ದೃಷ್ಠಿದೋಷದಿಂದ ಬಳಲುತ್ತಿದ್ದರು ಮುಷ್ತಾಕ್
ಪಾಕಿಸ್ತಾನದ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಅವರು ಕ್ರಿಕೆಟ್ನಲ್ಲಿ ಸಕ್ರಿಯರಾಗಿದ್ದ ವೇಳೆಯಲ್ಲೇ ದೃಷ್ಟಿದೋಷಕ್ಕೆ ಒಳಗಾಗಿದ್ದರಂತೆ. ಈ ಮಾತನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಚೆಂಡು ನನ್ನ ಸಮೀಪಕ್ಕೆ ಬಂದರೂ ನನಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಣ್ಣಿನಲ್ಲಿ ಪೊರೆ ಕಟ್ಟಿದ ಕಾರಣ ದೃಷ್ಟಿ ಮಂದವಾಗಿತ್ತು ಎಂದಿದ್ದಾರೆ
ಭಾರತದ ನನ್ನ ಅಣ್ಣ ಅನಿಲ್ ಕುಂಬ್ಳೆಯಿಂದ ಸಹಾಯ
ದೃಷ್ಠಿ ದೋಷದ ಪರಿಹಾರಕ್ಕೆ ಪಾಕಿಸ್ತಾನದಲ್ಲಿ ಸಾಕಷ್ಟು ಪ್ರಯತ್ನ ಪಟ್ಟೆ, ಆದರೆ ಪಾಕಿಸ್ತಾನದ ಅನೇಕ ವೈದ್ಯರನ್ನು ಭೇಟಿಯಾದರೂ ನನ್ನ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಅಂತಾ ಸಂದರ್ಭದಲ್ಲಿ ಭಾರತದ ನನ್ನ ದೊಡ್ಡಣ್ಣ ಅನಿಲ್ ಕುಂಬ್ಳೆ ನನಗೆ ಸಹಾಯ ಮಾಡಿದರು ಎಂದು ಸಕ್ಲೇನ್ ಮುಷ್ತಾಕ್ ನೆನಪಿಸಿಕೊಂಡಿದ್ದಾರೆ.
ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಸಮಸ್ಯೆ
ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗಲೇ ಈ ಸಮಸ್ಯೆಯಿಂದ ಕಂಗೆಟ್ಟಿದ್ದ ನನಗೆ ಇಂಗ್ಲೆಂಡ್ನಲ್ಲಿ ಅನಿಲ್ ಕುಂಬ್ಳೆ ಸಿಕ್ಕಿದ್ದರು. ಈ ವೇಳೆ ನನ್ನ ಸಮಸ್ಯೆಯನ್ನು ಅನಿಲ್ ಕುಂಬ್ಳೆ ಜೊತೆಗೆ ಹಂಚಿಕೊಂಡಿದ್ದೆ. ಆಗ ಇಂಗ್ಲಂಡ್ನಲ್ಲೇ ಇದ್ದ ವೈದ್ಯರೊಬ್ಬರನ್ನು ಸಂಪರ್ಕಿಸಲು ಅನಿಲ್ ಕುಂಬ್ಳೆ ಸೂಚಿಸಿದರು ಎಂದು ಮುಷ್ತಾಕ್ ಹೇಳಿದ್ದಾರೆ.
ಡಾ. ಭರತ್ ರೂಗಾನಿಯವರ ಭೇಟಿಗೆ ಸೂಚಿಸಿದ್ದ ಕುಂಬ್ಳೆ
ಲಂಡನ್ನ ಖ್ಯಾತ ಕಣ್ಣಿನ ವೈದ್ಯ ಡಾ. ಭರತ್ ರೂಗಾನಿಯವರನ್ನು ಭೇಟಿಯಾಗುವಂತೆ ಅನಿಲ್ ಕುಂಬ್ಳೆ ಸೂಚಿಸಿದ್ದರು. ಅಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡ ಬಳಿಕ ನನ್ನ ಸಮಸ್ಯೆ ಸಂಪೂರ್ಣವಾಗಿ ಗುಣಮುಖವಾಗಿತ್ತು. ನಾನು ಮತ್ತೆ ಸಹಜ ದೃಷ್ಟಿಯನ್ನು ಪಡೆದುಕೊಳ್ಳಲು ಸಹಕಾರಿಯಾಯಿತು ಎಂದು ಕನ್ನಡಿಗ ಅನಿಲ್ ಕುಂಬ್ಳೆ ಮಾಡಿದ ಸಹಾಯವನ್ನು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೇನ್ ಮುಷ್ತಾಕ್ ಸ್ಮರಿಸಿದ್ದಾರೆ.
ಆಟದ ಬಗ್ಗೆಯೂ ಕುಂಬ್ಳೆ ಸಲಹೆ
ಇದೇ ಸಂದರ್ಭದಲ್ಲಿ ಸಕ್ಲೇನ್ ಮುಷ್ತಾಕ್ ಆಟದಲ್ಲೂ ಸಾಕಷ್ಟು ಸಲಹೆಗಳನ್ನು ಅನಿಲ್ ಕುಂಬ್ಳೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಸರಣಿಯ ನಡುವೆ ಹಲವು ಸಲಹೆಗಳನ್ನು ನನ್ನ ಆಟಕ್ಕೆ ಪೂರಕವಾಗಿ ನೀಡಿದ್ದಾರೆ ಇದು ನನ್ನ ಯಶಸ್ಸಿಗೂ ಸಹಕಾರಿಯಾಗಿದೆ ಎಂದು ಸಕ್ಲೇನ್ ಮುಷ್ತಾಕ್ ಅನಿಲ್ ಕುಂಬ್ಳೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.