ಏನೀ ಗಲಾಟೆ?
ಭಾರತ-ಇಂಗ್ಲೆಂಡ್ ಪಂದ್ಯದ ಬಗ್ಗೆ ಸಿಕಂದರ್ ಬಖ್ತ್ ಒಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್ನಲ್ಲಿ, '2019ರ ವಿಶ್ವಕಪ್ನಲ್ಲಿ ಪಾಕಿಸ್ತಾನವನ್ನು ಸ್ಪರ್ಧೆಯಿಂದ ತೆಗೆಯಬೇಕೆಂದು ಉದ್ದೇಶಪೂರ್ವಕವಾಗಿಯೇ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತಿದೆ ಎಂದು ಬೆನ್ ಸ್ಟೋಕ್ಸ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ನಾವಿದ್ದನ್ನು ಊಹಿಸಿದ್ದೆವು' ಎಂದು ಬರೆದುಕೊಂಡಿದ್ದರು.
ಸೊಹೈಬ್ ಖಾನ್ ತಿರುಗೇಟು
ಸಿಕಂದರ್ ಅವರ ತಲೆಬುಡವಿಲ್ಲದ ಟ್ವೀಟ್ಗೆ ಸೊಹೈಬ್ ಖಾನ್ ತಿರುಗೇಟು ನೀಡಿದ್ದಾರೆ. 'ಇಂಗ್ಲೆಂಡ್ ವಿರುದ್ಧ ಭಾರತ ಬೇಕೆಂದೇ ಸೋತಿದೆ ಎಂದು ಬೆನ್ ಸ್ಟೋಕ್ಸ್ ಎಲ್ಲಿ ಹೇಳಿದ್ದಾರೆ?' ಎಂದು ಸಿಕಂದರ್ ಅವರನ್ನು ಖಾನ್ ಮರು ಪ್ರಶ್ನಿಸಿದ್ದಾರೆ. ಸ್ಟೋಕ್ಸ್ 'ಆನ್ ಫೈರ್' ಎಂಬ ಪುಸ್ತಕ ಪ್ರಕಟಿಸಿ ಅದರಲ್ಲಿ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಪಂದ್ಯಗಳನ್ನು ವಿಶ್ಲೇಷಿಸಿದ್ದರು. ಇದೇ ವಿಶ್ಲೇಷಣೆಯನ್ನು ಸಿಕಂದರ್ ತಿರುಚಿದ್ದಾರೆ ಎಂದು ಸ್ಟೋಕ್ಸ್ ಆರೋಪಿಸಿದ್ದಾರೆ.
ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ
ಸೊಹೈಬ್ ಖಾನ್ ಟ್ವೀಟ್ ಮುಂದಿಟ್ಟು ಸಿಕಂದರ್ಗೆ ಪ್ರತಿಕ್ರಿಯಿಸಿರುವ ಸ್ಟೋಕ್ಸ್, 'ನಿಮಗದು ಸಿಗಲಾರದು. ಯಾಕೆಂದರೆ ನಾನಿದನ್ನು ಹೇಳೇಇಲ್ಲ. ಇದಕ್ಕೆ 'ಪದಗಳ ತಿರುಚುವಿಕೆ ಅಥವಾ 'ಕ್ಲಿಕ್ ಬೇಟ್' ಅಂತಾರೆ,' ಎಂದು ಖಾರವಾಗಿ ಬರೆದುಕೊಂಡಿದ್ದಾರೆ.
ಸಿಕಂದರ್ ಹಾಗಂದಿದ್ಯಾಕೆ?
2019ರ ವಿಶ್ವಕಪ್ ಟೂರ್ನಿಯ ಪ್ರಮುಖ ಪಂದ್ಯಗಳನ್ನು ಸೋತಿದ್ದ ಪಾಕ್ ತಂಡಕ್ಕೆ ಸೆಮಿಫೈನಲ್ ಪ್ರವೇಶದ ದಾರಿ ಮುಚ್ಚುತ್ತಾ ಬಂದಿತ್ತು. ಲೆಕ್ಕಾಚಾರದ ಆಧಾರದಲ್ಲಿ ಅಂದರೆ ಇಂಗ್ಲೆಂಡ್-ಭಾರತ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ ಪಾಕ್ಗೆ ಪ್ರಶಸ್ತಿ ಸುತ್ತಿನೆಡೆಗಿನ ದಾರಿ ತೆರೆದುಕೊಳ್ಳುವ ಸಾಧ್ಯತೆಯಿತ್ತು. ಆದರೆ ದುರದೃಷ್ಟವಶಾತ್ ಭಾರತ, ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲೇ ಟೂರ್ನಿಯ ಮೊದಲ ಸೋಲು ದಾಖಲಿಸಿತ್ತು. ಭಾರತ ಗೆದ್ದೇ ಗೆಲ್ಲುತ್ತದೆ ಎಂದು ನಿರೀಕ್ಷೆಯಲ್ಲಿದ್ದ ಭಾರತದ, ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.