಾರು ಎರಡು ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ಕಳೆದುಕೊಂಡಾಗಿದೆ. ನಿಮ್ಮ ನಿವೃತ್ತಿ ನಿರ್ಧಾರ ಸರಿಯಲ್ಲ. ಈಗ ಮತ್ತೆ ದಕ್ಷಿಣ ಆಫ್ರಿಕಾ ಪರ ಬ್ಯಾಟಿಂಗ್ ಮಾಡುತ್ತೇನೆ ಅನ್ನುತ್ತಿದ್ದೀರಿ. ಇದು ಗಿಮಿಕ್ ಅಲ್ಲದೆ ಮತ್ತೇನು?' ಎಂದು ಪ್ರಶ್ನಿಸಿದ್ದಾರೆ.
ನಿರ್ಧಾರಕ್ಕೆ ಗಟ್ಟಿಯಾಗಬೇಕು
'ನಿವೃತ್ತಿ ಘೋಷಿಸಿದ್ದೇ ನಿಮ್ಮದು ತಪ್ಪು ನಿರ್ಧಾರ. ಈಗ ಮತ್ತೆ ಆಡುತ್ತೇನೆ ಎನ್ನುತ್ತಿರುವುದು ಇನ್ನೊಂದು ತಪ್ಪು. ನೀವೊಬ್ಬ ಒಳ್ಳೆಯ ಮನುಷ್ಯ ಹೌದಾದರೆ ನೀವು ಒಮ್ಮೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಗಟ್ಟಿಯಾಗಬೇಕು. ಈ ರೀತಿ ನೀವು ಹೆಸರು ಕೆಡಿಸಿಕೊಳ್ಳೋದು ಸರಿಯಲ್ಲ' ಎಂದು ರಾವಲ್ಪಿಂಡಿ ಎಕ್ಸ್ಪ್ರೆಸ್ ಅಖ್ತರ್ ಹೇಳಿದ್ದಾರೆ. ಅಂತೂ ಎಬಿಡಿಯ ಆಸೆಗೆ ಕ್ರಿಕೆಟ್ ದಕ್ಷಿಣ ಆಫ್ರಿಕಾ ತಣ್ಣೀರೆರಚಿರುವ ಜೊತೆಗೆ ಎಬಿಡಿ ಅವರಿವರ ಟೀಕೆಗೂ ಗುರಿಯಾಗುವಂತಾಗಿದೆ.