5 ವರ್ಷದ ನಂತರ ವಿಸಿಯ ಅಂಗಳದಲ್ಲಿ ಟೆಸ್ಟ್ ಪಂದ್ಯ
ನಾಗ್ಪುರದಲ್ಲಿರುವ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂ ಐದು ವರ್ಷಗಳ ನಂತರ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿದೆ. ವಿಸಿಎ ಮೈದಾನದಲ್ಲಿ ಭಾರತ ತಂಡದ ಅಭ್ಯಾಸಕ್ಕಾಗಿ ಬಿಸಿಸಿಐ ವಿಶೇಷ ವ್ಯವಸ್ಥೆ ಮಾಡಿದೆ. ಆಟಗಾರರು ಇಲ್ಲಿನ ಸಂದರ್ಭಕ್ಕೆ ಹೊಂದಿಕೊಳ್ಳುವುದರ ಜೊತೆಗೆ ಕೆಂಪು ಚೆಂಡಿನೊಂದಿಗೆ ಅಭ್ಯಾಸ ಮಾಡಲಿದ್ದಾರೆ.
ಇಲ್ಲಿ ಇದುವರೆಗೂ 6 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳು ನಡೆದಿವೆ. ಭಾರತ 4 ಟೆಸ್ಟ್ ಪಂದ್ಯಗಳಲ್ಲಿ ಜಯ ಗಳಿಸಿದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಉಳಿದ ಒಂದು ಪಂದ್ಯದಲ್ಲಿ ಸೋಲನುಭವಿಸಿದೆ. 2017-18ರಲ್ಲಿ ಇಲ್ಲಿ ಭಾರತ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು, ಈ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 239 ರನ್ಗಳಿಂದ ಭಾರತ ಭರ್ಜರಿ ಜಯ ಸಾಧಿಸಿತ್ತು.
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತದತ್ತ ಪ್ರಯಾಣ ಆರಂಭಿಸಿದ ಆಸಿಸ್ ಆಟಗಾರರು
ಪ್ರಮುಖ ಆಟಗಾರರು ತಂಡಕ್ಕೆ ವಾಪಸ್
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡದ ಪ್ರಮುಖ ಆಟಗಾರರು ತಂಡಕ್ಕೆ ಮರಳಲು ಸಜ್ಜಾಗಿದ್ದಾರೆ. ಮದುವೆಯೆ ರಜೆಯಲ್ಲಿದ್ದ ಕೆಎಲ್ ರಾಹುಲ್ ಮತ್ತು ಅಕ್ಷರ್ ಪಟೇಲ್ ಟೆಸ್ಟ್ ಸರಣಿಗಾಗಿ ತಂಡಕ್ಕೆ ಮರಳಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ನಂತರ ವಿಶ್ರಾಂತಿಯಲ್ಲಿದ್ದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮುಂಬೈನಿಂದ ನಾಗ್ಪುರಕ್ಕೆ ತೆರಳಲಿದ್ದಾರೆ. ಫೆಬ್ರವರಿ 1ರಂದು ರವೀಂದ್ರ ಜಡೇಜಾ ಬೆಂಗಳೂರಿನಲ್ಲಿರುವ ಎನ್ಸಿಎನಲ್ಲಿ ಫಿಟ್ನೆಸ್ ಪರೀಕ್ಷೆಗೆ ಹಾಜರಾಗಲಿದ್ದು, ಫೆಬ್ರವರಿ 2ರಂದು ನಾಗ್ಪುರಕ್ಕೆ ತೆರಳಲಿದ್ದಾರೆ.
ಆಸ್ಟ್ರೇಲಿಯಾ ತಂಡ ಕೂಡ ಫೆಬ್ರವರಿ 1ರಂದು ಭಾರತಕ್ಕೆ ಆಗಮಿಸಲಿದ್ದು, ಬೆಂಗಳೂರಿನಲ್ಲಿ ಕಠಿಣ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ಭಾರತಕ್ಕೆ ಈ ಸರಣಿ ಮಹತ್ವ ಯಾಕೆ?
ಭಾರತ ತಂಡಕ್ಕೆ ಹಲವು ವಿಚಾರಗಳಿಂದ ಈ ಟೆಸ್ಟ್ ಸರಣಿ ಭಾರಿ ಮಹತ್ವದ್ದಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಬೇಕೆಂದರೆ ಭಾರತ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಗೆಲ್ಲಬೇಕಿದೆ. 2-0 ಅಥವಾ 3-1 ಅಂತರದಲ್ಲಿ ಸರಣಿಯನ್ನು ಗೆದ್ದರೆ ಭಾರತ ಜೂನ್ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಲಿದೆ.
ಕಳೆದ ಮೂರು ಸರಣಿಗಳನ್ನು ಗೆದ್ದಿರುವ ಭಾರತ, 2004ರಿಂದ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಸೋತಿಲ್ಲ. ಪ್ರತಿಷ್ಠೆಗಾಗಿ ಈ ಸರಣಿಯನ್ನು ಗೆಲ್ಲಬೇಕಿದೆ. ಸದ್ಯ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿರುವ ಭಾರತ ಈ ಸರಣಿಯನ್ನು ಗೆದ್ದರೆ ನಂಬರ್ 1 ಪಟ್ಟ ಅಲಂಕಿರಸಲಿದೆ.
ಟೆಸ್ಟ್ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕಟ್, ಸೂರ್ಯಕುಮಾರ್ ಯಾದವ್.