ದಿಗ್ಗಜನಿಗೋಸ್ಕರ ತಂಡದ ಹೋರಾಟ
2011ರ ವಿಶ್ವಕಪ್ನಲ್ಲಿ ಗೆಲುವು ಸಾಧಿಸಲೇ ಬೇಕೆಂದು ಇಡೀ ಟೀಮ್ ಇಂಡಿಯಾ ಒಟ್ಟಾಗಿತ್ತು. ಅದಕ್ಕೆ ಕಾರಣ ಸಚಿನ್ ತೆಂಡೂಲ್ಕರ್. ಸಚಿನ್ ತೆಂಡೂಲ್ಕರ್ ಅವರಿಗೋಸ್ಕರ ಈ ವಿಶ್ವಕಪ್ ಗೆಲುವು ಬೇಕೇ ಬೇಕು ಎಂಬುದು ಎಲ್ಲರ ಮನಸ್ಥೊತಿಯಾಗಿತ್ತು. ಇಡೀ ತಂಡದ ಕನಸು ಅದಾಗಿತ್ತು ಎಂದು ಸುರೇಶ್ ರೈನಾ ಹೇಳಿದ್ದಾರೆ.
ಸಚಿನ್ ಕೊನೆಯ ವಿಶ್ವಕಪ್
1989ರಿಂದ ಟೀಮ್ ಇಂಡಿಯಾ ಪರವಾಗಿ ಆಡುತ್ತಿರುವ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ಗೆ ವಿಶ್ವಕಪ್ ಗೆಲುವು ಸಾಧ್ಯವಾಗಿರಲಿಲ್ಲ. 2011ರ ವಿಶ್ವಕಪ್ ಅವರ ಕೊನೆಯ ವಿಶ್ವಕಪ್ ಆಗಿದ್ದ ಕಾರಣ ಅವರ ಸ್ಮರಣೀಯ ವಿದಾಯಕ್ಕಾಗಿ ಇಡೀ ತಂಡ ಉತ್ಸುಕವಾಗಿತ್ತು. ಈ ಅಂತಿಮ ವಿಶ್ವಕಪ್ನಲ್ಲೂ ಸಚಿನ್ ಟೀಮ್ ಇಂಡಿಯಾ ಪರವಾಗಿ ಅತ್ಯಂತ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದರು. ಫೈನಲ್ನಲ್ಲಿ ಸಚಿನ್ ಬೇಗನೆ ವಿಕೆಟ್ ಒಪ್ಪಿಸಿದರಾದರೂ ಇಡೀ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದರು. 9 ಪಂದ್ಯಗಳಿಂದ ಸಚಿನ್ 482 ರನ್ ಗಳಿಸಿದ್ದರು ಎಂದು ಸುರೇಶ್ ರೈನಾ ಹೇಳಿದ್ದಾರೆ.
ವಿಶ್ವಕಪ್ ಗೆಲುವಿಗೆ ಸಚಿನ್ ಕಾರಣ
ಸಚಿನ್ ತೆಂಡೂಲ್ಕರ್ ತಂಡದ ಪ್ರತಿಯೊಬ್ಬ ಆಟಗಾರನಲ್ಲೂ ಉತ್ಸಾಹಕ್ಕೆ ಕಾರಣರಾಗಿದ್ದರು. ಪ್ರತಿಯೊಬ್ಬ ಆಟಗಾರನಲ್ಲೂ ನಮ್ಮಿಂದ ಇದು ಸಾಧ್ಯ ಎಂದು ನಂಬಿಕೆ ಬರುವಂತೆ ಮಾಡಿದ್ದರು. ತಂಡದಲ್ಲಿ ಸಚಿನ್ ಎರಡನೇ ಕೋಚ್ ರೀತಿ ಇದ್ದರು ಎಂದು ಸುರೇಶ್ ರೈನಾ ಹೇಳಿದ್ದಾರೆ.
ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್
ಈ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ಯುವರಾಜ್ ಸಿಂಗ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ್ದರು. ಟೀಮ್ ಇಂಡಿಯಾ ಈ ಟೂರ್ನಿ ಗೆಲ್ಲುವಲ್ಲಿ ಯುವರಾಜ್ ಪಾತ್ರ ಬಹಳ ದೊಡ್ಡದಿತ್ತು. ಅದೇ ಕಾರಣಕ್ಕೆ ಯುವರಾಜ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು.